Saturday, November 22, 2014

ಅಮ್ಮ ಹೇಳದೆ ಹೇಳಿ ಹೋದ ಗೀತಾರಹಸ್ಯ ...

ನೀ ಜಗವ ಬಿಟ್ಟ ಘಳಿಗೆ
ನಾನು ಹೊಸ ಜಗತ್ತು ಕಂಡೆ
ಮಣ್ಣು ಸೇರುವ ಮುನ್ನ 
ತಾಕಿದ ನಿನ್ನ ತಣ್ಣನೆಯ ಕೈಯಲ್ಲಿ
ಲೋಕದ ತಣ್ಣನೆಯ ಭಾವಗಳ ಅನುಭವಕ್ಕೆ ತಂದುಕೊಂಡೆ
ನಾನು ತುಸು ಜಾಸ್ತಿಯೇ ಬುದ್ಧನಾಗಿಬಿಟ್ಟೆ
ನಂಟು , ನೆಂಟಸ್ತನ
ಎಲ್ಲದರ ನಕಲಿತನವನ್ನ ಅಸಲಿ ದೃಷ್ಟಿಯಲ್ಲಿ ಕಂಡೆ

ಒಳ್ಳೆಯ ಲೆಕ್ಕ ಕಲಿಸಿ ಹೋದೆ
ಎಲ್ಲವನ್ನೂ ಪ್ರೀತಿಸುವ ಎಲ್ಲವನ್ನೂ ನಿರಾಕರಿಸುವ
ಸಂತೆಯಲ್ಲೂ ಏಕಾಂತದ ಸುಖವ ದಕ್ಕಿಸಿಕೊಳ್ಳುವ
ಏಕಾಂತದಲ್ಲಿ ಸಂಭ್ರಮಿಸುವ
ದಿವ್ಯ ಧ್ಯಾನವ ಕಲಿಸಿ
ಒಂದೊಳ್ಳೆ ಸ್ವಾರ್ಥಿಯಾಗಿ ನನಗಾಗಿ ಬದುಕುವ
ಶಕ್ತಿಯನ್ನ ಕೊಟ್ಟು ಹೋದೆ

ಎಲ್ಲೇ ಇದ್ದರೂ ಬದುಕಬಲ್ಲೆ
ಯಾರ ಹಂಗಿಲ್ಲದೆ
ಯಾವ ಭಯವಿಲ್ಲದೆ
ನಿರೀಕ್ಷೆಯಿರದೆ
ನಿರಾಸೆಯಿರದೆ
ನೋವಿರದೆ
ಯಾರನ್ನೂ ದೂರದೆ
ನನ್ನನ್ನ ನಾನು ಕಳೆದುಕೊಳ್ಳದೆ .

ಏನೆಂದು ಹೇಳಲಿ
ಎಲ್ಲವನ್ನೂ ಕೊಟ್ಟು ಹೋದೆ
ದೇವರು ವರದೊಡನೆ ಶಾಪವನ್ನೂ ಸೇರಿಸಿ ಕೊಟ್ಟಂತೆ
ನಿನ್ನನ್ನು ನನ್ನಿಂದ ಕಿತ್ತುಕೊಂಡು
ಆದದ್ದೆಲ್ಲ ಒಳ್ಳೆಯದಕ್ಕೆ ಬಿಡು
ಬದುಕಿಗಿಂತ ದೊಡ್ಡದು ಯಾವುದಿದೆ ಹೇಳು
ಕತ್ತಲಲ್ಲೂ ಬೆಳಕು ಕಾಣಬೇಕು
ನೀ ಹೋದೆ
ನಾ ಗೆದ್ದೆ ಅಮ್ಮ

Friday, November 7, 2014

ಚುಟುಕುಗಳು ಒಂದಿಷ್ಟು :) :) :)...





ಬದಲಾಗುವುದೆಂದರೆ
ಗಿಡ ಹೋಗಿ ಮರ
ಹೊಳೆ ಹೋಗಿ ಕಡಲು
ಗೋಸುಂಬೆ ರೀತಿ
ಹಸಿರು ಹೋಗಿ ಹಳದಿಯಲ್ಲ ..
**********
ಕಳೆದಿರುಳು ಮಳೆ ಸುರಿದು ಹೋಯಿತು
ಮನದ ಸೂರು ಬಿಕ್ಕಳಿಸಿ
ತೊಟ್ಟಿಕ್ಕುತಿದೆ ಇನ್ನೂ ನಿನ್ನ ನೆನಪಾಗಿ .
ಮತ್ತೆ ಮೋಡಗಟ್ಟುತಿದೆ ಮೇಲೆ
ಬದುಕೋ ಆಸೆಯೇ ಆವಿಯಾಗಿ ...

*******
ಆತ ಗೆದ್ದ ರಾಜ್ಯದಿ
ನಾನೀಗ ಸೋತ ರಾಜ......
*********
ನೀ ಅಕಾಲ ಮಳೆಯಂತೆ .
ಬೇಕೆಂದಾಗ ಬಾರದವಳು .
ನೀನಾಗಿ ನೀನೇ ಬಂದ ಸಮಯದಿ
ಭರಿಸಲಾಗದವಳು.
**********
ಎಲ್ಲವೂ ತಣ್ಣಗಿರಲೆಂದುಕೊಂಡರೆ ಹೇಗೆ ಸಾಧ್ಯ?
ಆದಷ್ಟು ತಣ್ಣಗಿರುವುದು ಬದುಕ ಗುರಿ.
ಬಿಸಿಯೇ ಬದುಕ ಚಿಹ್ನೆ.
ಎಲ್ಲ ತಣ್ಣಗಾಗಿಹೋಯಿತೆಂದರೆ
ಅದು ಕೊನೆಯಲ್ಲಿ ಮಾತ್ರ...