Saturday, August 25, 2012

ಸಭ್ಯ ಪೋಲಿ ಕವನ ...

ಕಾಳನಿಶಿ ನಶೆಯ ಹಬ್ಬಿಸಿ ಬಾನ ತಬ್ಬಿದೆ 
ಪೂರ್ಣಶಶಿ ಬಿಂಬ ಮೂಡಿದೆ 
ಬಾ ಗೆಳತಿ 
ಪ್ರಣಯ ಕಡಲೊಳು 
ತನುವ ನೌಕೆ ಇಳಿಬಿಟ್ಟು 
ಅನಂಗರತಿ ಜೋಡಿಯ ಅನಾದಿ ಜಾಡಲಿ 
ಅನಂಗನಾ ರತಿ ನೀನಾಗಿ 
ಉಬ್ಬು ತಗ್ಗುಗಳ 
ಅನಾಮಿಕ ತಿರುವುಗಳ ತಾಕಿ 
ತೇಲಿ ತೇಲಿ ಅಲ್ಲಲ್ಲಿ ಮುಳುಗಿ 
ಈಜಿ ಈಜಿ 
ರಸಕಡಲ  ಸೀಳಿ 
ಬ್ರಹ್ಮಾನಂದದ ದಾರಿ ಹುಡುಕುವ 
ಉನ್ಮತ್ತ ಧ್ಯಾನದ ಉತ್ತುಂಗ  ಸೇರುವ 

ಬಾ ಗೆಳತಿ ಬೇಗ ಬಾ 
ಎಲ್ಲ ಎಲ್ಲೆಯ  ಮೀರಿ ಜಗದೆಲ್ಲ ಬೇಲಿಯ ದಾಟಿ 
ಮನದ ದುಗುಡ ದುಮ್ಮಾನ ಬಿಗುಮಾನವೆಲ್ಲ 
ಬೆವರಾಗಿ ಹನಿಯಲಿ 
ಕಿಬ್ಬೊಟ್ಟೆಯಾಳದ ಕನವರಿಕೆಯೆಲ್ಲ 
ಬಚ್ಚಿಟ್ಟ ಆಸೆಗಳೆಲ್ಲ ತಡೆಹಿಡಿದ ಕಳ್ಳಕನಸುಗಳೆಲ್ಲ 
ಹಿರಿಕಿರಿಯ ಸುಖದ ಝೇಂಕಾರದಲೆಯಾಗಿ 
ಸುತ್ತಲ ನೀರವ ಕದಡಲಿ 


ರೋಮ  ರೋಮದಿ ಮಿಂಚು ಚಲಿಸಿ 
ನಡೆಯಲಿ ತನು ಮಥನ 
ಬಾಳ ನಿಜ ಸುಧೆಗಾಗಿ 
 ಬಹಿರಂಗ ಅಂತರಂಗದೊಳು ಲೀನವಾಗಿ 
ಜೀವ ರಸ ಚಿಮ್ಮಿ 
ಸೃಷ್ಟಿ ಗುಟ್ಟು ಕತ್ತಲಲಿ ಬಯಲಾಗಲಿ
ಇರುಳು ಬೆಳಕಾಗಲಿ



 

Monday, August 20, 2012

ಫೇಸ್ ಬುಕ್ ಸ್ಟೇಟಸ್ ಬಾರಿನಿಂದ ಒಂದಿಷ್ಟು

ಪೋಲಿ ಚಿತ್ರಗಳು, ಪೋಲಿ ಪುಸ್ತಕಗಳು, ಪೋಲಿ ಮೆಸ್ಸೇಜುಗಳು.ಇವರೆಲ್ಲ ನಿಜಕ್ಕೂ ನತದೃಷ್ಟರು ..ನಾವು ಇವುಗಳ ಸಮ್ಮುಖದಲ್ಲಿ ಎಲ್ಲದರಕ್ಕಿಂತ ಹೆಚ್ಚು ಖುಷಿಯಿಂದ ,ತನ್ಮಯತೆಯಿಂದ ತಲ್ಲೀನರಾಗುತ್ತೇವೆ .ಎಲ್ಲಿಯೂ ಸಿಕ್ಕದ ಧ್ಯಾನಸ್ಥ ಸ್ಥಿತಿಯನ್ನು ನಾವಿಲ್ಲಿ ಕಂಡುಕೊಳ್ಳುತ್ತೇವೆ ..ಆದರೂ ಇವು ಎಂದಿಗೂ ನಮ್ಮ ಸ್ಟೇಟಸ್ ಬಾರಿನಲ್ಲಿ ಜಾಗ ಪಡೆದುಕೊಳ್ಳುವುದಿಲ್ಲ .ನಮ್ಮ ಲೈಕ್ ಲಿಸ್ಟಿನಲ್ಲಿ ,ಫೇವರಿಟ್ ಲಿಸ್ಟುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ .ಒಳಮನೆಯಲ್ಲೇ ಉಳಿದುಬಿಡುತ್ತವೆ ಮುಖವಾಡದ ಹೊಸ್ತಿಲು ದಾಟದೆ .ಅದು ಸರಿಯೇ ಬಿಡಿ.ಎಷ್ಟೆಂದರೂ ನಾವು ಸುಸಂಸ್ಕೃತ ಸಮಾಜದ ಶುದ್ಧ ಸಭ್ಯರು :) ;) ;)

..............................................



ಮಹಾ ಜ್ಞಾನಿ. ಚಿಂತಕ, ವಿಚಾರವಾದಿ, ಸಂವೇದನಾ ಶೀಲ ಬರಹಗಾರ, ಎಂದೆಲ್ಲ ಅವನಿಗೆ ಹೇಳಬಹುದಿತ್ತು. .ಮಹಾಕಾವ್ಯ ,ತತ್ವಶಾಸ್ತ್ರ, ಅದೂ ಇದೂ. ಅಕ್ಷರ ರೂಪದಲ್ಲಿರುವ ಎಲ್ಲವನ್ನೂ ಆತ ಓದಿಕೊಂಡಿದ್ದ.ಎಲ್ಲದರ ಬಗ್ಗೆ ವಿದ್ವತ್ಪೂರ್ಣವಾಗಿ ಹೇಳಬಲ್ಲವನು ,ಬರೆಯಬಲ್ಲವನು ಆಗಿದ್ದ .ಎಲ್ಲವನ್ನೂ ಒಂದು ಬಗೆಯ ಹೆಮ್ಮೆಯಲ್ಲೇ ಮಾಡಿಕೊಂಡಿದ್ದ .ಇಷ್ಟೆಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದರೂ ಆತ ಸದಾ ಅಸುಖಿ. ಬದುಕನ್ನು ಚೆಂದಗೆ ಕಟ್ಟಿಕೊಳ್ಳುವಲ್ಲಿ ಸೋತ. ಯಾವ ಜ್ಞಾನವೂ ಅವನ ನೆರವಿಗೆ ಬರಲಿಲ್ಲ. 
ಎಲ್ಲ ಜ್ಞಾನವೂ ಅವನಿಗೆ ಹೆಮ್ಮೆಯಷ್ಟೇ ಆಗಿತ್ತು..ತಿಳಿದುಕೊಂಡ ಖುಷಿ ಎಂದಿಗೂ ಆಗಲಿಲ್ಲ ..ಎಲ್ಲವೂ ತಲೆಯಲ್ಲೇ ಉಳಿಯಿತು.ಹೃದಯಕ್ಕೆ ಇಳಿಯಲಿಲ್ಲ. ಆತ ಮಂಕುತಿಮ್ಮನ ಕಗ್ಗವನ್ನೂ ಓದಿದ್ದ .ಅದರ ಬಗ್ಗೆಯೇ ಒಂದು ವಿಮರ್ಶೆ ಕೂಡ ಬರೆದ. ‘ಎಲ್ಲರೊಳಗೊಂದಾಗು ಮಂಕುತಿಮ್ಮ ‘ ಎಂಬ ಕಗ್ಗದ ಸಾಲು ಆತನಿಗೆ ವಿಮರ್ಶೆಗೊಂದು ವಿಷಯವಾಯಿತು ಅಷ್ಟೇ. , ಬದುಕು ಕಟ್ಟಿಕೊಳ್ಳುವ ಸರಕಾಗಲಿಲ್ಲ :) :) ಯಾವುದೋ ಅರ್ಥವಾಗದ ಸಾಹಿತ್ಯಕ್ಕಿಂತ,ಒಣ ಚರ್ಚೆಗಿಂತ,ವಿಮರ್ಶೆಗಿಂತ ,ಅಮ್ಮ ಹಾಡುವ ಲಾಲಿ ,ಅಜ್ಜ ಹೇಳಿದ ಕಥೆ, ಅಪ್ಪ ಹಂಚಿಕೊಂಡ ಕಥೆವ್ಯಥೆ , ನಮ್ಮದೇ ಆದ ದಾರಿಯಲ್ಲಿ ನಮಗೆ ಸಿಕ್ಕ ಅನುಭವ ಇವುಗಳೇ ಮೇಲು :) :)

...................................................


ಕೆಲವಷ್ಟು ಸಂಗತಿಗಳು ಲೈಫಿನಲ್ಲಿ ಮೆಗಾ ಸೀರಿಯಲ್ ರೀತಿ. ಕಥೆ ಹಳ್ಳ ಹಿಡಿದು ಹೋಗಿರುತ್ತೆ .ಅಥವಾ ಅಸಲಿಗೆ ಕಥೆಯೇ ಇರುವುದಿಲ್ಲ. ಚಿತ್ರಕಥೆಯಲ್ಲೇ ನಿಭಾಯಿಸಿಕೊಂಡು ಹೋಗಬೇಕು .ಶುರುವಾದ ತಪ್ಪಿಗೆ ಸಾಗಬೇಕು. ನಿಲ್ಲಿಸಬಾರದು ಎಂಬ ಕಾರಣಕ್ಕೆ ನಡೆಸಿಕೊಂಡು ಹೋಗಬೇಕು :) :) ;)

..................................................

ಭಾರತಕ್ಕೆ ನಾಳೆ ಸ್ವಾತಂತ್ರ್ಯ ಸಿಕ್ಕ ದಿನ.ನನಗೆ ಅದನ್ನು ಕಳಕೊಂಡ ದಿನ ಎಂದ. ಯಾಕಪ್ಪ ಏನು ಸಮಾಚಾರ ಎಂದೆ.ನಾಳೆ ನನ್ನ Marriage Anniversary ಮಾರಾಯ ಎಂದು ನಕ್ಕ.. :) ;)



..................................................


ಹಿಂದೊಮ್ಮೆ ಕೈಯಲ್ಲಿದ್ದ MBA ಬಿಟ್ಟು ಮಾಧ್ಯಮ ಕ್ಷೇತ್ರದಲ್ಲಿ ಕೆಲಸದ ಕನಸು ಕಂಡಿದ್ದೆ. ದಕ್ಕಲಿಲ್ಲ.ಹಣೆಯಲ್ಲಿ ಇದು ಬರೆದಿಲ್ಲ ಎಂದುಕೊಂಡು ನಿರಾಶನಾಗಿದ್ದೆ.ಈಗೀಗ ಮಾಧ್ಯಮ ಜಗತ್ತಿನ ವಿದ್ಯಮಾನಗಳನ್ನು ನೋಡುತ್ತಿದ್ದರೆ ನನ್ನ ಹಣೆಬರಹ ಸರಿಯಾಗಿಯೇ ಇತ್ತೆಂದು ಅನಿಸುತ್ತೆ. ವ್ಯಕ್ತಿಗತ ನಿಂದನೆ, ಸ್ವಪ್ರತಿಷ್ಠೆ ,ಮಿತಿ ಮೀರಿದ ರಾಜಕೀಯ. ಅಲ್ಲಿ ಏನುಂಟು ಏನಿಲ್ಲ. ‘ನಿನ್ನ ಕ್ರಿಯಾಶೀಲತೆ ವೃತ್ತಿಯಾಗುವುದು ಬೇಡ.ಪ್ರವೃತ್ತಿಯಾಗಿಯೇ ಇರಲಿ. ಆಗ ನೀನೂ ಉಳೀತಿ ,ನಿನ್ನ ಕ್ರಿಯಶೀಲತೆಯೂ ಉಳಿಯುತ್ತೆ. 
ಈ ಮಾಧ್ಯಮದ ಸಹವಾಸ ನಮ್ಮ ಕಾಲಕ್ಕೇ ಆಗಿಹೋಗಲಿ .ನಿನಗಿದು ಬೇಡ.ಅವಕಾಶ ಹುಡುಕಿ ಹೋಗಬೇಡ .ಸಿಕ್ಕದ್ದನ್ನು ಬಿಡಬೇಡ ‘ಎನ್ನುವ ಅರ್ಥದಲ್ಲಿ ಹೇಳಿದ ಗುರುವಿನ ಮಾತು ಈಗಲೂ ಆಗಾಗ ನೆನಪಿಗೆ ಬರುತ್ತೆ. ಈಗ ಆಗೊಮ್ಮೆ ಈಗೊಮ್ಮೆ ತಲೆ ಕೆಟ್ಟು ಕೈ ತುರಿಸಿದರೆ ಎರಡು ಸಾಲು ಗೀಚಲು ಸ್ಟೇಟಸ್ ಬಾರ್ ಇದೆ. ತುರಿಕೆ ಜಾಸ್ತಿಯಾದರೆ ಯಥಾನುಶಕ್ತಿ ಕೆರೆದುಕೊಳ್ಳಲಿಕ್ಕೆ ನನ್ನದೇ ಆದ ಬ್ಲಾಗ್ ಅಂಗಳವಿದೆ.ಬದುಕಿನ ಬಗ್ಗೆ ಯಾವುದೇ ದೂರುಗಳಿಲ್ಲ.ನಾನು ಪರಮಸುಖಿ. ;) :)


...................................................


ಒಂದ್ ಕಾಲ್ ಕಾಲು ..ಎರಡ ಕಾಲ್ ಅರ್ಧ .ಮೂರಕ್ಕೆ ಮುಕ್ಕಾಲು ...ನಾಲ್ಕ್ ಕಾಲ್ ಒಂದೇ ..ಸಾಕು ಬಿಡು ..ನನಗೆ ಗೊತ್ತು ನೀನು ಪಕ್ಕಾ ಲೆಕ್ಕಾಚಾರದ ಮನುಷ್ಯ ಅಂತ .ಇದು ಲೆಕ್ಕದ ಸಮಯವಲ್ಲ .ಮಂಚಕ್ಕೆ ಮೂರೇ ಕಾಲು ಅಂದಳು ಮೆಲ್ಲಗೆ ನಕ್ಕು , ಬೆರಳಲ್ಲಿ ನೆಲವ ಗೀರಿ ಮಳ್ಳಿ. :) :) ಅಲ್ಲಿಗೆ ನನ್ನ ಲೆಕ್ಕ ತಪ್ಪಿತು. ನಾಲ್ಕ್ ಕಾಲ್ ಎರಡೂ ? ಮೂರೂ.. ? :) :) :


....................................................

ಸನ್ನಿ ಲಿಯೋನ್..ಇತ್ತೀಚಿಗೆ ನಾನು ಕೇಳಿದ ಹೆಸರು.. ಇವಳುತುಂಬ ಫೇಮಸ್ಸು .ಆದರೆ ನನಗೆ ಮಾತ್ರ ಗೊತ್ತಿಲ್ಲ...ಇಷ್ಟೊಂದು ದಡ್ಡ ಆಗಬಾರದು. ಸಾಮಾನ್ಯ ಜ್ಞಾನ ಬೆಳೆಸ್ಕೋಬೇಕು ಅಂತ ,ಅವಳು ಯಾರು ,ಏನು ಎತ್ತ ,ಏನವಳ ಸ್ಟೋರಿ ಕಥೆ ಎಂದು ಹುಡುಕಿಕೊಂಡು ಹೊರಟೆ ..ದೇವರೇ !!..ಬ್ರಹ್ಮಾಂಡವನ್ನೇ ಕಂಡೆ...ಮಹಾಮಹಿಮಳು ಅವಳು.ಪುಣ್ಯಾತಗಿತ್ತಿ .ಅದಕ್ಕೆ ದೊಡ್ಡವರು ಹೇಳಿದ್ದು ಕೆಲವಷ್ಟರ ಮೂಲ ಹುಡುಕಬಾರದು ಅಂತ ;) :) ;) ಸಣ್ಣವರು ನಾವು..ಹುಡುಕೋದೇ ನಮ್ ಬಿಸಿನೆಸ್ಸು ಅಂತ ಹೊರಟು ಎಲ್ಲೋಹೋಗಿ ವಾಪಸ್ಸು ಬರುವ ದಾರಿನೇ ಮರ್ತು ಬಿಡ್ತೀವಿ :) :) ಏನ್ ಮಾಡನ ಹೇಳಿ ?


......................................................


ಕೈಯಲ್ಲಿ ಪೆನ್ ಇದ್ದರೆ ಸಾಲದು.ತಲೆಯಲ್ಲಿ ಇಂಕ್ ಇರಬೇಕು  :) :)

Sunday, August 12, 2012

ಆ ಒಂದು ದಿನದ ಡೈರಿ ; ಮಾಜಿ ಡಾನ್ ಮತ್ತವನ ಸಹಚರರು ...



ಅವತ್ತು ಭಾನುವಾರ. ನನ್ನ ಎಲ್ಲ ವಾರಗಳ  ಕೊನೆಯ ಎರಡು ದಿನಗಳನ್ನು ಆಗ ಸ್ಟುಡಿಯೋ ಭೇಟಿಗೆ ಮೀಸಲಿಡುತ್ತಿದ್ದೆ. ವಾರದ ಮೊದಲಿನ ಐದು ದಿನಗಳು ಕಂಪನಿಯಲ್ಲಿನ ನನ್ನ ವೃತ್ತಿಗೆ ಹಾಗು ಉಳಿದ ಇನ್ನೆರೆಡು ದಿನಗಳು ಸಿನೆಮಾ ಎಂಬ ನನ್ನ ಪ್ರವೃತ್ತಿಗೆ ಎಂಬ ಲೆಕ್ಕಾಚಾರ. ಸ್ಟುಡಿಯೋದಲ್ಲಿ ನನಗೆ ಸಿಕ್ಕ ಅಪರೂಪದ ಅನುಭವಗಳು ಅನೇಕ.ಅಂಥಹ ಅಪರೂಪದ ಅನುಭವಗಳಲ್ಲಿ ಒಂದನ್ನು ಈ ದಿನ ನಿಮ್ಮ ಮುಂದಿಡುತ್ತಿದ್ದೇನೆ.


ಆ ಭಾನುವಾರ ಕೂಡ ಎಂದಿನಂತೆ ಸ್ಟುಡಿಯೋ ಗೆ ಹೋಗಿದ್ದೆ. ಮ್ಯೂಸಿಕ್ ಡೈರೆಕ್ಟ್ರು ಯಾರೊಡನೆಯೋ ಒಂದು ಹೊಸಾ ಸಿನೆಮಾದ ಬಗ್ಗೆ ಮಾತನಾಡುತ್ತ ಕುಳಿತಿದ್ದರು.ಅಂತ ಸಮಯಗಳಲ್ಲಿ ನನಗೆ ಅಥವಾ ಇನ್ಯಾರಿಗೂ ಅವರ ರೂಮಿಗೆ ಎಂಟ್ರಿ ನಿಷಿದ್ಧ. ಆ ಸೂಕ್ಷ್ಮಗಳೆಲ್ಲ ಮೊದಲೇ ತಿಳಿದಿದ್ದರಿಂದ ನಾನು ಪಕ್ಕದ ರೂಮಿನಲ್ಲಿ ನಾನು ತಂದಿಟ್ಟುಕೊಂಡಿದ್ದ ಪೇಪರ್ ಬಿಡಿಸಿ ಓದುತ್ತಾ ಕುಳಿತೆ.ನನ್ನೆದುರಿನ ಸೋಫಾದಲ್ಲಿ ಇಬ್ಬರು ಕುಳಿತಿದ್ದರು. ನಾನು ಬಂದು ಕೂತಾಗ ಒಮ್ಮೆ ಮೇಲಿನಿಂದ ಕೆಳಗಿನ ತನಕ ನಿರ್ಭಾವುಕವಾಗಿ ನೋಡಿದರು. ನಾನೂ ಅಷ್ಟೇ ನಿರ್ಭಾವುಕವಾಗಿ ಅವರನ್ನೊಮ್ಮೆ ನೋಡಿ ಕುಳಿತಿದ್ದೆ. ಸ್ವಲ್ಪ ಸಮಯದ ನಂತರ ಆ ಇಬ್ಬರಲ್ಲಿ ಒಬ್ಬ ಸಾರ್ ಎಂದು ಬಳಿಗೆ ಬಂದ.ಏನು ಎಂದು ಕೇಳಿದೆ.ಪೇಪರ್ ಬೇಕಿತ್ತು ಒಮ್ಮೆ ಕೊಡಿ ಎಂದು ದೇಶಾವರಿ ನಗೆ ನಕ್ಕ.ನಾನೂ ನಕ್ಕು ಅದಕ್ಕೇನು ತಗೋಳಿ ಸಾರ್ ಎಂದು ಕೊಟ್ಟೆ.ಅಲ್ಲಿಗೆ ನಮ್ಮಲ್ಲಿ ಒಂದು ಬಗೆಯ ಸಲುಗೆ ಅನಾಯಾಸವಾಗಿ ಚಿಗಿತುಕೊಂಡಿತ್ತು.’ಸಾರ್ ಪೇಪರ್ ನಿಮ್ಮ ಬಳಿಯೇ ಇರಲಿ.ನಾನು ಊಟ ಮುಗಿಸಿ ಬರುತ್ತೇನೆ ಎಂದು ಎದ್ದು ಹೊರಟೆ.ಸರಿ ನೀವು ಆರಾಮವಾಗಿ ಊಟ ಮುಗಿಸಿ ಬನ್ನಿ ಬಾಸ್ .ನಾವಿಲ್ಲೇ ಇರುತ್ತೇವೆ ಎಂದು ಮತ್ತೊಮ್ಮೆ ನಕ್ಕು ಕೈ ಕುಲುಕಲು ಕೈ ಮುಂದೆ ಮಾಡಿದ. ಮೊದಲು ಅವನಿಗೆ ಕೊನೆಗೆ ಜೊತೆಗಿದ್ದ ಇನ್ನೊಬ್ಬನಿಗೂ ಕೈಕೊಟ್ಟು ನಾನು ಊಟಕ್ಕೆ ಹೊರಟೆ.

   ಊಟ ಮುಗಿಸಿ ಬರುವಷ್ಟರಲ್ಲಿ ಸ್ಟುಡಿಯೋಗೆ  ಹತ್ತಿ ಹೋಗುವ ಮೆಟ್ಟಿಲ ಬಳಿ ಒಬ್ಬ ನಿಂತಿದ್ದ.ಅವನು ಕೂಡ ಒಮ್ಮೆ ನನ್ನನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ. ಅವನ ಕಣ್ಣಲ್ಲಿ ಸಣ್ಣಗೆ ಒಂದು ಶಂಕೆ ಸುಳಿದು ಹೋಗಿದ್ದನ್ನು ಗಮನಿಸಿ ನಾನು ಮೆಟ್ಟಿಲೇರಿ ಮೇಲೆ ಬಂದುಬಿಟ್ಟೆ. ಡೈರೆಕ್ಟಾರ್ ರೂಂ ಪಕ್ಕದ,ನಾನು ಮೊದಲು ಹೇಳಿದ ರೂಮಿನೆಡೆ ಒಮ್ಮೆ ನೋಡಿದೆ.ಆ ಇಬ್ಬರು ಅಲ್ಲೇ ಇದ್ದರು.ನನ್ನನ್ನೊಮ್ಮೆ ನೋಡಿ ಕೈ ಬೀಸಿ ನಕ್ಕರು.ಮತ್ತೆ ನಾನೂ ಒಮ್ಮೆ ನಕ್ಕು ನೀರು ಕುಡಿಯಲೆಂದು ಸ್ಟುಡಿಯೋ ದ ಇನ್ನೊಂದು ಭಾಗಕ್ಕೆ ಬಂದೆ.ಅಲ್ಲಿ ಇನ್ನೊಬ್ಬ ಕಂಡ.ಆತ ಅತ್ತಿಂದಿತ್ತ ಸುಮ್ಮನೆ ಮತ್ತದೇ ನಿರ್ಭಾವುಕತೆಯಲ್ಲಿ  ಗಸ್ತು ತಿರುಗುವನಂತೆ ಓಡಾಡಿಕೊಂಡಿದ್ದ.ಆಗೊಮ್ಮೆ ಈಗೊಮ್ಮೆ ಸ್ಟುಡಿಯೋದ ಹಿಂಭಾಗದ ಜಾಗವನ್ನ ಮೇಲಿನಿಂದಲೇ ಗಮನಿಸುತ್ತಿದ್ದ.ಯಾಕೋ ಸ್ಟುಡಿಯೋ ಎಂದಿನಂತಿಲ್ಲ  ಎಂದುಕೊಂಡು ನಾನು ಮತ್ತೆ ಡೈರೆಕ್ಟಾರ್ ರೂಂ ಪಕ್ಕದ ರೂಮಿನೆಡೆ ಹೊರಟೆ.

   ಅಲ್ಲೊಂದು ಶಾಕ್ ನನಗಾಗಿ ಕಾದಿತ್ತು. ರೂಮಿಗೆ ಹೋಗುವ ಬಾಗಿಲಲ್ಲಿ ಒಬ್ಬ ನನ್ನನ್ನು ತಡೆದ. ಜೊತೆಗೆ ಅಷ್ಟು ಹೊತ್ತು ನನ್ನೆದುರು ಕುಳಿತು ನನ್ನಿಂದಲೇ ಪೇಪರ್ ತೆಗೆದುಕೊಂಡು ಓದಿದ ಆ ಇಬ್ಬರೂ ಕೂಡ ಧಾವಂತದಲ್ಲಿ ಎದ್ದು ನನ್ನ ಬಳಿ ಬಂದು ಬಿಟ್ಟರು. ಜೊತೆಗೆ ಇನ್ನಿಬ್ಬರು. ಎಲ್ಲಿದ್ದರೋ ಗೊತ್ತಿಲ್ಲ.ಅವರೂ ಬಂದು ನನ್ನ ಸುತ್ತ ನಿಂತು ಬಿಟ್ಟರು. ರೂಮ್ ಒಳಗಿನಿಂದ ಯಾವುದೋ ಒಂದು ಧ್ವನಿ ಅವರಲ್ಲಿ ಒಬ್ಬನನ್ನು ಕರೆಯಿತು.ಒಳಗೆ ಹೋಗಿ ಬಂದ ಆತ ನನ್ನನ್ನು ಒಳಗೆ ಬರುವಂತೆ ಕರೆದ. ಅಲ್ಲಿ ನನಗೆ ಇನ್ನೊಂದು ದೊಡ್ಡ ಶಾಕ್ ಕಾದಿತ್ತು.

ಅವರು ಮಾಜಿ ಡಾನ್. ನಾನು ಅವರೆದುರು ನಿಂತಿದ್ದೆ.ಹೊರಡಲಿಕ್ಕೆ ಅನುವಾಗಿ ಸ್ಟುಡಿಯೋ ರೆಕಾರ್ಡಿಂಗ್ ರೂಮಿನಿಂದ ಹೊರಬಂದು ನಾನು ಮೊದಲು ಕುಳಿತಿದ್ದ ರೂಮಿಗೆ ಬಂದು ಕೂತಿದ್ದರು.ಜೊತೆಗೆ ನನ್ನ ಡೈರೆಕ್ಟ್ರು. ‘ಯಾರು ನೀನು’ ಎಂದು ಗಂಭೀರವಾಗಿ  ಕೇಳಿದರು. ಪಕ್ಕದಲ್ಲಿದ್ದ ಡೈರೆಕ್ಟ್ರು ತಡಮಾಡದೆ ನನ್ನ ಸಹಾಯಕ್ಕೆ ಬಂದರು .’ಅವನು ನಮ್ಮವನೇ ಸಾರ್. ಹಾಡು ಬರೀತಾನೆ’ ಎಂದು ಹೇಳಿದಾಗ ಡಾನ್ ತಣ್ಣಗಾದರು.ಗಂಭೀರ ಮುಖದಲ್ಲಿ ಮಂದಹಾಸ ಮೂಡಿತು. ಬನ್ನಿ ಕೂತುಕೊಳ್ಳಿ ಎಂದು ಕೈ ಕುಲುಕಿದರು. ಅವರು ಅಷ್ಟು ಹೇಳುತ್ತಿದ್ದಂತೆ ಅಲ್ಲಿದ್ದ ಅವರ ಬೆಂಗಾವಲಿನ ಪಡೆಯ  ಅಷ್ಟೂ ಮಂದಿ ‘ಸಾರೀ ಸಾರ್’ ಎಂದು ಹೇಳಿ ನಕ್ಕು ಹೋದರು.ಈಗ ರೂಮಿನಲ್ಲಿ ನಾನು, ಡೈರೆಕ್ಟ್ರು ಮತ್ತು ಮಾಜಿ ಡಾನ್ ಅಷ್ಟೇ. ಸ್ವಲ್ಪ ಹೊತ್ತು ಅವರು ಸಿನೆಮಾದ ಹಾಡುಗಳ ಬಗ್ಗೆ ಮಾತಾಡಿಕೊಂಡರು.ನಾನು ಸುಮ್ಮನೆ ನೋಡುತ್ತಾ ಕುಳಿತಿದ್ದೆ. ಮಾತಿನ ನಡುವೆ ಕೆಲವೊಮ್ಮೆ ಮೌನ ಆಗೊಮ್ಮೆ ಈಗೊಮ್ಮೆ ಇಣುಕುತ್ತಿತ್ತು. ಜೀವನದಲ್ಲಿ ಮೊದಲ ಬಾರಿಗೆ ಮೌನಕ್ಕೆ ಇರಬಹುದಾದ ಆಳವನ್ನ,ಅರ್ಥವನ್ನ  ಅರಿವಿಗೆ ತಂದುಕೊಂಡಿದ್ದೆ. ಡೈರೆಕ್ಟ್ರು ತುಂಬಾ ವಿಧೇಯತೆಯಿಂದ ಡಾನ್ ಮಾತುಗಳನ್ನ ಕೇಳಿಸಿಕೊಳ್ಳುತ್ತಿದ್ದರು.ಡಾನ್ ಮಾತನಾಡಿದ್ದೇ ಜಾಸ್ತಿ. ಡೈರೆಕ್ಟ್ರು ಡಾನ್ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಿದ್ದರು.ಆಗೊಮ್ಮೆ ಈಗೊಮ್ಮೆ ‘ಹ್ಮ್ಮ್’ ‘ಸರಿ ಸರಿ ಸಾರ್’   ಎಂದಷ್ಟೇ ಹೇಳುತ್ತಿದ್ದರು.

  ಕೊನೆಗೆ ಡಾನ್ ಹೊರಟರು. ಅವರನ್ನು ಬೀಳ್ಕೊಡಲು ನಾನು ಹಾಗು ನಮ್ಮ ಡೈರೆಕ್ಟ್ರು ಎದ್ದು ಅವರ ಜೊತೆ ಹೊರಟೆವು.ಸ್ಟುಡಿಯೋದ ಮೊದಲನೇ ಮಹಡಿಯಿಂದ ಕೆಳಗೆ ಬರುವತನಕ ಐದು ಮಂದಿ ಮಾರಿಗೊಬ್ಬರಂತೆ  ಮೆಟ್ಟಿಲುಗಳ ಪಕ್ಕ ನಿಂತಿದ್ದರು. ಸ್ಟುಡಿಯೋ ಬಾಗಿಲಲ್ಲಿ ಇನ್ನಿಬ್ಬರು. ಡಾನ್ ಸ್ಟುಡಿಯೋ ದಿಂದ ಹೊರಬರುತ್ತಿದ್ದಂತೆ ಎಲ್ಲರೂ ಅವರ ಸುತ್ತ ಎಲ್ಲ ಕಡೆಯಿಂದ ಸುತ್ತುವರಿದು ನಿಂತರು.ನಡುವೆ ವೃತ್ತದಲ್ಲಿ ನಾನು ,ಡೈರೆಕ್ಟ್ರು ಮತ್ತು ಡಾನ್.ಹೋಗುವ ಮುನ್ನ ಒಂದಿಷ್ಟು ಲೋಕಾಭಿರಾಮದ ಮಾತಿನ ಸಮಯವದು.ಮಾತು ಸಾಗುತ್ತಿತ್ತು .ನಾನು ಸುಮ್ಮನೆ ಸುತ್ತಲೂ ಗಮನಿಸುತ್ತ ನಿಂತಿದ್ದೆ.ಸ್ಟುಡಿಯೋ ಎದುರಿನ ರಸ್ತೆಯ ಶುರುವಿನಲ್ಲಿ ಇನ್ನೊಬ್ಬ ಕಂಡ.ಆತ ಕಣ್ಣಲ್ಲಿ ಕಣ್ಣಿಟ್ಟು ಸುತ್ತಲಿನ ಜಾಗವನ್ನ ಗಮನಿಸುತ್ತಾ ನಿಂತಿದ್ದ. ನಡುವೆ ಎಲ್ಲಿಂದಲೋ ಸ್ಟುಡಿಯೋ ರಸ್ತೆಯ ಇನ್ನೊಂದು ತುದಿಯಿಂದ ಬೈಕೊಂದು ಬರ್ರನೆ ನಮ್ಮ ಹಿಂದೆ ಹೋಯಿತು.ಆಗ ನೋಡಬೇಕಿತ್ತು ಡಾನ್ ನ ಇಡೀ ಟೀಮು ಬೈಕ ಹೋದ ಕಡೆ ಧಾವಂತಕ್ಕೆ ಬಿದ್ದು ನೋಡಿದ ರೀತಿ. ಒಂದೆರೆಡು ಕ್ಷಣ ತಣ್ಣನೆಯ ಮೌನ.ಅಷ್ಟು ಜನರಿದ್ದರೂ ಸುತ್ತ ,ಇಡೀ ಆ ಪ್ರದೇಶ ನಿರ್ಜನವಾದಂತೆ ಭಾಸವಾಯಿತು.ಅದು ನಿಶ್ಚಲವಾದ ಕೊಳಕ್ಕೆ ಕಲ್ಲು ಬಿದ್ದ ಘಳಿಗೆ.ಬೈಕು ತಿರುವಿನಲ್ಲಿ ಮಾಯವಾದ ನಂತರ ಪರಿಸ್ಥಿತಿ ಮತ್ತೆ ಮರಳಿ ಮೊದಲಿನಂತಾಯಿತು.ಮೊದಲು ಡಾನ್ ನನ್ನ ಹಾಗು ಡೈರೆಕ್ಟರ ಕೈ ಕುಲುಕಿದರು.ನಂತರ ಇಡೀ   ಟೀಂ ನ ಮಂದಿ ಅದನ್ನೇ ಅನುಸರಿಸಿದರು.ಅಷ್ಟು ಮಾಡಿ  ಡಾನ್ ಮತ್ತು ಅವರ ಬಳಗ ಅಲ್ಲಿಂದ ಹೊರಟುಹೋಯಿತು.

  ಈ ಎಲ್ಲ ವಿದ್ಯಮಾನಗಳು ನನ್ನ ಕಣ್ಣೆದುರು ಕನಸಿನಂತೆ ನಡೆದು ಹೋದವು.ಸಿನೆಮಾದ ರೀಲ್ ನಲ್ಲಿ ಅಷ್ಟೇ ಕಂಡ ಸಂಗತಿಗಳು ರಿಯಲ್ ಆಗಿ ಅನುಭವಕ್ಕೆ ಬಂದವು. ಆ ಡಾನ್ ಅವರನ್ನು ಉಪೇಂದ್ರರ ಓಂ ಸಿನಿಮಾದಲ್ಲಿ ಕಂಡಿದ್ದೆ.ಈಗ ಕಣ್ಣೆದುರು. ಹುಡುಕಿಕೊಂಡು ಹೋದರೂ  ಸಿಕ್ಕದ ಅಪರೂಪದ ಅನುಭವ ಆ ದಿನ ನನ್ನದಾಯಿತು.ಇಂಥ ಅಪರೂಪದ ಅನೇಕ ಅನುಭವಗಳನ್ನ ಕೊಡಮಾಡಿದ ನನ್ನ ಸಿನೆಮಾ ಪ್ರೀತಿಗೆ ನಾನು ಯಾವತ್ತೂ ಋಣಿ J J

ಕೊನೆಗೊಂದಿಷ್ಟು ಮಾತು........

 ಅವರು ಅಷ್ಟು ದೊಡ್ಡ ಡಾನ್.ನನ್ನಂಥ ಕ್ಷುದ್ರ ಜೀವಿಗೆ ,ಎಲ್ಲಿಂದಲೋ ಬಂದು ಪಕ್ಕದಲ್ಲಿ ಹಾದುಹೋದ ಬೈಕಿನೆಡೆ ಅಷ್ಟೊಂದು ಭಯಬಿದ್ದರಲ್ಲ.ಈವತ್ತಿಗೂ ಅವನ್ನೆಲ್ಲ ನೆನೆಸಿಕೊಂಡರೆ ಒಂದು ಅನಾಯಾಸ ನಗು ನನ್ನಲ್ಲಿ ಹುಟ್ಟುತ್ತೆ.ಡಾನ್ ಬದುಕು ಒಂದು ರೀತಿ ಬಂಗಾರದ ಪಂಜರದೊಳಗಿನ ಹಕ್ಕಿಯಂತೆ. ಅಷ್ಟೇ.