Sunday, May 1, 2011

ಬ್ಲಾಗಿಗೊಂದು ವಿದಾಯ .......

ಶ್ರಾವಣದ ಮಳೆ ಸುರಿದಿದೆಯಾದರೂ .....ಆದರೂ ...


ಇಲ್ಲಿತನಕ ಸರಿಸುಮಾರು ಎರಡು ವರುಷ ‘ಶ್ರಾವಣದ ಮಳೆ ಸುರಿದಿದೆಯಾದರೂ ‘ ,ಇನ್ನು ಮುಂದೆ ಕಾಲ ಕಾಲಕ್ಕೆ ಅದು ಸುರಿಯುವ ಭರವಸೆ ನನಗೆ ಉಳಿದಿಲ್ಲ.ಬರೆಯುವ ಖುಷಿ ,ಪ್ರೀತಿ ಎಂದಿನಂತೆ ಅಥವಾ ಎಂದಿಗಿಂತ ಜಾಸ್ತಿಯಾಗಿದ್ದರೂ ,ಅಂದುಕೊಂಡಿದ್ದನ್ನೆಲ್ಲಾ ಬರಹಕ್ಕೆ ಇಳಿಸಲು ನನಗೆ ಪುರುಸೊತ್ತಿಲ್ಲ. ಇನ್ನು ಹಟಕ್ಕೆ ಬಿದ್ದು ‘ಶ್ರಾವಣದ ಮಳೆಯನ್ನ ಸುರಿಸಲೇ ಬೇಕೆಂದು ಪಟ್ಟು ಹಿಡಿದು ಬರೆಯಲು ಕುಳಿತರೆ ಅದು ‘ಶ್ರಾವಣದ ಮಳೆಯಾಗುವುದಿಲ್ಲ. ಬಲವಂತಕ್ಕೆ ಬರೆದದ್ದು ಬಕೇಟಿನಲ್ಲಿ ನೀರು ತಂದು ಸುರಿದಂತೆಯೇ ವಿನಹಃ.ಅದಕ್ಕಿಂತ ಹೆಚ್ಚಿನ ಯಾವ ಮಹತ್ವವೂ ಅಲ್ಲಿ ಕಾಣುವುದಿಲ್ಲ..

ಹೊಸತಾಗಿ ಒಂದು ಕೆಲಸಕ್ಕೆ ಸೇರಿ ಎರಡು ತಿಂಗಳಾಯಿತು. ಬಹುರಾಷ್ಟ್ರೀಯ ಕಂಪನಿ. ವಿಪರೀತ ಕೆಲಸ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿಸುಮಾರು ಹದಿನೈದರಿಂದ ಹದಿನಾರು ತಾಸು ನಾನು ಆಫೀಸ್ ನಲ್ಲಿಯೇ ಕಳೆದು ಹೋಗಿದ್ದೇನೆ.. ವಾರದ ಕೊನೆಯ ರಜೆಗಳು ಸಿಕ್ಕೆಯೇ ಬಿಡುತ್ತವೆ ಎಂಬುದು ಕೆಲವೊಮ್ಮೆ ಖಾತ್ರಿಯಿಲ್ಲ. ನಡುವೆ ಅಲ್ಲಿ ಇಲ್ಲಿ ಸಿಗುವ ವಾರದ ಕೊನೆಯ ರಜೆಗಳು ,ನಾನು ಹಚ್ಚಿಕೊಂಡು ಕುಳಿತ ಹತ್ತಾರು ಹುಚ್ಚುಗಳನ್ನು ಪೊರೆಯಲು ಸಾಕಾಗುತ್ತಿಲ್ಲ. ಹುಚ್ಚು ಮನಸ್ಸಿನ ಹತ್ತಾರು ಮುಖಗಳ ಜೊತೆ ಕೊನೆಯದಾಗಿ ಇತ್ತೀಚಿಗೆ ಸೇರಿಕೊಂಡದ್ದು ಈ ಬ್ಲಾಗ್ ಎಂಬ ಹನ್ನೊಂದನೆಯ ಮುಖ.ಅದೀಗ ಭಾರವಾಗುತ್ತಿದೆ.

ಕಳೆದ ಒಂದಿಷ್ಟು ವಾರ ನನ್ನ ಹಳೆಯ ಬ್ಲಾಗ್ ಪೋಸ್ಟು ಗಳನ್ನೇ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳಲು ಶುರು ಮಾಡಿದ್ದೆ. ಒಟ್ಟಿನಲ್ಲಿ ಬ್ಲಾಗ್ ಖಾಲಿ ಬಿಡಬಾರದು ಎಂಬ ಕಾರಣವೊಂದನ್ನು ಬಿಟ್ಟರೆ ,ಅಲ್ಲಿ ಮತ್ಯಾವ ಖುಷಿ ಇರಲಿಲ್ಲ. ಎಷ್ಟು ದಿನ ಹೀಗೆ ನನಗೆ ನಾನೇ ಮೋಸ ಮಾಡಿಕೊಳ್ಳಲಿ ? ನನ್ನದೊಂದು ಬ್ಲಾಗ್ ಇದೆ ಕಾರಣಕ್ಕೆ ಅದನ್ನು ಹಟಕ್ಕೆ ಬಿದ್ದು ,ಏನೋ ಒಂದು ತಂದು ತುಂಬಿ ಕಸದ ತೊಟ್ಟಿಯಾಗಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಹೊಸತಾಗಿ ಏನನ್ನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂಬುದು ನಿಚ್ಚಳ ಸತ್ಯ. ಸತ್ಯವನ್ನು ಕಣ್ಣೆದುರು ಇಟ್ಟುಕೊಂಡು , ಹೇಗೋ ಏನೋ ಒಟ್ಟಿನಲ್ಲಿ ಬ್ಲಾಗ್ ನಡೆಸಿಕೊಂಡು ಹೋಗುತ್ತೇನೆಂಬ ಸುಳ್ಳನ್ನು ನನಗೆ ನಾನೇ ಯಾಕೆ ಹೇಳಿಕೊಳ್ಳಲಿ?

ಇನ್ನು ಈ ಸತ್ಯ ,ಸುಳ್ಳು ಎಂಬ ತರ್ಕವನ್ನೆಲ್ಲ ಬದಿಗಿಟ್ಟು ನೋಡಿದರೆ ಬ್ಲಾಗ್ ಬರೆಯುವುದು ಒಳ್ಳೆಯ ಹವ್ಯಾಸ ಎಂಬುದು ನಿಜಕ್ಕೂ ಸತ್ಯ. ಎಲ್ಲೋ ಸಿಗುವ ಒಂದು ದಿನದ ಬಿಡುವಿನಲ್ಲಿ ಬ್ಲಾಗ್ ಬರೆಯಬಹುದು ಎಂಬುದೂ ಸತ್ಯ. ಕಂಪನಿಯ ಕೆಲಸದ ಸಂಗತಿ ಬ್ಲಾಗ್ ನಿಲ್ಲಿಸುವುದಕ್ಕೆ ಕಾರಣವಾಗಬಾರದು ಎಂಬುದೂ ಸತ್ಯ. ಆದರೆ ಹಾಗೆ ಎಂದೋ ಎಲ್ಲೋ ಸಿಗುವ ಬಿಡುವಿನಲ್ಲಿ ಬ್ಲಾಗ್ ಗಿಂತ ನನಗೆ ಹತ್ತಿರವಾದ ಒಂದಿಷ್ಟು ವಿಷಯಗಳಿಗೂ ಸಮಯವನ್ನ ನಾನು ಮೀಸಲಿಡಲು ನಾನು ಸೋಲುತ್ತಿದ್ದೇನೆ. ಈಗೀಗ ಯಾವುದು ಮುಖ್ಯ, ಯಾವುದು ಅತಿಮುಖ್ಯ ಎಂದು ನಾನು ಪಟ್ಟಿ ಮಾಡಿಕೊಂಡು ನನ್ನ ಸಮಯವನ್ನ ಬಳಸಿಕೊಳ್ಳುತ್ತಿದ್ದೇನೆ. ಬ್ಲಾಗ್ ಬರೆಯುವುದರಲ್ಲಿ ನನಗೆ ಪ್ರೀತಿಯಿತ್ತು , ಖುಷಿಯಿತ್ತು.ಆದರೆ ಈಗ ಅದನ್ನು ನಿಲ್ಲಿಸುವಲ್ಲಿ ನನಗೆ ಯಾವ ಬೇಸರವೂ ಇಲ್ಲ. ಯಾವ ಸಂಕಟವೂ ಇಲ್ಲ.

ಕಂಪನಿಯ ಕೆಲಸದ ಕಾರಣಕ್ಕೆ ನಾನು ಈಗೀಗ ನನ್ನ ಸಿನೆಮಾ ಎಂಬ ಕನಸನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಂಪನಿಯ ಕೆಲಸ ಹೇಗೂ ಅನಿವಾರ್ಯ. ಕಂಪನಿಯ ಕೆಲಸದ ಜೊತೆ ಜೊತೆಗೆ ನನ್ನೆಲ್ಲ ಆಸಕ್ತಿಗಳಿಗೆ ಸಮಯ ಕೊಡುವುದು ಈಗೀಗ ನನಗೆ ದೊಡ್ಡ ಸವಾಲಂತೆ ಕಾಣುತ್ತಿದೆ. ಆ ಕಾರಣಕ್ಕೆ ನನ್ನ ಆಸಕ್ತಿಯ ಪಟ್ಟಿಯನ್ನು ಸೋಸಿ ಕೆಲವಷ್ಟನ್ನ ಮಾತ್ರ ಉಳಿಸಿಕೊಳ್ಳುತ್ತಿದ್ದೇನೆ. ಹಾಗೆ ಸೋಸಿ ಉಳಿದದ್ದು ಸಿನೆಮಾ ಒಂದೇ. ಅದು ನನ್ನ ಕನಸು. ನನ್ನ ಅತಿ ದೊಡ್ಡ ಖುಷಿ. ಈ ಕಂಪನಿಯ ಕೆಲಸವಾಗಲಿ ,ಅಥವಾ ಇನ್ಯಾವುದೇ ಈ ಜಗತ್ತಿನ ಅನಿವಾರ್ಯತೆಗಳಾಗಲಿ ನನ್ನಿಂದ ಏನನ್ನೇ ಕಸಿದುಕೊಂಡರೂ ಸಿನೆಮಾದೆಡೆಗಿನ ನನ್ನ ಭಕ್ತಿಯನ್ನ ,ಪ್ರೀತಿಯನ್ನ .ಧ್ಯಾನವನ್ನ ಕಸಿದು ಕೊಳ್ಳಲು ಸಾಧ್ಯವಿಲ್ಲ ಅಥವಾ ಕಸಿದುಕೊಳ್ಳಲು ನಾನು ಬಿಡುವುದಿಲ್ಲ.

ಈ ಕಂಪನಿಯ ಕೆಲಸ ಕೈತುಂಬಾ ದುಡ್ಡು ಕೊಡುತ್ತೆ. ಹೊಟ್ಟೆ ಪಾಡಿಗೆ ದಾರಿಯಾಗುತ್ತೆ. ಇನ್ನು ಯಾಕೆ ಈ ಸಿನೆಮಾ ಎಂಬ ಹಗಲುಗನಸು ಎಂದು ಕಂಪನಿಯಲ್ಲಿ ಮೊದಲ ತಿಂಗಳ ಸಂಬಳ ಬಂದಾಗ ಅನ್ನಿಸಿತ್ತು. ಎಲ್ಲರಂತೆ ತೀರಾ ವಾಸ್ತವಕ್ಕೆ ಅಂಟಿಕೊಂಡು ನಾನು ಯಾಕೆ ಬದುಕಬಾರದು ಎಂದೂ ಅನ್ನಿಸಿತ್ತು.

ಕೊನೆಗೆ ಆ ಪ್ರಶ್ನೆಗೆ ನಾನೇ ಉತ್ತರವನ್ನ ಕಂಡುಕೊಂಡೆ. ನೀವು ನನ್ನನ್ನು ಅಥವಾ ಇನ್ಯಾರೇ ದೊಡ್ಡ ಕಂಪನಿ ಗಳಲ್ಲಿ ಕೆಲಸ ಮಾಡುವವರನ್ನ ‘ನೀವು ಯಾಕೆ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ‘ ಎಂದು ಕೇಳಿ ನೋಡಿ. ಬಹುತೇಕ ಉತ್ತರ ದುಡ್ಡಿನ ಸಲುವಾಗಿ. ಇನ್ಪೋಸಿಸ್ ಅಥವಾ ಇನ್ಯಾವುದೇ ಕಂಪನಿಯಲ್ಲಿ ಅವರು ಕೊಡುವ ದುಡ್ಡಿನ ಮುಖ ನೋಡಿ ಕೆಲಸಕ್ಕೆ ಸೇರುತ್ತೇವೆ.ಇದು ನಾರಾಯಣ ಮೂರ್ತಿ ಕೆಲಸ ಮಾಡಿದ ಇಂಡಸ್ಟ್ರಿ,ಇದು ಅಂಬಾನಿ ಕೆಲಸ ಮಾಡಿದ ಇಂಡಸ್ಟ್ರಿ ಎಂಬ ಒಂದು ಆದರ್ಶದಲ್ಲಿ ಯಾರೂ ಅವರ ಕಂಪನಿ ಗೆ ಸೇರುವುದಿಲ್ಲ. ಆದರೆ ನೀನು ಸಿನೆಮಾದಲ್ಲೇ ಯಾಕೆ ಕೆಲಸ ಮಾಡಬೇಕೆಂದು ನನ್ನನ್ನು ಕೇಳಿದರೆ ನನ್ನಲ್ಲಿ ಎಲ್ಲ ಲೆಕ್ಕಾಚಾರಗಳನ್ನ ಮೀರಿದ ಉತ್ತರವಿದೆ. ಸಿನೆಮಾ ರಾಜ್ಕುಮಾರ್ ಕೆಲಸ ಮಾಡಿದ ಇಂಡಸ್ಟ್ರಿ.ಹಂಸಲೇಖಾ, ಎಸ್.ಪಿ.ಬಿ. ಇರುವ ಇಂಡಸ್ಟ್ರಿ. ನಾಸ್ತಿಕನಾದ ನಾನು ನಂಬುವ ದೇವರೆಲ್ಲ ಅಲ್ಲೇ ಇರುವಾಗ ನಾನು ಅದನ್ನು ಬಿಟ್ಟು ಹೇಗಿರಲಿ?

ಸದ್ಯಕ್ಕೆ ನನ್ನೆದುರು ಕನಸಿನ ದಾರಿಯಲ್ಲಿ ಒಂದಿಷ್ಟು ಗುರಿಗಳಿವೆ. ಜೊತೆಗೆ ಕಂಪನಿ ಕೆಲಸವನ್ನ ಮಾಡಲೇ ಬೇಕಿದೆ. ಕಂಪನಿಯ ಕೆಲಸದ ಆಚೆ ನಾನು ಏನೇ ಮಾಡಿದರೂ ಅದು ಸಿನೆಮಾದ ಕೆಲಸದ ಸಲುವಾಗಿ ,ಅವಕಾಶಕ್ಕಾಗಿ ಅಲೆಯುವ ಸಲುವಾಗಿ ಮಾತ್ರ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಾಗಿದೆ . ಅಂಥದ್ದೊಂದು ಅತಿರೇಕದ ಶ್ರದ್ಧೆಯನ್ನ ಸಿನಿಮಾ ಪ್ರೀತಿ ಬೇಡುತ್ತೆ. ಇನ್ನು ನನ್ನ ಕಂಪನಿಯ ಕೆಲಸದಾಚೆಗಿನ ಬಿಡುವಿನ ವೇಳೆ ಏನೇ ಇದ್ದರೂ ಅದು ಸಿನೆಮಾಕ್ಕೆ ಮೀಸಲು.

ಕೊನೆಗೊಂದು ಮಂಗಳ ..
.
ಎಲ್ಲದರ ಶುರುವು ಹೇಗೆ ಇರಲಿ. ಅಂತ್ಯ ತುಂಬಾ ಮುಖ್ಯ .ಅಥವಾ ಅಂತ್ಯಕ್ಕೊಂದು ತಾರ್ಕಿಕ ಸಮಜಾಯಿಷಿ ತುಂಬಾ ಮುಖ್ಯ. ಬ್ಲಾಗ್ ಬರೆಯುವುದು ನಿಲ್ಲಿಸುತ್ತಿದ್ದೇನೆ ಎಂಬುದಕ್ಕೆ ಸಿನೆಮಾ ಒಂದು ದೊಡ್ಡ ಕಾರಣ. ಅದರಾಚೆ ನಾನು ಒಂದಿಷ್ಟು ಹೊಸಾ ಕಾರಣಗಳನ್ನ ,ಲಾಭಗಳನ್ನ ಕಂಡುಕೊಂಡಿದ್ದೇನೆ. ಇನ್ನು ಮೇಲೆ ನಾನು ನನ್ನ ಭಾವುಕತೆಯನ್ನ , ಖುಷಿಯನ್ನ ,ಅಭಿಮಾನವನ್ನ ,ಪ್ರೀತಿಯನ್ನ ಖಾಸಗಿಯಾಗಿ ಕಾದಿಟ್ಟು ಕೊಳ್ಳಬಹುದು. ಬ್ಲಾಗ್ ಇದ್ದಾಗ ಎಲ್ಲರೆದುರು ಅವನ್ನೆಲ್ಲ ಹರವಿಟ್ಟುಕೊಂಡು ಕೂರುವ ಚಪಲ ನಮ್ಮ ಅರಿವಿಗೆ ಬಾರದೆ ಬರಹದಲ್ಲಿ ಇಣುಕಿ ಬಿಡುತ್ತೆ. ನಾವು ಬರೆದದ್ದೆಲ್ಲಾ ಎಲ್ಲರಿಗೂ ಆಗಿ ಬರುವ ಖಾತ್ರಿಯಿಲ್ಲ. ವಾದ ವಿವಾದ, ಬರಹದಲ್ಲಿನ ಪ್ರಾಮಾಣಿಕತೆಯ ಪ್ರಶ್ನೆ , ಅನಾವಶ್ಯಕವಾದ ಬೇಸರ. ಯಾರನ್ನು ಹೊಗಳಿದರೂ ಕಷ್ಟ.ತೆಗಳಿದರೂ ಕಷ್ಟ. ಇನ್ನು ಮೇಲೆ ಆ ತಾಪತ್ರಯವಿಲ್ಲ. ನನ್ನೆಲ್ಲ ಮಾತುಗಳನ್ನ ನನ್ನಲ್ಲೇ ಇಟ್ಟುಕೊಳ್ಳಬಹುದು. ಸ್ವಗತದಲ್ಲೂ ಒಂದು ಬಗೆಯ ಸೊಬಗಿದೆ.


ಈವತ್ತು ಇಷ್ಟೆಲ್ಲಾ ಹೇಳಿ ,ವಿದಾಯಕ್ಕೊಂದು ಮುನ್ನುಡಿಯನ್ನ ಬರೆದು ಹೋಗುವ ಅವಶ್ಯಕತೆ ಖಂಡಿತ ಇರಲಿಲ್ಲ. ಹಾಗೆಯೇ ಬ್ಲಾಗನ್ನು ಹಾಳು ಸುರಿಯಲು ಬಿಟ್ಟು ನನ್ನ ಪಾಡಿಗೆ ನಾನು ಎದ್ದು ಹೋಗಿ ಬಿಡಬಹುದಿತ್ತು. ಆದರೆ ಈ ವಿದಾಯದ ಮುನ್ನುಡಿಯ ನೆಪದಲ್ಲಿ ಬರಲು ಕಾರಣ ಶ್ರೀ ಸಾಯಿ ಬಾಬಾ . ಅವರ ಕುರಿತು ಬರೆಯಲು ಶುರುವಿಟ್ಟುಕೊಂಡು ಒಂದು ಮುನ್ನುಡಿಯನ್ನು ಕಳೆದ ಪೋಸ್ಟಿನಲ್ಲಿ ಹಾಕಿದ್ದೆ. ಅವರ ಬಗ್ಗೆ ಬರಹವನ್ನ ಅರ್ಧಕ್ಕೆ ನಿಲ್ಲಿಸಿ ಎದ್ದು ಹೋಗುವ ಮನಸ್ಸಾಗಲಿಲ್ಲ. ಆದರೆ ನಾನು ಅಂದುಕೊಂಡಿದ್ದನ್ನೆಲ್ಲ ಬರೆಯಲೂ ಆಗುತ್ತಿಲ್ಲ. ಆ ಕಾರಣಕ್ಕೆ ಒಂದೆರಡು ಮಾತಿನಲ್ಲಿ ಹೇಳಬೇಕೆಂದಿದ್ದ ವಿಷಯಗಳ ಸಾರಾಂಶವನ್ನ ಹೇಳಿ ಹೋಗಿ ಬಿಡುತ್ತೇನೆ.

ಬಾಬಾ ದೇವರೋ ಅಥವಾ ಮಾಮೂಲಿ ಮನುಷ್ಯರೋ ಎಂಬ ಮಾತು ಬದಿಗಿರಲಿ. ಆದರೆ ಅವರು ಮಾಡಿದ ಕೆಲಸಗಳನ್ನ ಬದಿಗಿಟ್ಟು ,ಕೇವಲ ಅವರ ಪವಾಡದ ಕುರಿತು ಮಾತನಾಡಿ ಅವರನ್ನು ಒಬ್ಬ ಮಾಮೂಲಿ ಮನುಷ್ಯನಂತೆ ನಾವು ಕಾಣುವುದರಲ್ಲಿ ಯಾವ ಮನುಷ್ಯತ್ವವೂ ನನಗೆ ಕಾಣುವುದಿಲ್ಲ. ..
.....................................................................................

ಅತ್ತಿಗೆ ನನಗೆ ವಹಿಸಿಕೊಟ್ಟ ಅವಳ ಬ್ಲಾಗನ್ನು ಮತ್ತೆ ಅವಳ ಮಡಿಲಿಗೇ ಹಾಕುತ್ತಿದ್ದೇನೆ. ಮೊದಲಿಗೆ ನನ್ನನ್ನು ಬ್ಲಾಗ್ ಗೆ ಕರೆತಂದ ಅವಳಿಗೆ ದೊಡ್ಡ ಥ್ಯಾಂಕ್ಸ್. ನಂತರ ಅತ್ತಿಗೆಯ ನೆರಳಿನಲ್ಲಿ ಬಂದವನನ್ನ ಬೆಂಬಲಿಸಿದ ನಿಮ್ಮೆಲ್ಲರಿಗೂ ಅಷ್ಟೇ ದೊಡ್ಡ ಥ್ಯಾಂಕ್ಸ್.

ಹಿಂದೊಮ್ಮೆ ಹೀಗೆಯೇ ಬ್ಲಾಗ್ ಬಿಡುವ ಮಾತನಾಡಿದ್ದೆ ಅರೆಬೆಂದವನಂತೆ. ಹೇಳಿ ಎರಡೇ ದಿನಕ್ಕೆ ವಾಪಾಸು ಬಂದಿದ್ದೆ. ಈ ಬಾರಿ ಹಾಗಲ್ಲ .ಈ ಬಾರಿ ಸಿನೆಮಾ ಕಾರಣಕ್ಕೆ ಹೋಗುವ ಮಾತಾಡುತ್ತಿದ್ದೇನೆ. ಇದು ಸ್ವಲ್ಪ ಸೀರಿಯಸ್ ಎನ್ನುವಷ್ಟು ಗಂಭೀರ ನಿರ್ಧಾರ. ಮತ್ತೆ ತೆಲೆಕೆಟ್ಟು ವಾಪಾಸು ಬರುತ್ತೇನೆಂದರೂ ಸದ್ಯಕ್ಕಂತೂ ತಲೆಕೆಡುವ ಮಾತೇ ಇಲ್ಲ. ತಲೆ ಫುಲ್ ಬ್ಯುಸಿ. ಅಕಸ್ಮಾತ್ ಮುಂದೆ ಎಂದಾದರೂ ಬರುವ ಬಯಕೆಯಾದರೆ ಖಂಡಿತ ಬರುತ್ತೇನೆ. ನನ್ನದೇ ಬ್ಲಾಗ್ ಗೇ ಮರಳಿ ಬರುವುದರಲ್ಲಿ ನನಗೆ ಯಾವ ಬಿಗುಮಾನವಿಲ್ಲ. ಈಗ ಬಿಡುತ್ತಿರುವುದು ಅನಿವಾರ್ಯ. ಇದು ಈ ಕ್ಷಣದ ಸತ್ಯ. ಎಲ್ಲ ಸತ್ಯಗಳೂ ಎಲ್ಲ ಕಾಲಕ್ಕೂ ಸತ್ಯವಾಗಿರಲೇಬೇಕೆಂಬ ನಿಯಮವಿಲ್ಲ. ಆದರೆ ಒಂದಂತೂ ಸತ್ಯ. ಈ ಬಾರಿ ವಾಪಾಸು ಮರಳಿ ಬಂದರೂ ಸದ್ಯಕ್ಕಂತೂ ಬರುವುದಿಲ್ಲ. ನಾನು ಭೀಷ್ಮ ಪ್ರತಿಜ್ಞೆ ಮಾಡುತ್ತಿಲ್ಲ. ನನ್ನ ಸಂಕಷ್ಟವನ್ನ ಹೇಳಿಕೊಂಡು ಬ್ಲಾಗ್ ಬಿಡುವ ನಿರ್ಧಾರವನ್ನ ಹೇಳಿದ್ದೇನೆ ಅಷ್ಟೇ. ಕಡ್ಡಿ ಮುರಿದಂತೆ ಬ್ಲಾಗ್ ಗೇ ವಾಪಾಸು ಬರುವುದೇ ಇಲ್ಲವೆಂದು ಹೇಳಲು ನನಗೆ ಧೈರ್ಯ ಸಾಲುತ್ತಿಲ್ಲ. ಹಾಗೇನಾದರೂ ಖಡಾಖಂಡಿತವಾಗಿ ಹೇಳಿದರೆ ಕೆಲವು ಬುದ್ಧಿಜೀವಿಗಳು, ವಿಚಾರವಾದಿಗಳು ಕಾಯುತ್ತಲೇ ಇರುತ್ತಾರೆ. ಮತ್ತೆ ಎಂದಾದರೂ ಮರಳಿ ಬ್ಲಾಗ್ ಗೆ ಬಂದರೆ ಅವರೆಲ್ಲ ಸೇರಿ ಯಾಕಾದರೂ ಮರಳಿ ಬಂದೆನೆಂದು ಅನ್ನಿಸುವಂತೆ ಮಾಡಿಬಿಡುವುದರಲ್ಲಿ ನನಗೆ ಯಾವ ಅನುಮಾನವೂ ಕಾಣುತ್ತಿಲ್ಲ. ಹಿಂದೊಮ್ಮೆ ಅನಾವಶ್ಯಕವಾಗಿ ,ಅಗತ್ಯಕ್ಕಿಂತ ಹೆಚ್ಚಾಗಿ ಫೇಸ್ ಬುಕ್ ಬಳಸುವುದು ಸರಿಯಲ್ಲ ಎಂದು ಹೇಳಿ ನಾನು ಫೇಸ್ ಬುಕ್ ಬಿಟ್ಟಿದ್ದೆ. ಯಾವುದೋ ಒಂದು ಅಗತ್ಯವಾದ ಕಾರಣಕ್ಕೆ ಮರಳಿ ಫೇಸ್ ಬುಕ್ ಗೆ ಮರಳಿ ಬಂದಿದ್ದೇ ತಡ, ಎಲ್ಲರೂ ಮುರಕೊಂಡು ನನ್ನ ಮೇಲೆ ಬಿದ್ದು ಬಿಟ್ಟರು. ನಾನು ಹೇಳಿದ್ದು ಫೇಸ್ ಬುಕ್ ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಿ ಎಂದು. ಬಳಕೆ ಮಾಡಲೇ ಬೇಡಿ ಎಂದು ನಾನು ಹೇಳಿದವನಂತೆ ನನ್ನನ್ನು ನೋಡಿಬಿಟ್ಟರು. ಓ ದೇವರೇ .:) :) :) ;)

ಈಗ ಹೋಗುತ್ತೇನೆ ಎಂಬುದು ನಿರ್ಧಾರ. ಹೋಗಿ ಬರುತ್ತೇನೆ ಎಂಬುದು ಆಶಯ. ಉಳಿದದ್ದು ‘ತಿರುಗಿ ನೋಡದಿರು ಬ್ಲಾಗಿನತ್ತ . ಮುಂದಿನದು ದೇವರ ಚಿತ್ತ' .:) :) :೦ :)

Sunday, April 24, 2011

ಸಾಯಿ ಬಾಬಾ ಮತ್ತು ನನ್ನ ಹೈ ಸ್ಕೂಲ್ ದಿನಗಳು ..

ಪೂರ್ಣಚಂದ್ರ ತೇಜಸ್ವಿ ನೆನಪಾದಾಗಲೆಲ್ಲ ನಾನು ನನ್ನ ಹೈ ಸ್ಕೊಲ್ ದಿನಗಳತ್ತ ಮುಖ ಮಾಡಿ ನಿಲ್ಲುತ್ತೇನೆ. ಎಂಟನೆ ತರಗತಿಯಿಂದ ಹತ್ತರ ತನಕ ಪೂರ್ತಿ ಮೂರು ವರುಷ ತಮ್ಮ ಬರಹದ ಜೊತೆಗೆ ನನ್ನನ್ನು ಪ್ರಭಾವಿಸಿದ್ದು,ನನ್ನ ಆಲೋಚನೆಗಳ ಹಿನ್ನೆಲೆಯಲ್ಲಿ ನಿಂತು ಮುನ್ನಡೆಸಿದ್ದು ತೇಜಸ್ವಿ.ನಂತರದ ಸ್ಥಾನ ಪತ್ರದ ಮೂಲಕ ನನ್ನ ಜೊತೆ ಸಂಪರ್ಕದಲ್ಲಿದ್ದು ನನ್ನ ಆ ವಯಸ್ಸಿನ ಕುತೂಹಲಕ್ಕೆ, ಅಚ್ಚರಿಗೆ ನೀರೆರೆದು ಪೋಷಿಸಿದ್ದ ಜಿ.ಟಿ.ನಾರಾಯಣ ರಾವ್ ಅವರು. ಇವರಿಬ್ಬರನ್ನು ಬಿಟ್ಟರೆ ಹೈ ಸ್ಕೂಲ್ ದಿನಗಳೆಂದರೆ ನೆನಪಾಗುವುದು ಶ್ರೀ ಸತ್ಯ ಸಾಯಿ ಬಾಬಾ.ನಾನು ಓದಿದ್ದು ಅವರದ್ದೇ ಆದ ತುಂಬಾ ಪ್ರತಿಷ್ಠಿತವಾದ ದಕ್ಷಿಣ ಕನ್ನಡದ ಅಳಿಕೆಯ ಶಾಲೆಯಲ್ಲಿ.

ಅಲ್ಲಿ ಬೆಳಿಗ್ಗೆ ನಾಲ್ಕೂವರೆಗೆ ದೊಡ್ಡ ಧ್ವನಿಯ ಮೈಕಿನಲ್ಲಿ ಸಾಯಿ ಸುಪ್ರಭಾತ ಹಾಸ್ಟೆಲ್ ನಲ್ಲಿ ಕೇಳುತ್ತಿದ್ದಂತೆ ಅಲ್ಲಿನ ದಿನಗಳು ಶುರುವಾಗುತ್ತಿತ್ತು.ನಂತರದ ಹದಿನೈದು ನಿಮಿಷ ಹಲ್ಲುಜ್ಜಿ ಮುಖ ತೊಳೆಯಲಿಕ್ಕೆ ಮೀಸಲು.ಆನಂತರ ಯೋಗಾಸನ, ಹಾಗು ಬೆಳಗ್ಗಿನ ಪ್ರಾರ್ಥನೆ ಆರು ಘಂಟೆಯ ತನಕ. ಆಮೇಲೆ ಆರರಿಂದ ಎಂಟರ ತನಕ ಸ್ಟಡಿಗೆಂದು ಮೀಸಲಾದ ‘ಸ್ಟಡಿ ಅವರ್ಸ್’. ಆ ಸ್ಟಡಿ ಅವರ್ಸ್ ನಡುವೆ ಇಪ್ಪತ್ತು ನಿಮಿಷ ಸ್ನಾನಕ್ಕೆಂದು ಬಿಡುತ್ತಿದ್ದರು. ನಂತರ ತಿಂಡಿ.ಆಮೇಲೆ ರೂಂ ಕ್ಲೀನಿಂಗು.ನಂತರ ಮತ್ತೆ ಅರ್ಧ ಘಂಟೆ ಪ್ರಾರ್ಥನೆ ಹಾಗು ಭಜನೆ.ನಂತರ ರೆಗ್ಯುಲರ್ ಕ್ಲಾಸ್ಸಸ್ಸು.ನಡುವೆ ಒಂದು ಊಟವೆಂಬ ವಿರಾಮ. ಮತ್ತೆ ಕ್ಲಾಸ್ಸಸ್ಸು. ಸಂಜೆ ನಾಲ್ಕೂವರೆಗೆ ಒಂದು ಸಣ್ಣ ತಿಂಡಿ.ನಂತರ ಆರರ ತನಕ ಆಟದ ಸಮಯ. ಆಟ ಮುಗಿಸಿ ಬಂದರೆ ಮತ್ತೆ ಮುಕ್ಕಾಲು ಘಂಟೆಯ ಸಂಜೆಯ ಭಜನೆ ಹಾಗು ಪ್ರಾರ್ಥನೆ, ನಂತರ ಮತ್ತೆ ಸ್ಟಡಿ ಅವರ್ಸ್.ನಡುವೆ ನಿಗದಿತ ಸಮಯಕ್ಕೆ ಒಂದು ಊಟ.ಮತ್ತೆ ಸ್ಟಡಿ ಅವರ್ಸ್ ರಾತ್ರಿ ಹತ್ತೂವರೆಗೆ ಮಲಗುವ ತನಕ.

ಹೀಗೆ ಅಲ್ಲಿ ಎಲ್ಲವೂ ಕ್ರಮಬದ್ಧ.ತುಂಬಾ ಶಿಸ್ತು. ಈವತ್ತು ಹತ್ತು ಘಂಟೆ ಹತ್ತು ನಿಮಿಷಕ್ಕೆ ಎಲ್ಲಿದ್ದೇನೋ ನಾಳೆ ಕೂಡ ಹತ್ತು ಘಂಟೆ ಹತ್ತು ನಿಮಿಷಕ್ಕೆ ಅಲ್ಲೇ ಇರುತ್ತಿದ್ದೆ.ಈವತ್ತು ನಿನ್ನೆಯಂತೆ.ನಾಳೆ ಈವತ್ತಿನಂತೆ.ಅಲ್ಲಿ ಇದ್ದದ್ದು ಮೂರು ವರುಷವಾದರೂ ಪ್ರತಿಯೊಂದು ದಿನವೂ ಒಂದೇ ತೆರನಾಗಿತ್ತು..ಅಲ್ಲಿ ಗಟ್ಟಿಯಾಗಿ ನಗುವಂತಿರಲಿಲ್ಲ.ದೊಡ್ಡ ಧ್ವನಿಯಲ್ಲಿ ಮಾತಾಡುವಂತಿರಲಿಲ್ಲ. ವಿಪರೀತ ಶಿಕ್ಷೆ. ದಿನದ ನಮ್ಮ ಎಲ್ಲ ಚಟುವಟಿಕೆಯ ಮೇಲೂ ಕಣ್ಗಾವಲು. ಒಂದು ಬಗೆಯ ಭಯದಲ್ಲೇ ನನ್ನ ಆ ದಿನಗಳು ಕಳೆದು ಹೋದವು.ಅಲ್ಲಿನ ಶಿಸ್ತು ನಿಜಕ್ಕೂ ಮಾದರಿ ಹಾಗು ಆದರ್ಶಪ್ರಾಯ. ಆದರೆ ನನ್ನ ಆ ವಯಸ್ಸಿಗೆ ಅವೆಲ್ಲ ಅತಿರೇಕದಂತೆ ಕಾಣುತ್ತಿದ್ದವು. ನನ್ನ ಆ ವಯಸ್ಸಿಗೆ ಹೇಗಿರಬೇಕಿತ್ತೋ ಹಾಗೆ ಇರಲು ಆಗಲೇ ಇಲ್ಲ. ನಾನು ತುಂಬಾ ಕಳೆದುಕೊಂಡೆ.

ಇಷ್ಟೆಲ್ಲಾ ಕಳೆದುಕೊಂಡರೂ ಕೆಲವಷ್ಟು ವಿಷಯಕ್ಕೆ ನಾನು ಅಳಿಕೆಯ ಶಾಲೆಗೆ ಋಣಿಯಾಗಿರಲೇಬೇಕು. ಎಲ್ಲಿ ಏನನ್ನು ಕಳೆದುಕೊಂಡಿದ್ದೆವೋ ಅದನ್ನು ಅಲ್ಲೇ ಪಡೆಯುವುದು, ಅದು ಸಾಧ್ಯವಾಗದಿದ್ದರೆ ಅದರ ಬದಲಿಗೆ ಇನ್ನೇನೋ ಹುಡುಕಿಕೊಂಡು ಕಷ್ಟದಲ್ಲೇ ಸುಖವನ್ನ ಕಾಣುವುದು ಅನಿವಾರ್ಯ ಕರ್ಮ. ಅದು ಎಲ್ಲ ಆಯ್ಕೆಯ ಅವಕಾಶಗಳ ಬಾಗಿಲು ಮುಚ್ಚಿದಾಗ ಉಳಿಯುವ ಕೊನೆಯ ಆಯ್ಕೆ. ನನ್ನ ಕಷ್ಟ ಏನೇ ಇರಲಿ. ಹೊರ ಜಗತ್ತಿನಲ್ಲಿ ಅಲ್ಲಿ ಓದಿದ್ದೇನೆ ಎಂಬ ಕಾರಣಕ್ಕೆ ನನಗೆ ಒಂದಷ್ಟು ಗೌರವ ಸಿಕ್ಕಿದೆ. ನಾನು ಅವನ್ನೆಲ್ಲ ನನಗೆ ಬೇಡದಿದ್ದರೂ ಮನೆಯವರ ಮುಖ ನೋಡಿಕೊಂಡು ತಣ್ಣಗೆ ಒಂದು ಸಣ್ಣ ಜೀವವಿಲ್ಲದ ಮಂದಹಾಸದೊಡನೆ ಇಲ್ಲಿತನಕವೂ ಸ್ವೀಕರಿಸುತ್ತಲೇ ಬಂದಿದ್ದೇನೆ. ಈ ಗೌರವವೆಂಬ ಬೇಡದ ಖುಷಿಯನ್ನ, ಋಣದ ಭಾರವನ್ನ ಬದಿಗಿಟ್ಟರೆ ಅಲ್ಲಿ ಇನ್ನೊಂದಿಷ್ಟು ಜೀವನದ ಕೊನೆಯ ಕ್ಷಣದ ತನಕ ನೆನಪಿಗೆ ತಂದುಕೊಂಡು ಖುಷಿ ಪಡಬಹುದಾದ ಸಂಗತಿಗಳಿವೆ.

ಆ ಖುಷಿಯ ಸರಣಿಯ ಸರತಿಯಲ್ಲಿ ಮೊದಲಿಗೆ ಜಿಮ್ ಕಾರ್ಬೆಟ್ ನ ‘ದಿ ಮ್ಯಾನ್ ಈಟರ್ ಆಫ್ ರುದ್ರಪ್ರಯಾಗ’ ಸಿಗುತ್ತೆ.ನಂತರ ‘ದಿ ಮ್ಯಾನ್ ಈಟರ್ ಆಫ್ ಖೂಮಾಯೂನ್’ . ಕಾರ್ಬೆಟ್ ಬರಹದ ಅನುವಾದವನ್ನ ಕನ್ನಡದಲ್ಲಿ ಮಾಡಿದ್ದಾರೆ ಎಂಬ ಕಾರಣಕ್ಕೆ ತೇಜಸ್ವಿ ಹತ್ತಿರವಾಗುತ್ತಾರೆ. ಮುಂದೆ ತಿರುಗಿ ಇಂಗ್ಲಿಷ್ ಪುಸ್ತಕವನ್ನ ಓದಲು ಮನಸ್ಸು ಬಾರದಷ್ಟು ನನ್ನನ್ನು ತೇಜಸ್ವಿ ಆವರಿಸಿಕೊಳ್ಳುತ್ತಾರೆ. ತೇಜಸ್ವಿ ಅಪ್ಪ ಬರೆದದ್ದು ಎಂಬ ಕಾರಣಕ್ಕೆ ಕುವೆಂಪು ಸಮಗ್ರ ಸಾಹಿತ್ಯದ ಎರಡು ದೈತ್ಯ ಸಂಪುಟಗಳು ಓದಿಸಿಕೊಳ್ಳುತ್ತೆ. ಕುವೆಂಪು ಜೊತೆ ಉಳಿದ ಜ್ಞಾನ ಪೀಠ ಪಡೆದವರನ್ನ ಹೋಲಿಕೆ ಮಾಡಿ ನೋಡುವ ಕುತೂಹಲದ ಕಾರಣಕ್ಕೆ ಬೇಂದ್ರೆ ಸಾಹಿತ್ಯ, ಮಾಸ್ತಿಯವರ ಚಿಕವೀರ ರಾಜೇಂದ್ರ ಹಾಗು ಒಂದಿಷ್ಟು ಸಣ್ಣ ಕಥೆಗಳು, ಕಾರಂತರ ಸಮಗ್ರ ಸಾಹಿತ್ಯದ ಒಂದಿಷ್ಟು ಸಂಪುಟಗಳು ಓದಿಸಿ ಕೊಳ್ಳುತ್ತೆ. ಇವರೆಲ್ಲ ಒಂದು ಸುತ್ತು ಆಗಿ ಹೋಗಿ ರಾಜರತ್ನಂ ‘ರತ್ನನ್ ಪದಗಳ ಜೊತೆ ಎದುರಾಗುತ್ತಾರೆ. ಬೀ.ಚಿ ಸಿಗುತ್ತಾರೆ.ಡಿ.ವಿ.ಜಿ. ಸಿಗುತ್ತಾರೆ.ಅವರ ಮಗ ಬಿ.ಜಿ.ಎಲ್ .ಸ್ವಾಮೀ ಸಿಗುತ್ತಾರೆ. ನಡುವೆ ಎಲ್ಲೋ ಆ ಶಾಲೆಯ ಅದ್ಭುತವಾದ ಲೈಬ್ರರಿಯ ಪುಸ್ತಕಗಳ ಸಾಲಿನಲ್ಲಿ ಜಿ.ಟಿ.ನಾರಾಯಣ ರಾವ್ ಅವರ ‘ ಐನ್ ಸ್ಟೇಯ್ನ್ ‘ ಪುಸ್ತಕ ಸಿಗುತ್ತೆ. ಅವರ ಜೊತೆ ಒಂದಿಷ್ಟು ಕಾಲ ಪತ್ರ ವ್ಯವಹಾರದ ಭಾಗ್ಯ ನನ್ನದಾಗುತ್ತೆ. ಅವರು ‘ಮಗು ‘ ಎಂದು ಸಂಬೋಧಿಸಿ ಪತ್ರವನ್ನ ಶುರುಮಾಡಿ ,ನನ್ನ ಎಲ್ಲ ಪ್ರಶ್ನೆಗಳಿಗೆ ಕೊಂಚವೂ ಅಸಡ್ಡೆ ತೋರದೆ ಉತ್ತರಿಸುತ್ತಾರೆ. ನಾನು ಖುಷಿಯಾಗುತ್ತೇನೆ. ಜಿ.ಟಿ.ಎನ್ ಅವರ ವಿಜ್ಞಾನದ ದಾರಿಯ ಜಾಡಿನಲ್ಲಿ ಮುಂದೆ ನಾಗೇಶ್ ಹೆಗ್ಡೆ ಸಿಗುತ್ತಾರೆ. ಆಗ ಓದಿದ್ದರಲ್ಲಿ ನನಗೆ ಅರ್ಥವಾದದ್ದೆಷ್ಟು ಎಂಬುದು ನನಗೆ ಗೊತ್ತಿಲ್ಲ. ಆದರೆ ಅಷ್ಟು ಹೊತ್ತಿಗೆ ಕನ್ನಡವೆಂಬ ಅಮಲು ತಲೆಗೇರಿ ನಾನು ಒಂದು ಬಗೆಯ ಗುಂಗಿಗೆ ಈಡಾಗಿ ಕವನ ಬರೆಯಲು ಶುರುವಿಟ್ಟುಕೊಂಡು ಆರೋಗ್ಯಕರ ಅರೆ ಹುಚ್ಚನಾಗಿದ್ದೆ.. ಆ ಹುಚ್ಚು ಈಗ ಪರಿಹಾರವೇ ಕಾಣದಷ್ಟು ಮಟ್ಟಕ್ಕೆ ಆವರಿಸಿ ಇಹವ ಮರೆಸುವ ನಶೆಯಾಗಿ ಪೂರ್ಣ ಹುಚ್ಚು ಪ್ರಾಪ್ತಿಯಾಗಿದೆ. .ಇನ್ನೇನು ಬೇಕು?

(ಇನ್ನೂ ತುಂಬಾ ಇದೆ.ಇದು ಪೀಠಿಕೆಯಷ್ಟೇ )

Wednesday, April 20, 2011

ಹೊಳೆ......ಕಥೆ

ಅದು ನನ್ನ ಪಾಲಿಗೆ ಬರಿಯ ಹೊಳೆಯಲ್ಲ. ನನ್ನ ಪಾಲಿಗೆ ಬೆರಗು ಹಾಗು ಅಚ್ಚರಿಯ ಗುಪ್ತಗಾಮಿನಿ ಅವಳು.ಮಾತು ಮೀರಿದ ಸಂಗತಿಗಳಿಗೆಲ್ಲ ಆಕೆ ಎನ್ನ ಸಂಗಾತಿ.ನಮ್ಮೂರಿನ ಸೇತುವೆಯ ಕಟ್ಟೆಯ ಮೇಲೆ ಕುಳಿತು ಈ ಹೊಳೆಯನ್ನ ದಿಟ್ಟಿಸುತ್ತ ಕೂರುವುದು ನನ್ನ ಮಟ್ಟಿಗೆ ಅಲೌಕಿಕ ಅನುಭವ.ಅದು ಯಾವಾಗ ಮತ್ತು ಹೇಗೆ ನನ್ನ ಹಾಗು ಈ ಹೊಳೆಯ ನಂಟು ಶುರುವಾಯಿತೋ ಸರಿಯಾಗಿ ನೆನಪಿಲ್ಲ.ಚಿಕ್ಕವನಿದ್ದಾಗ ನಾ ಬರೆದ ಮೊದಮೊದಲ ಬೆಳ್ಳಕ್ಕಿಯ ಕವಿತೆ ಹುಟ್ಟಿದ್ದು ಇದೇ ಹೊಳೆಯ ಸೇತುವೆಯ ಕಟ್ಟೆಯ ಮೇಲೆ.ಮತ್ತೆ ಎಂಟನೆ ತರಗತಿಯಲ್ಲಿ ಗಣಿತದಲ್ಲಿ ನಪಾಸಾಗಿ ಅಪ್ಪನಿಂದ ಅಮ್ಮನಿಂದ ಹೊಡೆತ ತಿಂದು ಒಂದೇ ಒಂದು ಮಾತೂ ಆಡದೆ ನೇರವಾಗಿ ಬಂದು ಮನಸಾರೆ ಅತ್ತು ಹಗುರಾದದ್ದು ಇದೇ ಹೊಳೆಯ ಎದುರಲ್ಲೇ.’ನೀ ರಾಧೇ’ಎಂಬ ನನ್ನದೊಂದು ಕವನ ಓದಿ ಎದುರುಮನೆಯ ಭಟ್ಟರ ಮಗಳು ನಂಗೆ ಒಲಿದದ್ದು ಇದೇ ಹೊಳೆಯ ಸಮ್ಮುಖದಲ್ಲೇ.ಕೊನೆಗೆ ಕೊನೆವರುಷದ ಡಿಗ್ರಿ ಓದುವಾಗ ಆಕೆಯ ಮದುವೆ ನಿಕ್ಕಿಯಾಗಿ ಆಕೆ ನನ್ನನ್ನು ಒಲ್ಲೆ ಎಂದು ಕೊನೆಯ ಬಾರಿ ಮುಖತೋರಿಸಿ ಹೋಗಿದ್ದು ,ಕೇವಲ ಅವಳಿಗೆ ಮಾತ್ರ ಎಂದು ಬರೆದಿಟ್ಟಿದ್ದ ಕವಿತೆಗಳನ್ನೆಲ್ಲ ಹರಿದು ಹುಚ್ಚನಾಗಿ ಕೂತಿದ್ದು ,ಅನ್ಯಾಯವಾಗಿ ಕವಿಯಾಗಿಬಿಟ್ಟೆ ಅಂತೆಲ್ಲ ಅನ್ನಿಸಿದ್ದು ಇದೇ ಹೊಳೆಯ ಎದುರಲ್ಲೇ.

ಆಕೆಯ ಹೆಸರು ‘ಹುಚ್ಚಿ ಹೊಳೆ’.ಇಷ್ಟು ಚೆಂದದ ಹೊಳೆಗೆ ಅಂತಹ ಹೆಸರು ಯಾಕೆ ಇಟ್ಟರೋ ಎಂದು ಮೊದಲೆಲ್ಲ ಇದೇ ಹೊಳೆಯ ಎದುರೆ ಕುಳಿತು ಯೋಚಿಸುತ್ತಿದ್ದೆ.ಹೇಗೆ ನೋಡಿದರೂ ಆಕೆ ಹುಚ್ಚಿ ಎನ್ನಿಸಲಿಲ್ಲ,ನನ್ನೊಳಗಿನ ಪ್ರಶ್ನೆಗೆ ಉತ್ತರವೂ ಸಿಕ್ಕಲಿಲ್ಲ .ಕೊನೆಗೊಮ್ಮೆ ಅಪ್ಪನನ್ನೇ ಕೇಳಿದ್ದೆ.ಆಕೆಗಿದ್ದ ಮೊದಲ ಹೆಸರು ‘ಶಾಲ್ಮಲೆ ‘.ಅದು ಅಜ್ಜ ಇನ್ನೂ ಚಿಕ್ಕವರಿದ್ದಾಗಿನ ಸಮಯ.ಅಪ್ಪನಿಗೂ ಈ ಹೊಳೆಯ ಪುರಾಣ ಅಜ್ಜನೇ ಹೇಳಿದ್ದಂತೆ.ಅನಾದಿ ಕಾಲದಿಂದ ತನ್ನ ಪಾಡಿಗೆ ತಾನು ಹರಿದುಕೊಂಡು ಮಂದಗಾಮಿನಿಯಾಗಿದ್ದ ಹೊಳೆ ಅದೊಮ್ಮೆ ಒಂದು ಭೀಕರ ಮಳೆಗಾಲದಲ್ಲಿ ತನ್ನ ಪಾತ್ರವನ್ನ ಬದಲಿಸಿ ಹುಚ್ಚಾಪಟ್ಟೆ ಹರಿದು ಇಡೀ ಊರನ್ನೇ ಆಪೋಶನ ತೆಗೆದುಕೊಂಡಳಂತೆ .ಅಂದಿನಿಂತ ಆಕೆ ‘ಹುಚ್ಚಿ ಹೊಳೆ’.ಎಲ್ಲೋ ಒಮ್ಮೆ ಮಾತ್ರ ಸ್ಥಿಮಿತ ಕಳೆದುಕೊಂಡಿದ್ದಕ್ಕೆ ಆಕೆಗೆ ಶಾಶ್ವತ ಹುಚ್ಚಿ ಪಟ್ಟ ಪ್ರಾಪ್ತವಾಗಿ ಹೋಯಿತು.ಆ ವಿಷಯದಲ್ಲಿ ನನ್ನಲ್ಲಿ ಆಕೆಯೆಡೆ ಅನುಕಂಪವಿದೆ.ಒಮ್ಮೆ ಕೂಗಿ ಹೇಳಿದ್ದೆ ಕೂಡ ನೀ ಹುಚ್ಚಿಯಲ್ಲ ,ನಾವಿದ್ದೇವೆ ದೊಡ್ಡ ಹುಚ್ಚರು ಎಂದು ಹೊಳೆಯೆದುರು.ಆಕೆ ಎಂದಿನಂತೆ ನಿರ್ಲಿಪ್ತ.ಬಹುಶಃ ಅನುಕಂಪ ಆಕೆಗೆ ಬೇಕಿಲ್ಲ .ಹಾಗೆಂದು ನನ್ನಷ್ಟಕ್ಕೆ ನಾನೇ ಅಂದುಕೊಂಡು ಹೊಳೆಗೆ ವಿದಾಯ ಹೇಳಿ ಮನೆಗೆ ಮರಳಿದ್ದೆ .

ಆತ ಒಬ್ಬ ಪರಿಚಯವಾಗದೇ ಇರುತ್ತಿದ್ದರೆ ಬಹುಶಃ ಈ ದಿನ ನಾನು ಹೊಳೆಯ ನೆಪದಲ್ಲಿ ನಿಮ್ಮೆದುರು ಬರುತ್ತಲೇ ಇರಲಿಲ್ಲ.ಹೊಳೆಯಿಲ್ಲಿ ನೆಪ, ಮತ್ತೆ ಹೊಳೆಯೇ ಎಲ್ಲ ಇಲ್ಲಿ.ಆದರೆ ನಿಜವಾಗಿಯೂ ಇಂದು ನಾನು ಹೇಳಹೊರಟಿರುವುದು ಹೊಳೆಯ ಬಗ್ಗೆ ಅಲ್ಲವೇ ಅಲ್ಲ. ಆತ ನನ್ನ ಊರಿನವನೇ ಅಲ್ಲ.ಎಲ್ಲಿಂದ ಬಂದ ,ಯಾಕಾಗಿ ಬಂದ ಎಂಬುದು ಗೊತ್ತಿಲ್ಲ.ಆತ ಬಂದ ,ಪರಿಚಿತನಾದ ಮತ್ತು ಕೆಲವಷ್ಟು ವಿಷಯದಲ್ಲಿ ಅಪರಿಚಿತನಾಗೆ ಉಳಿದು ಹೋದ.ಒಂದು ವರುಷದ ಕೆಳಗೆ ಆತ ಮೊದಲ ಬಾರಿಗೆ ಇದೆ ಹೊಳೆಯ ಸೇತುವೆಯ ಮೇಲೆ ಕಾಣಿಸಿಕೊಂಡ .ಮತ್ತೆ ಪ್ರತಿದಿನ ನಾನು ನನ್ನ ಎಂದಿನ ರೂಢಿಯಂತೆ ಸಂಜೆ ಹೊಳೆಯ ಸೇತುವೆಯ ಕಡೆ ಬಂದಾಗಲೆಲ್ಲ ಆತ ಕಾಣಿಸಿಕೊಳ್ಳುತ್ತಿದ್ದ.ನಾನು ಬರುವ ಮುಂಚೆಯೇ ಬಂದವನು ಕತ್ತಲಾಗಿ ನಾನು ಹೊರಟು ನಿಂತಾಗಲೂ ಆತ ಹೊರಡುವ ಸೂಚನೆಯೇ ಇಲ್ಲವೆಂಬಂತೆ ಕೂತಿರುತ್ತಿದ್ದ.ಕೊನೆಕೊನೆಗೆ ನನಗೆ ಹೊಳೆಯ ಬಗೆಗಿನ ಅಚ್ಚರಿ ಬೆರಗಿಗಿಂತ ಈತನೇ ಹೆಚ್ಚಾಗಿ ಬಿಟ್ಟ.ಆತ ಸುಮ್ಮನೆ ಕೂರುತ್ತಿದ್ದ ಯಾವ ಭಾವವೂ ಆಗದೆ.ಅಸಲಿಗೆ ಆತ ಹೊಳೆಯೆದುರು ಕೂರುತ್ತಿದ್ದರೂ ಆತ ದಿಟ್ಟಿಸುತ್ತಿದ್ದದ್ದು ಹೊಳೆಯ ತಿರುವ ನೆತ್ತಿಯ ಮೇಲಿನ ದಿಗಂತವನ್ನ.ಆತನದು ಅಚಲ ಏಕಾಗ್ರತೆ.ಅಪರೂಪ ಎನ್ನಬಹುದಾದ ಪರಧ್ಯಾನತೆ.ಆತನದು ಅಲೌಕಿಕ ನಿರ್ಲಿಪ್ತತೆ.ಅದು ಪರಮಾನಂದದ ಪ್ರತೀಕವೋ ಅಥವಾ ವೈರಾಗ್ಯದ ಅಂತಿಮ ಘಟ್ಟವೋ ತಿಳಿದಿಲ್ಲ.ಆತ ಬಗೆಹರಿಯದ ಪ್ರಶ್ನೆಗಳ ಮೂಲ.ಎಲ್ಲದಕ್ಕೂ ಆತ ನಿರುತ್ತರಿ.ಮಹಾಮೌನಿ.

ನಾನು ಆಗಾಗ ಹಿಮಾಲಯದೆಡೆ ಟ್ರೆಕ್ಕಿಂಗ್ ಹಾಗು ಪ್ರವಾಸದ ಸಲುವಾಗಿ ಹೋಗಿ ಬರುವುದುಂಟು.ಹಿಮಾಲಯದ ತಪ್ಪಲಿನ ಕೆಲವು ಸಾಧುಗಳಲ್ಲಿ ,ಬೌದ್ಧ ಸನ್ಯಾಸಿಗಳಲ್ಲಿ ಈತನನ್ನ ಕಂಡಿದ್ದೇನೆ.ಮತ್ತೆ ಗಂಗಾನದಿಯ ತಟದ ವಯೋವೃದ್ಢ ಭಿಕ್ಷುಕರಲ್ಲೂ ಕಂಡಿದ್ದೇನೆ.ಈಗ ಈತ ಯಾವ ಬಗೆ ಎಂಬುದೇ ನನ್ನ ಪಾಲಿಗೆ ದೊಡ್ಡ ಪ್ರಶ್ನೆಯಾಗಿತ್ತು.ಹೀಗೆ ಆತ ಕಾಣಿಸಿಕೊಳ್ಳಲು ಶುರುವಾಗಿ ಒಂದು ತಿಂಗಳಾಗುತ್ತಾ ಬಂದಿತ್ತು.ಆತ ನನ್ನ ಇರುವಿಕೆಯನ್ನ ಗ್ರಹಿಸಿದ್ದಾನೆ ಎನ್ನುವುದೂ ನನಗೆ ಅನುಮಾನವಾಗಿತ್ತು.ಕೊನೆಗೆ ಒಂದು ದಿನ ನಾನೇ ಮುಂದಾಗಿ ಸ್ವಲ್ಪ ಧೈರ್ಯ ಮಾಡಿ ಆತನನ್ನ ಮಾತಾಡಿಸಿದೆ.ಆತ ಮಾತಾಡಲಿಲ್ಲ.ಕತ್ತನ್ನು ನನ್ನೆಡೆ ತಿರುಗಿಸಿ ಏನು ಎಂಬಂತೆ ನೋಡಿದ.ನೀ ಯಾರು ನಿನ್ನ ಹೆಸರೇನು ಎಂದೆ.ಆತ ನಕ್ಕ .ಯಾಕೆ ಈ ನಗು ಎಂದೆ.’ಹೆಸರೆಲ್ಲೇನಿದೆ ,ನನ್ನ ಹೆಸರು ನೀನು ಕೇಳಿ ನಾನು ಹೇಳಬೇಕು ಎಂದಾದರೆ ನನ್ನ ಹೆಸರಿಗೆ ಬೆಲೆಯೇ ಇಲ್ಲ ಬಿಡು.ನನ್ನ ಹೆಸರ ಮೇಲೆ ನಂಗೇ ಅಂತ ಮೋಹವಿಲ್ಲ .ಮತ್ತೆ ನಿನಗ್ಯಾಕೆ ಬಿಡು 'ಎಂದ ಕೊಂಚ ಭಾರವಾಗಿ ಕಾವ್ಯ ಎನ್ನಬಹುದಾದ ರೀತಿಯಲ್ಲಿ .ನಿನ್ನ ಊರು ಯಾವುದು ಏನು ನಿನ್ನ ಹಿನ್ನೆಲೆ ಎಂದೆಲ್ಲ ಮತ್ತೆ ಕೇಳಬೇಕೆನಿಸಿತು.ಕೇಳಲಿಲ್ಲ.ಒಮ್ಮೆ ಸಣ್ಣಗೆ ನಕ್ಕು ಸುಮ್ಮನಾಗಿಬಿಟ್ಟೆ.ಈಗ ಆತ ಯಾಕೆ ನಕ್ಕಿದ್ದು ಎಂದ.ಏನಿಲ್ಲ ಬಿಡು ಎಂದೆ.ಆತನೂ ನಕ್ಕ ಭುವನದ ಭಾಗ್ಯವೆಂಬಂತೆ..

ಇಷ್ಟಾದ ಮೇಲೂ ಆತ ನನ್ನೊಡನೆ ಅಷ್ಟೇನೂ ಮಾತಾಡುತ್ತಿರಲಿಲ್ಲ.ನಾನೇ ಆತನನ್ನ ಆಗೀಗ ಮಾತನಾಡಿಸುತ್ತಿದ್ದೆ.ಮೌನ ಮತ್ತು ತೆಳು ನಗೆ ಅಷ್ಟೇ ಆತನ ಬಹುತೇಕ ಪ್ರತಿಕ್ರಿಯೆ.ಕೊನೆಕೊನೆಗೆ ನಾನು ಬರೆದ ಕವಿತೆಗಳನ್ನ ತೋರಿಸಲು ಶುರುವಿಟ್ಟುಕೊಂಡೆ.ಆತ ನೋಡಿ ಸುಮ್ಮನಾಗುತ್ತಿದ್ದ.ಆದರೆ ಅದೊಂದು ದಿನ ಒಂದು ಕವಿತೆಯನ್ನ ಓದಿ ಕೆಲವು ಸಾಲುಗಳು ಹೀಗಾದರೆ ಚೆನ್ನ ಎಂದು ನಾಲ್ಕು ಸಾಲು ಬರೆದು ತೋರಿಸಿದ್ದ .ಆತ ನೀಡಿದ ಸಾಲುಗಳು ನಿಜಕ್ಕೂ ಅದ್ಭುತವಾಗಿದ್ದವು.ಈತ ವಿಚಿತ್ರ ಎಂದುಕೊಂಡಿದ್ದ ನನಗೆ ಆತ ಸಾಮಾನ್ಯನಲ್ಲ ಎಂದು ಅನ್ನಿಸಿದ್ದು ಆಗಲೇ.ನೀನು ಸಾಮಾನ್ಯನಲ್ಲ ಮಾರಾಯ ,ಕಥೆ ಕವಿತೆ ಬರೆಯೋ ರೂಢಿ ಉಂಟೋ ಎಂದು ಕೇಳಿದ್ದೆ.ಇತ್ತು ಎಂದ.ಯಾಕೆ ಬಿಟ್ಟದ್ದು ಎಂದು ನಾನು ಕೇಳಲಿಲ್ಲ.ಮತ್ತೆ ಶುರು ಮಾಡು ಎಂದೆ.ನೋಡೋಣ ಎಂದ.ಹಾಗಾದರೆ ಈ ಹೊಳೆಯನ್ನೇ ಇಟ್ಟುಕೊಂಡು ಒಂದು ಕವಿತೆ ಬರೆದುಕೊಂಡು ಬಾ ನಾಳೆ ಬರುವಾಗ ಎಂದೆ.ಆತ ಸರಿ ಎಂದ.


ಮರುದಿನ ಆತ ಬರೆದು ತಂದ ಕವಿತೆ ನೋಡಿ ನಾನು ಬೆರಗಾಗಿ ಹೋಗಿದ್ದೆ.ಆತ ಯೋಚಿಸಿದ ಧಾಟಿ ಹಾಗು ಅವನ್ನೆಲ್ಲ ಕವಿತೆಯಲ್ಲಿ ತಂದ ಪರಿ ಅಸಾಧಾರಣ ಎಂಬಂತಿತ್ತು.ಅಲ್ಲ ಮಾರಾಯ ಹೊಳೆ ನೋಡಿ ಹೀಗೂ ಯೋಚಿಸಲಿಕ್ಕೆ ಸಾಧ್ಯವ ಎಂದು ಅಚ್ಚರಿಯಿಂದ ಆತನೆಡೆ ನೋಡಿದ್ದೆ.ಹೊಳೆ ನೋಡಿ ಬರೆದದ್ದಲ್ಲ ಅದು ಎಂದನಾತ.

ಆತ ಹೊಳೆಯನ್ನ ದಾರಿಗೆ ಹೋಲಿಸಿದ್ದ.ಅದು ಅಂತಿಂಥ ದಾರಿಯಲ್ಲ!ಕೈವಲ್ಯದ ಹಾದಿ ಅದು ಕಡಲೆಂಬ ಗಮ್ಯದೆಡೆ.ಈಜಿ ಈಜಿ ನಮೆಯುವುದರಲ್ಲಿ ಏನಿದೆ ಅರ್ಥ ,ಕಸಕಡ್ಡಿಯಾಗಿ ತೇಲಿ ಹೋಗಿ ಕಡಲ ಸೇರುವುದೇ ಪಾರಮಾರ್ಥ ಎಂಬರ್ಥದಲ್ಲಿ ಬರೆದಿದ್ದ.ಕವಿತೆಯ ಕೊನೆಯ ಎರಡು ಸಾಲು ಹೀಗಿತ್ತು ನೋಡಿ .ಬದುಕೋ ಬದುಕಿನಲಿ ಏನಿದೆ?ಸಾಯೋ ಆಟದಿ ನಿಜಕ್ಕೂ ಸುಖವಿದೆ’.ನಾನಾಗ ‘ಸಾಯೋ ಆಟದಿ ನಿಜಕ್ಕೂ ಸುಖವಿದೆ.ಆದ್ರೆ ಅನುಭವಿಸಲಿಕ್ಕೆ ಉಸಿರು ಮಾತ್ರ ಇರೋಲ್ಲ ನೋಡು ಎಂದು ನಕ್ಕಿದ್ದೆ.ಆತ ಆಗ ಮಾರ್ಮಿಕವಾಗಿ ನಕ್ಕ .

ಅದಾಗಿ ಮರುದಿನವೇ ನಾನು ಹಿಮಾಲಯದೆಡೆ ಹೊರಟು ನಿಂತೆ.ಮರಳಿ ಬರಲಿಕ್ಕೆ ಒಂದು ತಿಂಗಳಾಯ್ತು.ಮರಳಿ ಬಂದವನನ್ನ ಸ್ವಾಗತಿಸಿದ್ದು ತರಹೇವಾರಿ ಊರ ವಿದ್ಯಮಾನಗಳ ಸುದ್ದಿಗಳು.ಮನೆಗೆ ಬಂದ ಮಗನೆದುರು ಅಪ್ಪ ನಾನು ಊರಿನಲ್ಲಿರದಿದ್ದ ಅಷ್ಟೂ ದಿನದ ವರದಿಯನ್ನ ಒಪ್ಪಿಸಿದ.ಅದರ ಮುಖ್ಯಾಂಶವನ್ನಷ್ಟೇ ಈಗ ನಿಮ್ಮೆದುರು ಇಡುತ್ತೇನೆ.ಮನೆಯ ಕೆಲಸದಾಕೆ ಪಾರ್ವತಿಯ ಕುಡುಕ ಗಂಡ ನಾಪತ್ತೆಯಾಗಿ ಒಂದು ತಿಂಗಳಾಯಿತಂತೆ.ಹುಚ್ಚಿ ಹೊಳೆಯ ದಡದಲ್ಲಿ ಒಂದು ಅಪರಿಚಿತ ಶವ ಸಿಕ್ಕಿತಂತೆ.ಯಾವುದೊ ಭಯೋತ್ಪಾದಕ ನಮ್ಮ ಊರಿನಲ್ಲಿ ಬಂದು ಸೇರಿಕೊಂಡಿದ್ದಾನೆ ಎಂಬ ಗುಮಾನಿಯಲ್ಲಿ ಪೊಲೀಸರು ತನಿಖೆಗೆ ಬಂದಿದ್ದರಂತೆ.ಕೊನೆಗೆ ಯಾರೂ ಸಿಗದೆ ವಾಪಾಸ್ ಹೋದರಂತೆ .ಅಪ್ಪ ಇನ್ನೂ ಏನೇನೋ ಹೇಳುವನಿದ್ದ .ಆಗಲೇ ಸಂಜೆ ಆಗುತ್ತಲಿತ್ತು.ಸರಿ ಅಪ್ಪ ಉಳಿದ್ದದ್ದನ್ನೆಲ್ಲ ಆಮೇಲೆ ಹೇಳಿ' ಎಂದು ನಾನು ಹೊಳೆಯ ಕಡೆ ಹೊರಟೆ. ತಿಂಗಳ ನಂತರ ಹೊಳೆ ಹೊಸದಾಗಿ ಕಂಡಿತು.ಸುತ್ತ ಕಣ್ಣಾಡಿಸಿದೆ.ಆತನ ಸುಳಿವೇ ಇಲ್ಲ.ಮರುದಿನ ಕೂಡ ಆತ ನಾಪತ್ತೆ.ಹುಚ್ಚಿ ಹೊಳೆಯ ಸೇತುವೆಯ ಮೇಲೆ ಆತ ಇನ್ನೆಂದೂ ಕಾಣಿಸಲೇ ಇಲ್ಲ.ಅವನ ಶೈಲಿಯಲ್ಲಿಯೇ ಹೊಸದಾಗಿ ಒಂದು ಕವಿತೆ ಬರೆದಿದ್ದೆ.ಆತನಿಗೆ ತೋರಿಸಬೇಕಿತ್ತು.ಎಂದು ಬರುತ್ತಾನೋ ಮರಳಿ .ಗೊತ್ತಿಲ್ಲ....

Sunday, April 10, 2011

ಚಂದ್ರಿ....

ಇವಳು ಚಂದ್ರಿ
ಚಂದ್ರಿ ಬಾಳು ಎಲ್ಲರಂತಲ್ಲ.
ಯಾರದೋ ತೊಗಲ ತೆವಲಿಗೆ
ಅನಿವಾರ್ಯ ಸಂಗಮಕ್ಕೆ
ಹಾರೈಕೆಯಿರದ ಅವ್ವನ ನಿರ್ಭಾವುಕ
ಒಡಲಲ್ಲಿ
ಹತಭಾಗ್ಯ ಪಿಂಡವಾಗಿ
ಈ ಜಗಕೆ ವಿಸರ್ಜನೆಯಾದವಳು ಚಂದ್ರಿ.
ಹುಟ್ಟೇ ಸೋಲಾದವಳು ಚಂದ್ರಿ .
ಅಪ್ಪ ಯಾರೆಂದು ತಿಳಿದಿಲ್ಲ.
ಅವ್ವನಿಗೇ ಅದು ಬೇಕಿರಲಿಲ್ಲ.
ಮಸಕು ಮಸಕು ಅರೆಜೀರ್ಣ
ಗುಡಿಸಲ ನಿರ್ವಿಕಾರ ಕತ್ತಲಲ್ಲಿ
ಯಾರದೋ ಅಪರಿಚಿತ ಛಾಯೆ,
ದಿನಕೆ ಹಲವಾರು ಹೊಸ್ತಿಲ ದಾಟೋ
ಅಪ್ಪನಂಥಹ ಆಕೃತಿಗಳು,
ಬಂದು ಹೋಗುವವರೇ ಬಂಧು ಬಳಗ.
ಎಲ್ಲವ ಅಚ್ಚರಿ ಕಂಗಳಲಿ
ನೋಡಿ ಬೆಳೆದವಳು,
ಅದುವೆ ಬಾಳೆಂದುಕೊಂಡವಳು ಚಂದ್ರಿ.


ವರುಷ ಹದಿನಾರಕ್ಕೆ ಚಂದ್ರಿ ತಬ್ಬಲಿ.
ಅರಿಯದ ವ್ಯಾಧಿಗೆ ಅವ್ವ ತುತ್ತಾದಳು.
ಅವ್ವನ ಬಾಳೀಗ ಚಂದ್ರಿಯದು!
ಅವ್ವನ ಪಾಡೇ ಈಗ ಇವಳದು.
ಚಂದ್ರಿಗೀಗ ಇಳಿಸಂಜೆ.
ಸುಕ್ಕುಮುಕ್ಕು ದೇಹ,ಇಂಗಿದೆದೆ.
ಭಾವವೇ ಇರದ ನಿರ್ಜೀವ ಶೂನ್ಯ ನೋಟ;
ಆಕೆಗೀಗ ಅವ್ವನಂಥದೇ
ಎಂಥದೋ ಕಾಯಿಲೆ.
ಸಾವೊಂದೇ ಅವಳಿಗೀಗ ಸಂಜೀವಿನಿ.
ಹುಟ್ಟೇ ಸೋಲಾದ ಚಂದ್ರಿಗೆ
ಸಾವು ಗೆಲುವಾದೀತೆ?...........

Sunday, March 27, 2011

ಆಸ್ತಿಕತೆ -ನಾಸ್ತಿಕತೆ . ಭಾವನೆ ಹಾಗು ತರ್ಕ .

ನನ್ನ ರೂಮಿನ ಎದುರು ಟೆರೆಸ್ ನ ಒಂದು ತುದಿಯಿಂದ ಇನ್ನೊಂದು ತುದಿಗೆ ರೂಮ್ ಬಾಗಿಲಿಗೆ ಸಮಾನಾಂತರವಾಗಿ ಎಳೆದು ಕಟ್ಟಿರುವ ನಾಲ್ಕು ತಂತಿಗಳಿವೆ. ನಾನು .ನನ್ನ ತಮ್ಮ , ನಮ್ಮ ಮನೆ ಮಾಲೀಕರ ಮನೆಯ ಮಂದಿ, ಜೊತೆಗೆ ಇನ್ನೆರಡು ಬಾಡಿಗೆದಾರರ ಕುಟುಂಬ ;ಹೀಗೆ ಎಲ್ಲರ ಬಟ್ಟೆಯೂ ನೇತಾಡಿ ಒಣಗುವುದು ಅದೇ ಆ ನಾಲ್ಕು ತಂತಿಗಳ ಮೇಲೆ. ನಮ್ಮ ರೂಮಿನ ಬಾಗಿಲು ತೆರೆದು ಟೆರೆಸ್ ಮೆಟ್ಟಿಲ ಕಡೆ ಹೋಗಬೇಕೆಂದರೆ ಈ ನಾಲ್ಕು ತಂತಿಗಳ ಅಡಿಯಲ್ಲೇ ಸಾಗಿ ಹೋಗಬೇಕು. ಕೆಲವೊಮ್ಮೆ ತಂತಿಗಳ ಮೇಲೆ ಒಣಗಲಿಕ್ಕೆ ಹಾಕಿದ ಬಟ್ಟೆಗಳಿದ್ದರೆ ಅವುಗಳನ್ನು ಸರಿಸಿಯೋ ಅಥವಾ ಎತ್ತಿಯೋ ಜಾಗ ಮಾಡಿಕೊಂಡು ಹೋಗಬೇಕು. ಬಟ್ಟೆಗಳೆಂದರೆ ಅಲ್ಲಿ ಸೀರೆ , ಲಂಗ, ಪಂಚೆ , ಅಂಗಿ -ಚಡ್ಡಿ , ಗಂಡಸರ ಬನಿಯನ್ನು .ಹೆಂಗಸರ ಬನಿಯನ್ನು , ಟವೆಲ್ಲು ಇತ್ಯಾದಿ ಇತ್ಯಾದಿ.

ಆವತ್ತು ಸಂಜೆ ಟೆರೆಸ್ ಕಡೆಯಿಂದ ಮೆಟ್ಟಿಲಿಳಿದು ಕೆಳಗೆ ಗೇಟ್ ಕಡೆ ಹೋಗುತ್ತಿದ್ದೆ. “ ಸ್ವಲ್ಪ ನಿಲ್ಲಿ ” ಎಂದು ಯಾರೋ ಕೂಗಿದಂತಾಯಿತು. ನೋಡಿದರೆ ಪಕ್ಕದ ಕಿಟಕಿಯಲ್ಲಿ ಕೆಳಗಿನ ಮನೆ ಆಂಟಿ ಕಂಡರು. ಕರೆದದ್ದು ಯಾಕೆಂದು ಕೇಳುವ ಮುಂಚೆಯೇ ಆಂಟಿ “ ನಿಮ್ಮ ರೂಮಿನಲ್ಲಿ ಒಂದು ದೊಡ್ಡ ಸ್ಟೂಲ್ ಇದೆಯಂತಲ್ಲ. ಓನರ್ ಹೇಳಿದ್ರು. ಸ್ವಲ್ಪ ಕೊಡಿ ಅದನ್ನ. ನಮ್ ಮನೆವ್ರು ಬರ್ತಾರೆ ಕೊಟ್ಟು ಕಳ್ಸಿ ” ಎಂದು, “ ರೀ ಹೋಗ್ರಿ” ಎಂದು ಅಂಕಲ್ ಗೆ ಹೇಳಿದರು. “ ಸರಿ ಆಂಟಿ.ಬೇಕರಿಗೆ ಹೊರಟಿದ್ದೇನೆ.ಹತ್ತು ನಿಮಿಷ ಅಷ್ಟೇ. ಟೀ ಕುಡಿದು ಬಂದು ಸ್ಟೂಲು ಕೊಡುತ್ತೇನೆ” ಎಂದೆ .

ಕೊನೆಗೆ ಟೀ ಮುಗಿಸಿ ರೂಮ್ ಕಡೆ ಬಂದೆ. ನನ್ನ ದಾರಿಯನ್ನೇ ಕಾಯುತ್ತ ಆಂಟಿಯ ಗಂಡ ಅಂಕಲ್ ನನ್ನ ರೂಮ್ ಎದುರು ನಿಂತಿದ್ದರು. ನಾನು ರೂಮ್ ಒಳಗೆ ಬಂದು ಸ್ಟೂಲ್ ತೆಗೆದುಕೊಂಡು ಬಾಗಿಲ ಬಳಿ ನಿಂತು “ ತಗೋಳಿ ಅಂಕಲ್ ಸ್ಟೂಲು” ಎಂದೆ. ಅಂಕಲ್ ಹುಳಿಹುಳಿಯಾಗಿ ನಗುತ್ತಾ ಯಾವುದೋ ಹಿಂಜರಿಕೆಯಲ್ಲಿ ಸುಮ್ಮನೆ ನಿಂತಿದ್ದರು. “ ಏನ್ ಅಂಕಲ್, ಹಾಗೆ ನಿಂತ್ಗೊಂಡ್ ಬಿಟ್ರಿ.ತಗೊಳ್ಳಿ ಸ್ಟೂಲು.ಕೊಡಿ ಆಂಟಿ ಗೆ ” ಎಂದೆ. ಹುಳಿ ಹುಳಿಯಾಗಿ ನಗುತ್ತಲೇ “ ಹ್ಯಾಗ್ರಿ ಆ ಕಡೆ ಹೋಗೋದು ಈ ದೊಡ್ಡ ಸ್ಟೂಲು ತಗೊಂಡು. ಹೋಗೋ ದಾರಿಯಲ್ಲೇ ಬಟ್ಟೆ ಒಣಗಲಿಕ್ಕೆ ಹಾಕಿದ್ದಾರೆ ” ಎಂದು ಕೊಂಚ ಗಂಭೀರರಾದರು. “ ಅಯ್ಯೋ ಅಂಕಲ್. ಅದಕ್ಯಾಕೆ ಅಷ್ಟು ತಲೆಬಿಸಿ. ಇಲ್ಲಿ ನೋಡಿ. ಎಷ್ಟು ಸಿಂಪಲ್ ” ಎಂದು ಎದುರಿದ್ದ ತಂತಿಯ ಮೇಲಿನ ಸೀರೆ ಸರಿಸಿ , ಮುಂದೆ ಎದುರಾದ ಇನ್ನೊಂದು ತಂತಿಯ ಮೇಲಿದ್ದ ಒಣಗಿದ್ದ ಲಂಗವನ್ನ ಎತ್ತಿ ದಾರಿ ಮಾಡಿಕೊಂಡು, ಸ್ಟೂಲ್ ಹಿಡಿದುಕೊಂಡು ಟೆರೆಸ್ ಮೆಟ್ಟಿಲಿನ ಕಡೆ ಅನಾಯಾಸವಾಗಿ ದಾಟಿಕೊಂಡು ಬಂದು, ಯಾವುದೋ ದೊಡ್ಡ ಸಾಹಸ ಮಾಡಿದವನಂತೆ ಹೆಮ್ಮೆಯಿಂದ ಬೀಗುತ್ತ ಅಂಕಲ್ ಮುಖ ನೋಡಿದೆ. ಅಂಕಲ್ ಪೂರ್ತಿ ಗಂಭೀರರಾಗಿಬಿಟ್ಟಿದ್ದರು.:( :(

“ಅದು ಹ್ಯಾಗ್ರಿ ಸೀರೆ ಲಂಗ ಎತ್ತಿ ದಾರಿ ಮಾಡ್ಕೊಂಡು ಹೋದ್ರಿ? ಹಾಗೆಲ್ಲ ಬಟ್ಟೆ ಕೆಳಗೆ ನುಸೀಬಾರದ್ರೀ. ಗ್ರೌಂಡ್ ಫ್ಲೋರ್ ಮನೆವ್ರ ಬಟ್ಟೆ ಕಣ್ರೀ ಅದು. ಅವರದ್ದು ಯಾವ್ದೋ ಜಾತಿ. ಸೀರೆ ಲಂಗದ ಕೆಳಗೆ ನುಸದ್ರೆ ಅವರ ಕಾಲ್ ಕೆಳಗೆ ನುಸದಂಗೆ ಆಗುತ್ತೇರಿ. ನಮ್ಮದೇ ಜಾತಿಯವರ ಸೀರೆ ಲಂಗ ಆದರೆ ಪರವಾಗಿಲ್ಲ. ಹೇಗೋ ಅಡ್ಜಸ್ಟ್ ಮಾಡ್ಕೋ ಬಹುದು ನಮ್ಮವರದೇ ಲಂಗ ಸೀರೆ ಅಂದ್ಕೊಂಡು. ಹೋಗಿ ಹೋಗಿ ಯಾವ್ದೋ ಜಾತಿ ಜನರ ಕಾಲ್ ಕೆಳಗೆ ನುಸೀಬೇಕೇನ್ರಿ. ನೀವೂ ನಮ್ಮ ಜಾತಿಯವರೇ . ನಿಮಗಿನ್ನೂ ಸಣ್ಣ ವಯಸ್ಸು .ಇವೆಲ್ಲ ಸೂಕ್ಷ್ಮ ನಿಮಗೆ ಗೊತ್ತಾಗೋಲ್ಲ - ಎಂದು ನನ್ನ ಮುಖ ನೋಡಿದರು. “ ಅದೆಲ್ಲ ಸರಿ ಅಂಕಲ್. ನೀವು ಹ್ಯಾಗೆ ಈ ಬಟ್ಟೆಗಳನ್ನ ದಾಟಿ ಟೆರೆಸ್ ಮೆಟ್ಟಿಲು ಕಡೆಯಿಂದ ನನ್ನ ರೂಮ್ ಬಾಗಿಲೆದುರು ಬಂದ್ರಿ ?” ಎಂದು ನಾನು ಪ್ರಶ್ನೆಯಾದೆ. ಈಗ ಅಂಕಲ್ ಮುಖ ಹೆಮ್ಮೆಯಿಂದ ಅಗಲವಾಯಿತು ತಾವೆಷ್ಟು ಜಾಣರು ಎಂಬ ಭಾವದಲ್ಲಿ . “ಅಲ್ಲಿ ನೋಡ್ರಿ. ಟೆರೆಸ್ ಆ ಕಡೆ ಮೂಲೆಯಲ್ಲಿ ಒಂದು ಗ್ಯಾಪ್ ಇದೆ. ಅಲ್ಲಿಂದ ಹೇಗೋಬಂದೆ ” ಎಂದು ಟೆರೆಸ್ ನ ಮತ್ತೊಂದು ಮೂಲೆಯ ಕಡೆ ಕೈ ಮಾಡಿ ತೋರಿಸಿದರು. ಅಲ್ಲಿ ಒಣಗಲು ಹಾಕಿದ್ದ ಬಟ್ಟೆಗಳ ಸಾಲಿನಲ್ಲಿ ಒಂದು ಹೆಂಗಸರ ಬನಿಯನ್ನು ಹಾಗು ಒಂದು ಜೀರ್ಣವಾದ ಗಂಡಸರ ಚಡ್ಡಿಯ ನಡುವೆ ಅಂಕಲ್ ಹೇಳಿದ ಎರಡು ಅಡಿಯ ‘ ಗ್ಯಾಪ್ ಕಾಣಿಸಿತು. ಸೀರೆ ಲಂಗದ ಕೆಳಗೆ ನುಸುಳಿದ್ರೆ ‘ ಕಾಲ್ ಕೆಳಗೆ ನುಸ್ದಂಗೆ ’ ಎಂದು ಅಂಕಲ್ ಹೇಳಿದ್ದರಲ್ಲ. ಈ ಹೆಂಗಸರ ಬನಿಯನ್ನು ಹಾಗು ಜೀರ್ಣವಾದ ಗಂಡಸರ ಚಡ್ಡಿಯ ನಡುವೆ ಅಂಕಲ್ ಹೇಳಿದ ‘ನುಸಿಯುವ’ ಮಾತನ್ನು ಹೇಗೆ ಅನ್ವಯಿಸಬೇಕೆಂಬುದು ನನಗೆ ಹೊಳೆಯಲಿಲ್ಲ. ನನ್ನ ಆ ಯೋಚನೆಗೆ ನಾನೇ ನಕ್ಕುಬಿಟ್ಟೆ.“ಯಾಕ್ರೀ ನಗ್ತೀರ?”. “ ಯಾಕೂ ಇಲ್ಲ ಅಂಕಲ್. ನಿಮ್ಮದು ತಲೆ ಅಂದ್ರೆ ತಲೆ.ನೀವು ಮಾಡಿದ ಐಡಿಯಾ ನೋಡಿ ಖುಷಿಯಾಯ್ತು.ಅಷ್ಟೇ” ಎಂದೆ. ನನ್ನ ಮಾತು ಕೇಳಿ ಅಂಕಲ್ ಗೆ ಸ್ವಲ್ಪ ಸಮಾಧಾನವಾಯ್ತು. ನನಗೆ ಆಚಾರ ,ವಿಚಾರವನ್ನ ತಿಳಿಸಿ ಮನವರಿಕೆ ಮಾಡಿಕೊಟ್ಟ ಖುಷಿ ಅವರ ಮುಖದಲ್ಲಿ ಅಗಲವಾಗಿ ಹರಡಿಕೊಂಡಿತ್ತು.

ನಾನು ಇನ್ನೂ ಏನೋ ಹೇಳಬೇಕೆಂದು ಬಾಯಿ ತೆರೆದೆ. ಅಂಕಲ್ ಗೆ ಆಗಲೇ ವಯಸ್ಸು ನಲವತ್ತರ ಮೇಲಾಗಿದೆ. ಕಟ್ಟಾ ಸಂಪ್ರದಾಯಸ್ಥರು .ಅವರ ಹಿರಿಯ ಅಣ್ಣ ಹಾಗು ಒಬ್ಬ ತಮ್ಮ ಸ್ವಾಮೀಜಿಗಳಂತೆ.ಅಂಕಲ್ ನಾಲ್ಕು ಮನೆಯ ಪೂಜೆ ಕೆಲಸಕ್ಕೆ ಪ್ರತಿ ನಿತ್ಯ ಹೋಗುತ್ತಿದ್ದವರು . ನಾನು ಹೇಳಲಿರುವ ಮಾತು ಅವರ ಮೇಲೆ ಪರಿಣಾಮ ಬೀರುವ ವಿಶ್ವಾಸ ನನಗೆ ಕಾಣಲಿಲ್ಲ. ಬಾಯಿ ತೆರೆದವನು ಬಾಯಿ ಮುಚ್ಚಿ ಸುಮ್ಮನಾಗಿಬಿಟ್ಟೆ .

ಆ ಘಟನೆ ಆದ ಮೇಲಿಂದ ಅಂಕಲ್ ಗೆ ನನ್ನ ಮೇಲೆ ವಿಶೇಷ ಪ್ರೀತಿ; ಅವರ ಧರ್ಮೋಪದೇಶಕ್ಕೆ ತಲೆದೂಗಿ ಕೋಲೆ ಬಸವನಂತೆ ತಲೆದೂಗಿದ ಕಾರಣಕ್ಕೆ. ಅದಾಗಿ ಸ್ವಲ್ಪ ದಿನದ ನಂತರ ನನ್ನ ರೂಮಿಗೆ ಬರುವ ದಾರಿಯಲ್ಲಿ ಅಂಕಲ್ ಎದುರಾದರು. “ ಸ್ವಲ್ಪ ನಿಲ್ಲಿ ಇವ್ರೇ. ದೇವರಿಗೆ ವಿಶೇಷ ಪೂಜೆ ಮಾಡಿದ್ದೇನೆ .ಪ್ರಸಾದ ತಂದುಕೊಡ್ತೇನೆ” ಎಂದು ಎರಡು ಬಾಳೆಹಣ್ಣು ತಂದು ಕೊಟ್ಟರು. ನನ್ನ ಬಲಗೈ ಮುಂದೆ ಮಾಡಿ ಬಾಳೆಹಣ್ಣು ತೆಗೆದುಕೊಂಡೆ. ಎಡಗೈ ನಲ್ಲಿ ಊಟಕ್ಕೆಂದು ತಂದಿದ್ದ ಪಾರ್ಸೆಲ್ ಇತ್ತು. ಅದರಲ್ಲಿ ಇದ್ದದ್ದು ಒಂದು ರಾಗಿ ಮುದ್ದೆ ಹಾಗು ಎರಡು ಮೊಟ್ಟೆ. ಅಂಕಲ್ ನಂಬುವ ದೇವರಲ್ಲಿ ನನ್ನದೊಂದು ಕ್ಷಮೆ ಕೋರಿ ನಾಸ್ತಿಕನಾದ ನಾನು ರೂಮಿಗೆ ಬಂದು ಬಿಟ್ಟೆ.

ರೂಮಿಗೆ ಬಂದವನು ನಾನು ತಂದಿದ್ದ ಊಟದ ಪಾರ್ಸೆಲ್ ಹಾಗು ಅಂಕಲ್ ಕೊಟ್ಟ ಬಾಳೆಹಣ್ಣುಗಳನ್ನ ದೂರ ದೂರವೇ ಇಟ್ಟೆ. ರಾಗಿ ಮುದ್ದೆ ಹಾಗು ಮೊಟ್ಟೆಯ ಊಟದ ಜೊತೆ ಬಾಳೆಹಣ್ಣು ತಿನ್ನಲಿಲ್ಲ. ಕೊನೆಗೆ ರಾತ್ರಿ ಎರಡು ಘಂಟೆಗೆ ಮಲಗುವ ಸಮಯಕ್ಕೆ ಬಾಳೆಹಣ್ಣು ತಿಂದು ಮಲಗಿದೆ. ನಾನು ನಾಸ್ತಿಕ ನಿಜ. ಆದರೆ ಆಸ್ತಿಕರ ನಂಬಿಕೆಯನ್ನ ಅಗೌರವದಿಂದ ಕಾಣುವ ಹಕ್ಕು ನನಗಿಲ್ಲ. ನನ್ನ ಅಭಿಪ್ರಾಯವನ್ನ ವ್ಯಕ್ತಪಡಿಸುವ ಹಕ್ಕು ನನಗಿದೆ. ಆದರೆ ನನ್ನ ಅಭಿಪ್ರಾಯವನ್ನ ಯಾರ ಮೇಲೂ ಹೇರುವ ಹಕ್ಕು ನನಗಿಲ್ಲ. ಅಂಕಲ್ ಬೆಳೆಸಿಕೊಂಡು ಬಂದ ಅತಿರೇಕದ ಜಾತಿ ಪ್ರೇಮವಾಗಲಿ, ಬಾಲಿಶ ಚಿಂತನೆಯ ಕ್ರಮವಾಗಲಿ ; ಅವು ಏನೇ ಇರಲಿ. ಆದರೆ ಅವರು ನನಗೆ ಬಾಳೆಹಣ್ಣು ಕೊಡುವಾಗ ಅವರ ಮನಸ್ಸಿನಲ್ಲಿದ್ದುದು ‘ ದೇವರ ಪ್ರಸಾದ. ಹುಡುಗನಿಗೆ ಒಳ್ಳೇದಾಗಲಿ - ಎಂಬ ಭಾವನೆ ಮಾತ್ರ. ಆ ಕಾರಣಕ್ಕೆ ದೇವರನ್ನು ನಂಬದ ನಾನು ಅಂಕಲ್ ಕೊಟ್ಟ ಬಾಳೆಹಣ್ಣುಗಳನ್ನ ಭಕ್ತಿಯಿಂದ ತಿಂದೆ. ಭಾವನೆ ಬಾಳೆಹಣ್ಣಿನ ತಿರುಳಿದ್ದಂತೆ. ಇಲ್ಲಿ ತರ್ಕ ಸಿಪ್ಪೆಯಂತೆ. ಭಾವನೆ ಮುಖ್ಯವಾಗಬೇಕಾದ ಜಾಗದಲ್ಲಿ ತರ್ಕ ಯಾಕೆ? ನಾನು ಹಣ್ಣು ತಿಂದು ಸಿಪ್ಪೆಯನ್ನ ಎಸೆದು ನಿರಮ್ಮಳವಾಗಿ ದೈವಾನುಗ್ರಹದಲ್ಲಿ ಮಲಗಿಬಿಟ್ಟೆ.:) :)

Saturday, March 19, 2011

ಗುಡ್ ನೈಟ್ ಕವನ ೪ ....

ಬರೆದ ಓಲೆಗಳಲಿ
ದುಃಖ ದುಮ್ಮಾನ ನೋವಿನ ಪದಗಳಿತ್ತು.
ಬರೆವ ಘಳಿಗೆಯಲಿ ಕಣ್ಣಂಚಲಿ ಕುಳಿತಿದ್ದ
ಮಂಜು ಮಂಜು ಹನಿಸಾಲು ನಿನಗೆಲ್ಲಿ ಕಂಡಿತ್ತು ?

ಓಲೆ ಸಿಗುವಾಗಲೆಲ್ಲ ಎಲ್ಲೆ ಮೀರಿದ
ದೈವೀಕ ಸಂತಸ ನಿನ್ನದಾಗುತ್ತಿತ್ತು
ಆದರೆ
ಕೊನೆಯ ಸಾಲು ಬರೆವ ಮುನ್ನವೇ
ಎಲ್ಲಿ ಭಾವ ಭಾರಕೆ ಕುಸಿದು ಮಲಗುವೆನೋ
ಎನುವ ಎನ್ನ ಅಸಹಾಯಕತೆ ನಿನಗೆಲ್ಲಿ ತಿಳಿದಿತ್ತು ?


ಕೆಲವಷ್ಟು ಹಾಗೆಯೇ
ಪದ ಮೀರಿದ್ದು
ಕಲ್ಪನೆಗೆ ತಾಕದ್ದು
ನಿನ್ನುಸಿರು ತಾಕುವ ಸನಿಹವೇ ಬೇಕು
ಮೆಲ್ಲಗೆ ನಿನ್ನ ಕಿವಿಯ ಬಳಿ ತುಟಿಯಿಟ್ಟು
ಎಲ್ಲ ಹೇಳಬೇಕು
ಮತ್ತೆ ನೀನು ಎನ್ನೆದೆಗೆ ತಲೆಯಿಟ್ಟು
ಎದೆಯ ಗೂಡಿನ ದನಿಗೆ ಕಿವಿಯಾಗಬೇಕು
ನೀನೇ ನಾನಾಗಬೇಕು
ನಾನು ನೀನಾಗಿ.....

Saturday, March 12, 2011

ಒಂದು ಸ್ಯಾಂಪಲ್ .............................

“ ಯಾರೋ ಹತ್ತಿರ ಬರುತ್ತಿದ್ದಾರೆ .ಹತ್ತಿರವಾದಷ್ಟೂ ಬೃಹದಾಕಾರವಾಗಿ ಬೆಳೆಯುತ್ತಿದ್ದಾರೆ. ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಭಯ ವಿಪರೀತವಾಗಿ ಎಂಥದೋ ಒಂದು ಬಗೆಯ ಸಂಕಟ. ಓಡಿಹೋಗೋಣವೆಂದುಕೊಂಡರೆ ಸಾಧ್ಯವಾಗುತ್ತಿಲ್ಲ .ಯಾವುದೋ ಶಕ್ತಿಯ ಅಧೀನದಲ್ಲಿ ನಿಶ್ಚಲನಾದ ಅನುಭವ. ಸಹಾಯಕ್ಕೆ ಯಾರನ್ನೋ ಕೂಗುತ್ತಿದ್ದೇನೆ. ಕೂಗುತ್ತಿದ್ದರೂ ಧ್ವನಿಯೇ ಹೊರಡುತ್ತಿಲ್ಲ. ಈಗ ಆ ಆಕೃತಿ ಎದೆಯ ಮೇಲೇರಿ ಕುಳಿತು ಕತ್ತು ಹಿಚುಕುತ್ತಿದೆ. ಇನ್ನೇನು ಉಸಿರು ನಿಂತೇ ಹೋಯಿತು ಎನ್ನುವಾಗ ಎಚ್ಚರವಾಯಿತು. ಈಗ ಮೈಯೆಲ್ಲಾ ಹೂ ಹಗುರ. ಸಾವಿನ ನಂತರ ಇರಬಹುದಾದ ಶಾಂತಿಯನ್ನ ತಾಕಿ ಬಂದ ಅನುಭವ. ಬೆಳಗ್ಗಿನ ಐದರ ಜಾವದಲ್ಲಿ ವಿಧ್ಯಾಧರ ಎದ್ದು ಕುಳಿತ. ವರುಷ ಇಪ್ಪತ್ತಾದರೂ ಒಮ್ಮೆಯೂ ಹೀಗಾಗಿರಲಿಲ್ಲ. ಹೀಗಾಗಲು ಕಾರಣವೇನೆಂದು ಯೋಚನೆಗೆ ಬಿದ್ದ. ನಿದ್ರೆ ಮತ್ತೆ ಕಣ್ಣಿಗೆ ಹತ್ತಲಿಲ್ಲ. ಸುಮ್ಮನೆ ಬೋರಲಾಗಿ ಕಣ್ಣು ಬಿಟ್ಟುಕೊಂಡು ನಿಚ್ಚಳ ಬೆಳಗಿಗೆ ಎದುರು ನೋಡುತ್ತಾ ಮಲಗಿಯೇ ಇದ್ದ.

‘ ಏಯ್ ವಿದ್ಯಾಧರ ,ಘಂಟೆ ಯೋಳಾತು. ತಿಂಡಿಗೆ ಬಾರಾ. ಲೇಟ್ ಆಗಿ ಬಂದ್ರೆ ಬಿಸಿ ದೋಸೆ ಸಿಗಲ್ಲೇ ‘ ಎಂದು ಅಮ್ಮ ಅಡುಗೆ ಮನೆಯಿಂದಲೇ ಕೂಗುತ್ತಿದ್ದರು. ವಿದ್ಯಾಧರ ಕಣ್ಣು ಬಿಟ್ಟುಕೊಂಡು ಮಲಗಿದ್ದ. ಹಾಗಾಗಿ ಅಮ್ಮನ ಕೂಗು ಕಿವಿಗೆ ತಲುಪುವಲ್ಲಿ ತಡವಾಗಲಿಲ್ಲ. ಜಗುಲಿಯಲ್ಲಿ ಮಲಗಿದ್ದ ವಿದ್ಯಾಧರ ಎದ್ದು ಮುಖ ತೊಳೆವ ಶಾಸ್ತ್ರ ಮುಗಿಸಿ ಅಡುಗೆಮನೆಗೆ ಬರುವಷ್ಟರಲ್ಲಿ ಅವನಿಗಾಗಿ ಅಮ್ಮ ಮಾಡಿದ ಬಿಸಿ ದೋಸೆ ಹೊಗೆ ಹೊಗೆಯಾಗಿ ,ಕಾಯಿ ಚಟ್ನಿಯೊಂದಿಗೆ ಪ್ಲೇಟಿನಲ್ಲಿ ಕಾಯುತ್ತಿತ್ತು. ಮೆತ್ತನೆಯ ದೊಸೆಯನ್ನು ಮೃದುವಾಗಿ ಹರಿದು ಚಟ್ನಿಯೊಂದಿಗೆ ಮೆಲ್ಲಗೆ ವಿದ್ಯಾಧರ ಅನ್ಯಮನಸ್ಕನಾಗಿ ಬೆಳಿಗ್ಗೆ ಐದರ ಜಾವದಲ್ಲಿ ಕಂಡ ಕನಸಿನ ಬಗ್ಗೆಯೇ ಯೋಚಿಸುತ್ತಾ ಬಾಯಿಗಿಡುತ್ತಾ ಕುಳಿತ. ಅದೇ ಯೋಚನೆಯಲ್ಲಿಯೇ ಬಿಸಿಬಿಸಿಯಾಗಿದ್ದ ಚಹಾ ಎತ್ತಿಕೊಂಡು ತುಟಿಗಿಟ್ಟು ಹೀರಿದ.. ಹಾಗೆ ತುಟಿಗಿಟ್ಟ ಚಹಾ ತುಟಿಯಿಂದ ಹಿಡಿದು ನಾಲಿಗೆಯನ್ನೂ ಒಳಗೊಂಡು ಗಂಟಲಿನ ಶುರುವಿನ ತನಕ ಬಿಸಿ ಮುಟ್ಟಿಸಿತ್ತು. ಚಹಾ ಲೋಟ ಕೈಜಾರಿ ಗೋವಾ ಚಡ್ಡಿಯ ಅಂಚನ್ನು ಚಹಾ ಒದ್ದೆಮಾಡಿ, ಅದರಾಚೆಯ ಬೆತ್ತಲೆ ತೊಡೆಯನ್ನು ತಾಕಿ ಬಿಸಿ ಮುಟ್ಟಿಸಿ ಅಂಟಾಗಿಹೋಯಿತು. ' ಎಂಥಾ ಹುಡುಗ್ರೆನ. ಇಷ್ಟೆಲ್ಲಾ ಪರಧ್ಯಾನತೆ ಒಳ್ಳೇದಲ್ಲ. ಸ್ವಲ್ಪ ನೋಡ್ಕಂಡು ಕುಡಿಯದಲ್ದ ‘ ಎಂದು ಅಮ್ಮ ಕಿಡಿಕಿಡಿಯಾದರು ಕೊಂಚ ಸಿಟ್ಟು ಕೊಂಚ ಕಾಳಜಿಯಲ್ಲಿ. ' ಅಮ್ಮ, ಈವತ್ತು ಬೆಳಿಗ್ಗೆ ಎಂತ ಆತು ಗೊತ್ತಿದ್ದ ? ‘ ಎಂದು ವಿದ್ಯಾಧರ ಅಮ್ಮನೆಡೆ ನೋಡಿದ.’ ಎಂತ ಆತಾ ಮಾರಾಯ ಬೆಳ ಬೆಳಿಗ್ಗೆ ನಿಂಗೆ? ಅಂಥಾ ಕೆಲಸ ಎಂತ ಮಾಡಕ್ಕೆ ಹೋಗಿದ್ದೆ ? ಎದ್ದಿದ್ದೇ ಬೆಳಿಗ್ಗೆ ಯೋಳು ಘಂಟಿಗೆ .ಹ್ಮಂ ಸರಿ ಹೇಳು ' ಎಂದು ಹೇಳುತ್ತ ಅಮ್ಮ ಕಾವಲಿ ಮೇಲೆ ಮುಂದಿನ ದೋಸೆಗೆ ಹಿಟ್ಟು ಸುರಿದಳು. ' ಅಮ್ಮ .ಎಂತ ಆತು ಅಂದ್ರೆ ‘ ಎಂದು ಶುರುಮಾಡಿ ' ಹಿಂಗಿಂಗೆ ಆತು.ಇದಕ್ಕೆ ಎಂಥ ಮಾಡವು ‘ ಎಂದು ಹೇಳಿ ವಿದ್ಯಾಧರ ಐದರ ಜಾವದ ವಿದ್ಯಮಾನದ ವರದಿ ಒಪ್ಪಿಸಿ ಮುಗಿಸಿ ಮತ್ತೆ ಅಮ್ಮನ ಮುಖ ನೋಡುತ್ತಾ ಕುಳಿತ. ಅಮ್ಮನಿಂದ ಕೊಂಚ ಗಾಬರಿ ಹಾಗು ಕೊಂಚ ಅನುಕಂಪ ವಿದ್ಯಾಧರನ ನಿರೀಕ್ಷೆಯಾಗಿತ್ತು.

‘ ಹಂಗೆಲ್ಲ ಆಗ್ತಪ ಮನುಷ್ಯ ಜನ್ಮ ಅಂದ್ಮೇಲೆ. ಎಂತೋ ಕೆಟ್ಟ ಕನಸು ಆಗಿಕ್ಕು. ಅದ್ಕೆಲ್ಲ ನಿಂಗ ಹುಡುಗ್ರು ತಲೆಬಿಸಿ ಮಾಡ್ಕಂಡು ಕೂರದಲ್ಲ. ಹುಡುಗ್ರು ತಿನ್ಕಂಡು ಉಂಡ್ಕಂಡು ಅರಾಮ್ ಇರವು . ನಿಂಗೆ ಇನ್ನೊಂದು ದೋಸೆ ಬೇಕಾ? ಬೇಕಾದ್ರೆ ಮಾಡ್ಕೊಡ್ತಿ .ಇಲ್ಲೇ ಅಂದ್ರೆ ಕಾವಲಿ ತೆಗಿತಿ “ ಎಂದು ಹೇಳಿದ ಅಮ್ಮ ವಿದ್ಯಾಧರನ ನಿರೀಕ್ಷೆಗೆ ನೀರು ಹಾಕಿದ್ದರು.' ಬ್ಯಾಡ ಸಾಕು.ಇನ್ಮೇಲೆ ನಿನ್ನತ್ರೆ ಎಂತನ್ನೂ ಹೇಳಲ್ಲೇ ' ಎಂದು ಸಿಟ್ಟುಮಾಡಿಕೊಂಡು ವಿದ್ಯಾಧರ ಎದ್ದ. ' ಸ್ವಲ್ಪ ಚಟ್ನಿ ಹಂಗೇ ಇದ್ದಲ ಬಟ್ಟಲಲ್ಲಿ .ವೇಸ್ಟ್ ಮಾಡಲಾಗ.ಒಂದು ದೋಸೆ ಹಾಕ್ತಿ.ಚಟ್ನಿ ಖಾಲಿ ಮಾಡು ' ಎಂದು ಬಡಬಡಿಸಿದಳು .ವಿದ್ಯಾಧರ ತನ್ನ ಪಾಡಿಗೆ ತಾನು ಅಮ್ಮನ ಮಾತುಗಳನ್ನ ಕಿವಿಗೆ ಹಾಕಿಕೊಳ್ಳದೆ ಹೋಗಿಯೇಬಿಟ್ಟ. ಅಮ್ಮ ಅವಳ ಪಾಡಿಗೆ ಅವಳು ಒಲೆಯ ಮೇಲಿಂದ ಕಾವಲಿ ತೆಗೆದು ನೀರು ಸುರಿದಳು. ಕಾವಲಿ ಚುರು ಚುರುಗುಟ್ಟಿ ಕೊನೆಗೆ ಬುಸ್ಸೆಂದು ಹೊಗೆಯಾಯಿತು.
..........................................................


“ಒಯ್ ಸುಬ್ಬಣ್ಣ .ಬಾರಾ ಇಲ್ಲಿ . ಸ್ವಲ್ಪ ಬಂದು ಹೋಗ ಇಲ್ಲಿ. ನೋಡಿದ್ರು ನೋಡದೆ ಇದ್ದಂಗೆ ಹೋಗ್ತ್ಯಲೋ ಮಾರಾಯ. ದೊಡ್ ಮನಶ ಆಗೊಜ್ಯಪ ಈಗಿತ್ಲಾಗಿ.ಕಾಣದೆ ಅಪರೂಪ ‘ ಎಂದು ಮನೆಯ ಅಂಗಳದಲ್ಲಿದ್ದ ವಿದ್ಯಾಧರನ ಅಪ್ಪ ಸತ್ಯಣ್ಣ ರಸ್ತೆಯಲ್ಲಿ ಹೋಗುತ್ತಿದ್ದ ಸುಬ್ಬಣ್ಣನನ್ನ ಧ್ವನಿ ಎತ್ತರಿಸಿ ಕರೆದ. ಧ್ವನಿ ಬಂದಕಡೆ ತಿರುಗಿ ನೋಡಿದ ಸುಬ್ಬಣ್ಣ ಒಮ್ಮೆ ದೇಶಾವರಿಯ ನಗೆ ನಕ್ಕು , ಬಾಯಲ್ಲಿದ್ದ ಎಲೆ ಅಡಿಕೆಯನ್ನು ಸತ್ಯಣ್ಣನ ಮನೆಯ ಎದುರಿನ ಗಟಾರಕ್ಕೆ ಉಗಿದು, ಕೈಯಲ್ಲಿದ್ದ ಕೊಡೆಯನ್ನ ಮಡಚಿ ಎಡ ಕಂಕುಳಲ್ಲಿ ಇಟ್ಟುಕೊಂಡು, ಬಲಗೈಯಿಂದ ಬಾಯಿ ಒರೆಸಿಕೊಂಡು ,ಕೊನೆಗೆ ಅದೇ ಕೈಯನ್ನು ತನ್ನ ಬಿಳಿ ಪಂಚೆಗೆ ಒರೆಸಿಕೊಳ್ಳುತ್ತಾ ಸತ್ಯಣ್ಣನ ಬಳಿ ಬಂದ ....

Saturday, March 5, 2011

ದೊಡ್ಡೋರ್ದೆಲ್ಲಾ ದೊಡ್ಡದಲ್ಲ .....

ಕೆಲವಷ್ಟು ತೀರಾ ತೀರಾ ಸಣ್ಣದು.....

ಕ್ರಿಕೆಟ್ ಮೂರ್ಖರ ಆಟ. ಹಾಗೆಂದು ಖ್ಯಾತ ಆಂಗ್ಲ ನಾಟಕಕಾರ ಬರ್ನಾಡ್ ಷಾ ಯಾವಾಗಲೋ ಹಿಂದೊಮ್ಮೆ ಅವನ ಕಾಲದಲ್ಲಿ ಹೇಳಿದ್ದನಂತೆ. ಪ್ರೈಮರಿ ಶಾಲೆಯಲ್ಲಿ ಕ್ರಿಕೆಟ್ ದ್ವೇಷಿಯಾದ ಓರ್ವ ಮೇಷ್ಟ್ರು ನಮಗೆ ಗೊತ್ತಿಲ್ಲದ ಬರ್ನಾಡ್ ಷಾನನ್ನು ನಡುವೆ ತಂದು ಕ್ರಿಕೆಟ್ ಬಗ್ಗೆ ಬಾಯಿಗೆ ಬಂದಂತೆ ಬಯ್ದು ಕ್ರಿಕೆಟ್ ನ ಜನ್ಮ ಜಾಲಾಡಿಬಿಟ್ಟಿದ್ದರು. ಖುದ್ದು ಮೇಷ್ಟ್ರೇ ‘ಕ್ರಿಕೆಟ್ ಮೂರ್ಖರ ಆಟ ಅಂತ ಹೇಳಿಬಿಟ್ರು. ಈ ಮೇಷ್ಟರಿಗೆ ಅದ್ಯಾರೋ ಬರ್ನಾಡ್ ಷಾ ಎಂಬ ದೊಡ್ಡ ಮನುಷ್ಯನ ಬೆಂಬಲ ಬೇರೆ. ನಾವು ಸಣ್ಣವರು. ದೂಸರಾ ಉಸಿರಿಲ್ಲದೆ ವಿಧೇಯರಾಗಿ ಮೇಷ್ಟ್ರ ಮಾತಿಗೆ ಹೌದೆಂದು ತಲೆಯಲ್ಲಾಡಿಸಿದ್ದೆವು. ಅವತ್ತು ಒಂದು ದಿನ ಎಲ್ಲಿಯೂ ಕ್ರಿಕೆಟ್ ಆಡಲಿಲ್ಲ. ಮರುದಿನದಿಂದ ಆ ಮೇಷ್ಟ್ರು ವರ್ಗ ಆಗಿ ಹೋಗುವ ತನಕ ಶಾಲೆಯ ಅಂಗಳದಲ್ಲಿ ಕ್ರಿಕೆಟ್ ಆಡಲೇ ಇಲ್ಲ.

ಕ್ರಿಕೆಟ್ ಮೂರ್ಖರ ಆಟ ಎಂದು ಮೇಷ್ಟ್ರು ಹೇಳಿದ್ದರು.ಅದ್ಯಾರೋ ಬರ್ನಾಡ್ ಷಾ ಬೇರೆ ಇದೇ ಮಾತನ್ನು ಹೇಳಿದ್ದನಂತೆ. ನಾವೂ ಅದನ್ನು ಒಪ್ಪಿಕೊಂಡಾಗಿತ್ತು ಮೇಷ್ಟ್ರ ಸಮ್ಮುಖದಲ್ಲಿ. ಆದರೂ ನಮಗೆ ಕ್ರಿಕೆಟ್ ಎಂಬ ಕಣ್ಣೆದುರಿನ ಖುಷಿಯನ್ನ ತರ್ಕದ ಕಾರಣಕ್ಕೆ ದೂರವಿಡುವಲ್ಲಿ ಅರ್ಥವೇ ಕಾಣಲಿಲ್ಲ. ನಾವು ನಮ್ಮ ಪಾಡಿಗೆ ನಮ್ಮ ಕ್ರಿಕೆಟ್ ಜೊತೆ ಖುಷಿಯಾಗಿದ್ದೆವು. ಆದರೂ ಈ ‘ಕ್ರಿಕೆಟ್ ಮೂರ್ಖರ ಆಟ ಎಂಬ ಮಾತು ಆಗೊಮ್ಮೆ ಈಗೊಮ್ಮೆ ಮನಸ್ಸಿಗೆ ಬಂದು ಹೋಗುತ್ತಿತ್ತು. ಕ್ರಿಕೆಟ್ ಮೂರ್ಖರ ಆಟವೆಂದು ಹಳಿಯುತ್ತಿದ್ದ ಮೇಷ್ಟ್ರು ಇಸ್ಪೀಟು ಆಡುತ್ತಿದ್ದರು. ಇಸ್ಪೀಟು ಆಡುವವರಿಗೆ ಕ್ರಿಕೆಟ್ ಮೂರ್ಖರ ಆಟವೆಂದು ಹೇಳುವಲ್ಲಿ ಯಾವ ಹಕ್ಕಿದೆ ಎಂಬ ಯೋಚನೆ ಆ ವಯಸ್ಸಿಗೆ ಬರುತ್ತಲೇ ಇರಲಿಲ್ಲ. ಮೇಷ್ಟ್ರು ದೊಡ್ಡವರು. ಬರ್ನಾಡ್ ಷಾ ಮೇಷ್ಟ್ರಂಥ ಮೇಷ್ಟರಿಗೆ ಮಾದರಿ ಮನುಷ್ಯ. ಅಂದಮೇಲೆ ಅವನು ಇನ್ನೂ ದೊಡ್ಡವನು. ದೊಡ್ಡವರು ಹೇಳಿದ್ದೆಲ್ಲ ದೊಡ್ಡದೇ ಎಂದು ಆಗ ಚಿಕ್ಕವರಾದ ನಮ್ಮ ಭಾವನೆ.

ಈಗೀಗ ಅರ್ಥವಾಗುತ್ತಿದೆ.ದೊಡ್ಡವರು ಹೇಳಿದ್ದೆಲ್ಲ ದೊಡ್ಡದಲ್ಲ. ದೊಡ್ದವರದ್ದೆಲ್ಲ ದೊಡ್ಡದಲ್ಲ. ದೊಡ್ಡವರು ಹೇಳಿದ್ದಕ್ಕೆಲ್ಲ ಹಿಂದೆ ಮುಂದೆ ನೋಡದೆ ಗೋಣು ಹಾಕುವುದರಲ್ಲಿ ಯಾವ ದೊಡ್ದತನವೂ ಇಲ್ಲ. ಬರ್ನಾಡ್ ಷಾ ದೊಡ್ಡ ನಾಟಕಕಾರ ನಿಜ. ಆದರೆ ಕ್ರಿಕೆಟ್ ಮೂರ್ಖರ ಆಟವೆಂದು ಹೇಳುವಲ್ಲಿ ಆ ದೊಡ್ಡ ಮನುಷ್ಯನಲ್ಲಿ ಯಾವ ದೊಡ್ದತನವೂ ಕಾಣುವುದಿಲ್ಲ. ದೊಡ್ಡ ನಾಟಕಕಾರ ಎಂಬ ದೊಡ್ದಸ್ತಿಕೆಯಲ್ಲಿ ಎಲ್ಲ ವಿಷಯಗಳಲ್ಲಿ ಇದಮಿತ್ಥಂ ಎನುವಂತೆ ಮಾತನಾಡುವಲ್ಲಿ ಆತನಿಗೆ ಯಾವ ಹಕ್ಕೂ ಇಲ್ಲ. ಬರ್ನಾಡ್ ಷಾ ಗ್ರೇಟ್. ಹಾಗೆಯೇ ಅವನ ಕಾಲದಲ್ಲಿ ಆಗಿಹೋದ ಕ್ರಿಕೆಟಿನ ದಂತಕಥೆ ಡಾನ್ ಬ್ರಾಡ್ಮನ್ ಕೂಡ ಅಷ್ಟೇ ಗ್ರೇಟ್. ಇಷ್ಟು ಅರ್ಥವಾಗದ ಮೇಷ್ಟ್ರು ಕೂಡ ಈಗ ಅಷ್ಟೊಂದು ದೊಡ್ಡವರಾಗಿ ಕಾಣುವುದಿಲ್ಲ.

ಕೆಲವು ದೊಡ್ದವರೇ ಹಾಗೆ. ಕೆಲವೊಮ್ಮೆ ಒಂದಿಷ್ಟು ಸಣ್ಣತನಗಳು ಒಟ್ಟಾಗಿ ಸೇರಿ ರಾಶಿಯಾಗಿ ದೊಡ್ಡವರಾದಂತೆ ಕಾಣುತ್ತಾರೆ. ಅತ್ತ ಬರ್ನಾಡ್ ಷಾ ತನ್ನದಲ್ಲದ ಕ್ಷೇತ್ರವಾದ ಕ್ರಿಕೆಟ್ ಬಗ್ಗೆ ಹಗುರವಾಗಿ ಮಾತಾಡಿಬಿಟ್ಟ.ನಮ್ಮ ಮೇಷ್ಟ್ರು ಬರ್ನಾಡ್ ಷಾ ಹೇಳಿದ್ದನೆಂಬ ಕಾರಣಕ್ಕೆ ಹಿಂದೆ ಮುಂದೆ ನೋಡದೆ ತಮಗೆ ಕ್ರಿಕೆಟ್ ಇಷ್ಟವಿಲ್ಲ ಎಂಬ ಕಾರಣಕ್ಕೆ ಸ್ವಂತ ಬುದ್ಧಿಯನ್ನು ಬಿಟ್ಟು ತಾವೂ ಕೂಡ ಕ್ರಿಕೆಟ್ ಮೂರ್ಖರ ಆಟವೆಂದು ಹೇಳಿಬಿಟ್ಟರು. ಬರ್ನಾಡ್ ಷಾ ಬಿಡಿ. ನಾನಂತೂ ಅವನನ್ನ ನೋಡಿಲ್ಲ. ಆದರೆ ಈ ಮೇಷ್ಟರನ್ನ ನೆನಪಿಗೆ ತಂದುಕೊಂಡಾಗ ಕೊಂಚ ಖೇದವಾಗುತ್ತೆ.

ಮೇಷ್ಟರನ್ನು ನೆನಪಿಗೆ ತಂದುಕೊಂಡಾಗ ಖೇದವಾಗಲಿಕ್ಕೆ ಕಾರಣವಿದೆ. ಇಲ್ಲಿ ಮೇಷ್ಟ್ರು ಕೇವಲ ಮೇಷ್ಟರಲ್ಲ. ಅವರು ನಮ್ಮೆಲ್ಲರ ಪ್ರತಿನಿಧಿ. ನಾವು ಆರಾಧನೆಗೆ ,ಭಾವುಕತೆಗೆ ಬೀಳಬೇಕು ನಿಜ. ತೀರಾ ಅತಿಯಾದ ತರ್ಕ ಒಳ್ಳೆಯದಲ್ಲ ಎಂಬುದೂ ನಿಜ. ಆದರೆ ಯಾರೋ ಹೇಳಿದರು ಎಂಬ ಕಾರಣಕ್ಕೆ ಯಾವ ವಿಚಾರಗಳೂ ನಮ್ಮದಾಗಬಾರದು. ನಮ್ಮ ಮಾತುಗಳಿಗೆ ನಮ್ಮ ಅನುಭವಗಳೇ ಮೊದಲಿಗೆ ಆಧಾರವಾಗಬೇಕು. ಯಾರೋ ಹೇಳಿದ ವಿಚಾರ ನಮ್ಮ ಅನುಭವದಲ್ಲಿ ಸೋಸಿ ತಿಳಿಯಾಗಿ ,ಆಮೇಲೆ ಉಳಿದದ್ದು ನಮ್ಮದಾಗಬೇಕು. ಇಲ್ಲದಿದ್ದರೆ ಈ ಇಸ್ಪೀಟು ಆಡುವ ಮೇಷ್ಟ್ರು ಕ್ರಿಕೆಟನ್ನು ಮೂರ್ಖರ ಆಟವೆಂದು ನಮಗೆ ಉಪದೇಶ ಮಾಡಿದಂತೆ ಆಗುತ್ತೆ.

ದೊಡ್ಡವರು ಸರ್ವಜ್ಞರು ಎಂಬ ಭಾವನೆ ನಮ್ಮಲ್ಲಿದೆ. ಅತ್ತ ಸರ್ವಜ್ಞನಲ್ಲದಿದ್ದರೂ ಸರ್ವ ವ್ಯವಹಾರಗಳಲ್ಲಿ ಮೂಗು ತೂರಿಸದೆ ಕುಳಿತರೆ ತಮ್ಮ ದೊಡ್ಡಸ್ತಿಕೆಗೆ ಕುಂದು, ಆ ಕಾರಣಕ್ಕೆ ಮೂಗು ತೂರಿಸುವುದು ದೊಡ್ಡವರಾಗಿ ಹುಟ್ಟಿದ ತಮ್ಮ ಆಜನ್ಮಸಿದ್ಧ ಹಕ್ಕು ಎಂಬ ಅನಾದಿ ನಂಬಿಕೆ ದೊಡ್ದವರಲ್ಲಿದೆ. ದೊಡ್ಡವರೆಂಬ ನಮ್ಮ ನಂಬಿಕೆ ಗೌರವವಾಗಬೇಕೆ ಹೊರತು,ನಮ್ಮ ಸ್ವಂತ ಬುದ್ಧಿಯನ್ನ ಆಪೋಶನ ತೆಗೆದುಕೊಳ್ಳುವ ಜೀತವಾಗಬಾರದು. ಸ್ವಂತ ಬುದ್ಧಿಯನ್ನ ಬಿಟ್ಟು ಬದುಕುವುದಕ್ಕಿಂತ ದೊಡ್ಡ ಜೀತವಾದರೂ ಎಲ್ಲಿದೆ ?

ಈ ದೊಡ್ಡವರೆಂಬ ದೊಡ್ಡವರಿಂದ ಈ ಜಗತ್ತಿಗೆ ಎಷ್ಟು ಮಾರ್ಗದರ್ಶನ ಸಿಕ್ಕಿದೆಯೋ, ಅಷ್ಟೇ ದಾರಿ ತಪ್ಪಿಸುವ ಕೆಲಸವೂ ಆಗಿ ಹೋಗಿದೆ ಇತಿಹಾಸದಲ್ಲಿ . ಈಗ ನಮ್ಮ ಸುತ್ತಲಿರುವ ದೊಡ್ಡವರು ಯಾರ್ಯಾರು ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಧಾರ್ಮಿಕ ಮುಖಂಡರು ,ರಾಜಕೀಯದವರು, ನೂರಾರು ತತ್ವ ಸಿದ್ಧಾಂತಗಳ ಲೆಕ್ಕದಲ್ಲಿ ಹಂಚಿಹೋದ ಸಾಹಿತಿಗಳು, ಮಾಧ್ಯಮದವರು. ಇವರೆಲ್ಲರನ್ನೂ ನಾವು ಎತ್ತರದ ದೊಡ್ಡ ಸ್ಥಾನದಲ್ಲಿ ಇಟ್ಟಿದ್ದೇವೆ. ಇವರೆಲ್ಲ ನಮ್ಮನ್ನು ಮುನ್ನಡೆಸಬೇಕಾದವರು. ಆದರೆ ಈಗ ಒಬ್ಬರನ್ನೂ ನೆಚ್ಚಿಕೊಳ್ಳುವಂತಿಲ್ಲ .ಅವರಿಗೆಲ್ಲ ಅವರವರದೇ ಆದ ಸ್ವಂತ ಹಿತಾಸಕ್ತಿಗಳಿವೆ, ತಮ್ಮದೇ ಸರಿಯೆಂಬ ಒಂದಿಷ್ಟು ಹುಂಬತನಗಳಿವೆ. ಅವರ ಸುತ್ತ ಅವರೇ ಹಣೆದುಕೊಂಡು ಕುಳಿತ ಒಣ ಪ್ರತಿಷ್ಠೆಯ ಬೇಲಿಯಿದೆ.ಗೊಂದಲ, ಒಳಜಗಳ . ಹೀಗೆ ಏನೇನು ಇರಬಾರದಿತ್ತೋ ಅದೆಲ್ಲವೂ ಲೆಕ್ಕತಪ್ಪಿದೆ.

ಅವರು ನಮ್ಮನ್ನು ಮುನ್ನಡೆಸಲಿ ಎಂಬುದು ನಮ್ಮ ಆಶಯ .ಅವರ ಮುಂದಾಳತ್ವದಲ್ಲಿ ತೀರ ನಾವು ದಾರಿ ತಪ್ಪದೇ ಉಳಿದ ಶೇಷ ಸದ್ಯದ ನಮ್ಮ ಪುಣ್ಯ. ನಾವೀಗ ಜಾಣರಾಗಬೇಕು. ಸುತ್ತ ಜಗತ್ತಿನ ಸಂತೆಯಲ್ಲಿ ಅಡ್ಡಾಡಬೇಕು. ಸಕಲ ವ್ಯವಹಾರಗಳನ್ನೂ ಗಮನವಿಟ್ಟು ನೋಡಬೇಕು. ವಾಪಾಸು ಮರಳಿ ಬಂದು ತಣ್ಣಗೆ ಕುಳಿತು ಯೋಚನೆಗೆ ಬೀಳಬೇಕು. ನಮ್ಮದೇ ಆದ ಒಳ ದೃಷ್ಟಿಯಲ್ಲಿ ಹೊರಗೆ ಕಂಡ ಸಂಗತಿಗಳನ್ನು ಮತ್ತೆ ಹೊಸದಾಗಿ ಕಾಣಬೇಕು. ನಮಗೆ ನಾವೇ ಗುರುವಾಗಬೇಕು. ಈ ದೊಡ್ಡವರನ್ನ ಹಿಂಬಾಲಿಸಿ ಹೊರಟರೆ ದಾರಿ ತಪ್ಪುವುದು ಹೇಗೂ ಇದ್ದೇ ಇದೆ. ನಮ್ಮದೇ ದಾರಿಯಲ್ಲಿ ನಿಜವಾದ ಗುರಿ ಸಿಕ್ಕರೂ ಸಿಗಬಹುದು. ಇಲ್ಲವಾದರೆ ಕೊನೆಪಕ್ಷ ಸ್ವಂತ ದಾರಿಯಲ್ಲಿ ದಾರಿ ತಪ್ಪಿದ ತೃಪ್ತಿಯಾದರೂ ಉಳಿಯುತ್ತೆ. ದಾರಿ ತಪ್ಪಿಸಿಬಿಟ್ಟರು ಎಂದು ಯಾರ್ಯಾರನ್ನೋ ಹಳಿಯುತ್ತಾ ಅಲೆಯುವ ವ್ಯರ್ಥಾಲಾಪದ ದುರಂತವಾದರೂ ತಪ್ಪುತ್ತೆ. ಅಷ್ಟೇ.

Sunday, February 27, 2011

ಆ ಒಂದು ದಿನದ ಡೈರಿ ...

ಸಂಕ್ರಮಣದ ಸಂಜೆಯಲಿ .ಪ್ರೇಮ ಕವಿಯ ಪಾರ್ಕಿನಲಿ...

ಕೆ.ಎಸ್.ನರಸಿಂಹಸ್ವಾಮಿ ಉದ್ಯಾನವನ. ಅದು ನನ್ನ ರೂಮಿಗೆ ಐದು ನಿಮಿಷದ ನಡಿಗೆಯ ದೂರದಲ್ಲಿದೆ. ಮನಸ್ಸಿಗೆ ಏನೋ ಹೊಸತು ಬೇಕೆಂದಾಗಲೆಲ್ಲ ಕೆ.ಎಸ್.ಎನ್ ಪಾರ್ಕಿಗೆ ಹೋಗಿ ಕೂರುತ್ತೇನೆ. ಹೆಚ್ಚಾಗಿ ಸಂಜೆ ಆರರ ನಂತರ ಹೋಗಿ ಕೊನೆಗೆ ರಾತ್ರಿ ಎಂಟು ಘಂಟೆ ತನಕ ಅಲ್ಲಿ ಕೂತು ಎದ್ದು ಬರುವುದು ನನ್ನ ರೂಢಿ.ಕೆಲವೊಮ್ಮೆ ಒಬ್ಬನೇ ಹೋಗಿ ಕೂರುತ್ತೇನೆ.ಬಹುತೇಕ ಸಮಯದಲ್ಲಿ ನನ್ನ ತಮ್ಮ ನನಗೆ ಜೊತೆ ನೀಡುತ್ತಾನೆ. ಪಾರ್ಕಿನ ಮೇನ್ ಗೇಟಿನ ಎಡಕ್ಕೆ ಪಾರ್ಕಿನ ಮೂಲೆಯಲ್ಲಿ ಒಂದು ಕಲ್ಲು ಬೆಂಚ್ ಇದೆ. ನಮಗೂ ಆ ಬೆಂಚಿಗು ಏನು ಋಣಾನುಬಂಧವೋ ಗೊತ್ತಿಲ್ಲ.ನಾವು ಹೋದಾಗಲೆಲ್ಲ ಆ ಕಲ್ಲು ಬೆಂಚು ಖಾಲಿಯಾಗಿ ಕುಳಿತು ನಮ್ಮನ್ನು ಸ್ವಾಗತಿಸುತ್ತೆ. ಈತನಕ ಒಮ್ಮೆಯೂ ನಾವು ಬೇರೆ ಬೆಂಚನ್ನು ಹುಡುಕಿಕೊಂಡು ಹೋಗುವ ಪ್ರಸಂಗ ಎದುರಾಗಿಲ್ಲ. ಅಷ್ಟರ ಮಟ್ಟಿಗೆ ಆ ಬೆಂಚ್ ನಮ್ಮ ಹೆಸರಿಗೆ ಆಗಿಹೋಗಿದೆ.

ಆ ಪಾರ್ಕಿಗೆ ಹೋಗಿ ಕುಳಿತು ಸುಮ್ಮನೆ ಸುತ್ತಲ ವ್ಯವಹಾರಗಳನ್ನ ,ತರಹೇವಾರಿ ಜನಗಳನ್ನ ಕಣ್ಣಲ್ಲಿ ತುಂಬಿಕೊಳ್ಳುವುದೇ ನಿಜಕ್ಕೂ ಖುಷಿ. ಪಾರ್ಕ್ ಎಂದರೆ ನನ್ನ ಪಾಲಿಗೆ ಸಂಜೆ ಹೊತ್ತಿನಲ್ಲಿ ಒಂದೆಡೆ ಜಮೆಯಾದ ಪುಟ್ಟ ಜಗತ್ತು. ಅದು ದೊಡ್ಡ ಜಗತ್ತಿನ ಪುಟ್ಟ ಪ್ರತಿನಿಧಿ. ಎಲ್ಲ ವಯೋಮಾನದ ,ಎಲ್ಲ ಮನೋಧರ್ಮದ ಜನಗಳು ಅಲ್ಲಿ ಸಿಗುತ್ತಾರೆ. ಒಬ್ಬಬ್ಬರೂ ಒಂದೊಂದು ವಿಶಿಷ್ಟ ಚಿತ್ರದಂತೆ ಕಾಣುತ್ತಾರೆ. ಎಲ್ಲ ಚಿತ್ರಗಳೂ ಒಂದಕ್ಕಿಂತ ಒಂದು ಭಿನ್ನ ಹಾಗು ಆಸಕ್ತಿದಾಯಕ.

ಅದು ಪ್ರೇಮ ಕವಿಯ ಪಾರ್ಕು.ಆದರೆ ಅಲ್ಲಿ ಪ್ರೇಮಿಗಳು ಕಾಣಸಿಗುವುದು ತುಂಬಾ ಕಡಿಮೆ. ಸುತ್ತ ನಾಲ್ಕು ಕಡೆ ರಸ್ತೆಯಿಂದ ಸುತ್ತುವರಿದು ನಡುವೆ ದ್ವೀಪದಂತೆ ಆ ಪಾರ್ಕಿದೆ. ಸುತ್ತ ರಸ್ತೆ ಇದೆ ಎಂದ ಮೇಲೆ ಜನಗಳು ಇದ್ದೇ ಇರುತ್ತಾರೆ. ಬಹುಶಃ ಆ ಕಾರಣಕ್ಕೆ ಪ್ರೇಮ ಕವಿಯ ಪಾರ್ಕು ಪ್ರೇಮಿಗಳ ಪಾಲಿಗೆ ಸ್ವರ್ಗವಲ್ಲ. ಆಗೊಮ್ಮೆ ಈಗೊಮ್ಮೆ ತೆಳುವಾಗಿ ಕೆಲವು ಪ್ರೇಮಿಗಳು ಕಾಣಲಿಕ್ಕೆ ಸಿಗುತ್ತಾರೆ.ಆದರೆ ಅವರೆಲ್ಲ ಬೇರೆ ಪಾರ್ಕಿನ ಪ್ರೇಮಿಗಳಿಗಿಂತ ತೀರಾ ತೀರಾ ಭಿನ್ನ. ಕೆ.ಎಸ್.ಎನ್.ಪಾರ್ಕಿನ ಪ್ರೇಮಿಗಳೆಲ್ಲ ತುಂಬಾ ಸಭ್ಯರು. ಈ ಸಭ್ಯತೆಗೆ ಕಾರಣ ಸುತ್ತ ಸುತ್ತುವರಿದು ನಿಂತ ರಸ್ತೆಗಳು ಎಂದು ನಾನು ವಿಶೇಷವಾಗಿ ಒತ್ತಿ ಹೇಳಬೇಕಿಲ್ಲ. ಕೆಲವರು ಮೂಲತಃ ಸಭ್ಯರಂತೆ ಕಾಣುತ್ತಾರೆ. ಇನ್ನು ಕೆಲವರು ಪರಿಸ್ಥಿತಿಯ ಅನಿವಾರ್ಯಕ್ಕೆ ಸಿಕ್ಕು ಸಭ್ಯರಾದ ಅವಕಾಶವಂಚಿತರು. ಕೈಗೆ ಬಂದದ್ದು ಬಾಯಿಗೆ ತಲುಪುವ ಭಾಗ್ಯವಿಲ್ಲದ ನತದೃಷ್ಟರು. ಅವರು ನಗುವಾಗಲೆಲ್ಲ ಅಳಲಾಗದೆ ನಕ್ಕಂತೆ ಕಾಣುತ್ತೆ. ಪ್ರಯತ್ನಪೂರ್ವಕವಾಗಿ ತಮ್ಮ ನಡುವೆ ಒಂದಡಿಯ ಅಂತರ ಬಿಟ್ಟು ಕೂರುವಾಗ ಅಯ್ಯೋ ಪಾಪ ಅನಿಸುತ್ತೆ. ಯಾಕೋ ಗೊತ್ತಿಲ್ಲ.ಅಂಡು ಸುಟ್ಟ ಬೆಕ್ಕು ಬೇಡವೆಂದರೂ ನೆನಪಾಗುತ್ತೆ.

ಪ್ರೇಮಿಗಳೆಲ್ಲ ಹೆಚ್ಚಾಗಿ ನನ್ನದೇ ವಯಸ್ಸಿನವರು. ನನ್ನ ಕಷ್ಟ ಸುಖಗಳೇ ಅವರದ್ದೂ ಕೂಡ .ಆ ಕಾರಣಕ್ಕೆ ಅವರು ನನಗೆ ಅರ್ಥವಾಗುತ್ತಾರೆ. ಈ ಪ್ರೇಮಿಗಳು ಕೆ.ಎಸ್.ಎನ್.ಪಾರ್ಕಿನಲ್ಲಿ ಅಲ್ಪಸಂಖ್ಯಾತರು. ಅಂಕಲ್ಗಳು .ಆಂಟಿಯಂದಿರು ,ಅಜ್ಜಂದಿರು .ಅಜ್ಜಿಯಂದಿರುಗಳು ಇಲ್ಲಿ ಬಹುಸಂಖ್ಯಾತರು. ಅವರು ನನಗೆ ಸುಲಭಕ್ಕೆ ಅರ್ಥವಾಗುವುದಿಲ್ಲ. ಆಂಟಿ ಹಾಗು ಅಂಕಲ್ಗಳ ಹಣೆಯ ಮೇಲಿನ ನೆರಿಗೆ, ಹೊಟ್ಟೆಯ ಮಡಿಕೆಗಳು, ಅಜ್ಜಂದಿರ,ಅಜ್ಜಿಯಂದಿರ ಮುಖದ ಮೇಲಿನ ಮುದುರು, ಕೆಲವೊಮ್ಮೆ ಅವರು ನೋಡುವ ಶೂನ್ಯ ನೋಟ ನನಗೆ ಅರ್ಥವಾಗುವುದಿಲ್ಲ. ಅವರ ಏದುಸಿರು.ಏದುಸಿರ ಜೊತೆ ಜೊತೆಗೆ ಬಿರುಸಾಗುತ್ತ ಹೋಗುವ ನಡಿಗೆಯ ವೇಗದ ಹಿಂದಿನ ದರ್ದು ನನಗೆ ಅರ್ಥವಾಗುವುದಿಲ್ಲ. ಇಷ್ಟು ಕಾಲ ನೆನಪಾಗದ ವ್ಯಾಯಾಮ ಈಗ ಯಾಕೆ ಅನಿವಾರ್ಯವಾಯಿತು ಎಂಬುದು ಅರ್ಥವಾಗುವುದಿಲ್ಲ. ಅಲ್ಲೇ ಕೆಲವರು ನಗೆ ಕೂಟ ಮಾಡಿಕೊಂಡಿದ್ದಾರೆ.ತುಂಬ ಗಂಭೀರವಾಗಿ ಪಾರ್ಕಿಗೆ ಬರುತ್ತಾರೆ.ಸುಖಾಸುಮ್ಮನೆ ಬಿದ್ದು ಬಿದ್ದು ನಕ್ಕಂತೆ ನಕ್ಕು ಮತ್ತೆ ಅಷ್ಟೇ ಗಂಭೀರವಾಗಿ ಮನೆಯ ದಾರಿ ಹಿಡಿಯುತ್ತಾರೆ. ಅವರು ಹಾಗೆ ನಗುವಾಗ ಅವರು ನಕ್ಕಿದ್ದು ನಿಜವಾದ ನಗುವಾ ಅಥವಾ ಅವರೊಳಗೆ ಮಡುಗಟ್ಟಿಹೋದ ಸಂಕಷ್ಟವಾ ಎಂಬುದು ಅರ್ಥವಾಗುವುದಿಲ್ಲ. ನಗುವುದನ್ನೂ .ಖುಷಿಪಡುವುದನ್ನೂ ಒಂದು ಕೆಲಸದಂತೆ ಒಂದು ನಿಗದಿತ ಸಮಯಕ್ಕೆ ಮೀಸಲಾಗಿಸುವ ಮನಸ್ಥಿತಿಯ ಲೆಕ್ಕಾಚಾರಗಳ ಹಿಂದಿನ ಸೂತ್ರ ಅರ್ಥವಾಗುವುದಿಲ್ಲ. ಕೊನೆಗೆ ಅಂಥದ್ದೊಂದು ಲೆಕ್ಕಾಚಾರಕ್ಕೆ ಕಾರಣವಾದ ನಮ್ಮ ನಡುವಿನ ವ್ಯವಸ್ಥೆ ಹೀಗೇಕಾಯಿತು ಎಂಬುದೂ ಅರ್ಥವಾಗುವುದಿಲ್ಲ. ನಾನು ಸುಮ್ಮನೆ ನೋಡುತ್ತೇನೆ. ನನ್ನ ಪರಿಮಿತಿಯಲ್ಲಿ ಯೋಚನೆಗೆ ಬೀಳುತ್ತೇನೆ.

ಎವರ್ ಗ್ರೀನ್ ಅಜ್ಜಂದಿರು

ಇಷ್ಟೆಲ್ಲಾ ಅರ್ಥವಾಗದ ಸಂಗತಿಗಳ ನಡುವೆ ಕೆಲವಷ್ಟು ಚೇತೋಹಾರಿಯಾದ ಅರ್ಥಪೂರ್ಣ ಸಂಗತಿಗಳಿವೆ. ನಾನು ಹಾಗು ನನ್ನ ತಮ್ಮ ಕೂರುವ ಬೆಂಚಿನ ಎದುರು ಒಂದಿಷ್ಟು ಬೆಂಚುಗಳಿವೆ. ಒಂದಿಷ್ಟು ಅಜ್ಜಂದಿರ ಗೆಳೆಯರ ಬಳಗ ಅಲ್ಲಿ ಖಾಯಮ್ಮಾಗಿ ಜಮೆಯಾಗಿರುತ್ತೆ. ಆ ಅಜ್ಜಂದಿರು ಪಾರ್ಕಿಗೆ ಬರುವ ಇತರ ಅಜ್ಜಂದಿರಂತೆ .ಅಂಕಲ್ಗಳಂತೆ ,ಆಂಟಿಗಳಂತೆ ಅಲ್ಲ. ಅವರು ಮುಖ ಗಂಟಿಕ್ಕಿಕೊಂಡು ಕೂತಿದ್ದನ್ನು , ಶೂನ್ಯ ನೋಟದಲ್ಲಿ ಖಾಲಿಯಾಗಿ ಕುಳಿತಿದ್ದನ್ನು ಈತನಕ ನಾನು ಒಂದು ಬಾರಿಯೂ ಕಂಡಿಲ್ಲ. ಅವರಿಗೆ ನಾನು ಎವರ್ ಗ್ರೀನ್ ಅಜ್ಜಂದಿರೆಂದು ಕರೆಯುತ್ತೇನೆ. ಅವರು ಲೋಕಾಭಿರಾಮವಾಗಿ ಹರಟುತ್ತಾರೆ. ಗಲಗಲನೆ ನಗೆಯಾಗುತ್ತಾರೆ. ಅವರ ನಡುವೆ ಚರ್ಚೆಗೆ ಬಾರದ ವಿಷಯಗಳೇ ಇಲ್ಲ. ಆಯಾ ದಿನಗಳ ಎಲ್ಲ ಪ್ರಮುಖ ವಿದ್ಯಮಾನಗಳು ಅಲ್ಲಿ ಚರ್ಚೆಯಾಗುತ್ತವೆ. ಅವರು ತಮ್ಮ ಹರಟೆಯ ನಡುವೆ ವರ್ತಮಾನದ ಜೊತೆ ಜೊತೆಗೆ ಕಳೆದ ನಿನ್ನೆಗಳನ್ನ ಎಳೆದು ತರುತ್ತಾರೆ. ಅವರನ್ನ ಆಲಿಸುತ್ತ ಕುಳಿತರೆ ನನಗೆ ತಿಳಿದುಕೊಳ್ಳಲು ತುಂಬಾ ವಿಷಯಗಳು ಸಿಗುತ್ತೆ . ಅವರನ್ನು ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತೆ.

ಸಂಕ್ರಮಣದ ಆ ಸಂಜೆ ....

ಅದು ಸಂಕ್ರಾಂತಿಯ ದಿನದ ಸಂಜೆ.ಅವತ್ತು ಕೂಡ ಪಾರ್ಕಿಗೆ ಹೋಗಿ ಕುಳಿತಿದ್ದೆ .ಪಾರ್ಕ್ ಎಂದಿನಂತೆ ನೂರಾರು ಚಿತ್ರಗಳ ಕೊಲಾಜ್. ಸುಮ್ಮನೆ ನೋಡುತ್ತಾ ಕುಳಿತಿದ್ದೆ. ನಡುವೆ ಹೊಸತೊಂದು ಚೆಂದದ ಚಿತ್ರ ಸೇರಿಕೊಂಡಿತು. ಎಳೆವಯಸ್ಸಿನ ಜೋಡಿಯೊಂದು ಪಾರ್ಕಿನ ಕಾಲು ಹಾದಿಯಲ್ಲಿ ವಾಕಿಂಗ್ ಹೊರಟಿತ್ತು. ಹುಡುಗಿ ತುಂಬು ಗರ್ಭಿಣಿ . ಹುಡುಗಿಯ ನಡಿಗೆಯಲ್ಲಿ ಪ್ರಯಾಸ ಕಾಣುತ್ತಿತ್ತು. ಆದರೆ ಆಕೆಯ ಮುಖದಲ್ಲಿ ತುಂಬಾ ಸಂತೋಷವಿತ್ತು. ಹುಡುಗಿ ಏನೇನೋ ಹೇಳಿಕೊಳ್ಳುತ್ತಾ ಮುಸಿ ಮುಸಿ ನಗುತ್ತಿದ್ದಳು. ಹುಡುಗ ಮಾತ್ರ ಆತಂಕದ ಗೂಡಂತೆ ಕಾಣುತ್ತಿದ್ದ. ಅವಳು ಹೇಳಿದ್ದಕ್ಕೆ .ನಕ್ಕಿದ್ದಕ್ಕೆ ಆತ ಅಷ್ಟಾಗಿ ಗಮನವನ್ನೂ ನೀಡುತ್ತಿರಲಿಲ್ಲ. ಆತ ಆಕೆಯ ತೋಳು ಹಿಡಿದು ಆಕೆಯ ಹೆಜ್ಜೆಯನ್ನೇ ಗಮನಿಸುತ್ತಾ ತುಂಬಾ ಎಚ್ಚರಿಕೆಯಿಂದ ಆಕೆಯನ್ನ ನಡೆಸಿಕೊಂಡು ಬರುವುದರಲ್ಲಿ ಮಗ್ನನಾಗಿದ್ದ. ಆಕೆ ಗರ್ಭಧರಿಸಿದ್ದು ಹುಡುಗನ ಆತಂಕವನ್ನೋ ? ಆಕೆಯ ಖುಷಿಯನ್ನೋ? ಎಂಬುದು ಅರ್ಥವಾಗಲಿಲ್ಲ. ಇವರು ಇಂದಿನಂತೆಯೇ ಮುಂದೆ ಇರುತ್ತಾರ? ಅಥವಾ ಕೆಲವು ವರುಷಗಳ ನಂತರ ಇದೇ ಪಾರ್ಕಿನಲ್ಲಿ ಉಳಿದ ಅಂಕಲ್ಗಳು ಹಾಗು ಆಂಟಿಗಳಂತೆ ಆಗಿ ಹೋಗುತ್ತಾರಾ ? ಎಂಬುದೂ ನನಗೆ ಅರ್ಥವಾಗಲಿಲ್ಲ.

ಅಷ್ಟು ಹೊತ್ತಿಗೆ ನಮ್ಮ ಎವರ್ ಗ್ರೀನ್ ಅಜ್ಜಂದಿರು ಒಬ್ಬೊಬ್ಬರಾಗಿ ಪಾರ್ಕಿಗೆ ಬಂದು ನನ್ನೆದುರಿನ ಬೆಂಚುಗಳಲ್ಲಿ ಸ್ಥಾಪಿತರಾದರು.ಎಂದಿನಂತೆ ಹರಟಿದರು.ಗಲಗಲನೆ ನಗೆಯಾದರು. ನಾನು ಎಂದಿನಂತೆ ಅವರಿಗೆ ಕಿವಿಯಾಗಿ ಕುಳಿತೆ.ಖುಷಿಪಟ್ಟೆ.ಕೊನೆಗೆ ಆ ಅಜ್ಜಂದಿರು ತಮ್ಮತಮ್ಮಲ್ಲೇ ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯ ಹೇಳಿಕೊಂಡರು. ಅಲ್ಲಿ ಅರ್ಥವಾಗದ ಸಂಗತಿಗಳು ಏನೂ ಇರಲಿಲ್ಲ. ಅಲ್ಲಿದ್ದದ್ದು ಕೇವಲ ಖುಷಿ ಖುಷಿ ಹಾಗು ನನ್ನ ನಾಳೆಗಳು ಈ ಅಜ್ಜಂದಿರಂತೆಯೇ ಇರಲಿ ಎಂಬ ಹಾರೈಕೆಯಷ್ಟೇ ...

Friday, February 18, 2011

ಕಾಲಂ 'ಅತಿಥಿ '...

ಅತಿಥಿಗಳು ಬರ್ತಿದ್ದಾರೆ ನನ್ನ ಬ್ಲಾಗ್ ಮನೆಯಂಗಳಕ್ಕೆ .

ಮನೆ ನನ್ನದು. ಓದುಗರ ಉಪಚಾರದ ಉಸ್ತುವಾರಿ ಅವರದು.

ನನ್ನ ಬ್ಲಾಗ್ ಮನೆಯಂಗಳಕ್ಕೆ ಅತಿಥಿಗಳು ಬರುತ್ತಿದ್ದಾರೆ. ಅವರು ಬರುವ ಘಳಿಗೆಯಲ್ಲಿ ನನ್ನದೇ ಬ್ಲಾಗಿಗೆ ನಾನು ಕೇವಲ ಓದುಗ ಮಾತ್ರವೇ ಆಗಿರುತ್ತೇನೆ. ಅವರು ಬರೆಯುತ್ತಾರೆ. ನಿಮ್ಮೊಡನೆ ನಾನು ಕೂಡ ಓದುತ್ತೇನೆ. ಅತೀ ಶೀಘ್ರದಲ್ಲಿ ಅವರು ನಿಮ್ಮೆದುರು ಬರುತ್ತಾರೆ. ನನ್ನ ಆಮಂತ್ರಣ ಕೆಲವರಿಗೆ ಈಗಾಗಲೇ ತಲುಪಿಯಾಗಿದೆ. ತೆರೆದಿದೆ ಮನ ಹಾಗು ಬ್ಲಾಗ್ ಮನೆ ಬಾಗಿಲು ಓ ಬಾ ಅತಿಥಿಯೆಂದು ಬರಮಾಡಿಕೊಂಡು ಸಂಭ್ರಮಿಸುವುದೊಂದೇ ಬಾಕಿ.

ಪತ್ರಿಕೆಗೆ ಅತಿಥಿ ಸಂಪಾದಕರು ಎಂಬ ಹಣೆಪಟ್ಟಿ ಹಚ್ಚಿ ಖ್ಯಾತನಾಮರನ್ನು ಕರೆಸುವ ಪರಿಪಾಠವಿದೆ. ನನ್ನ ಬ್ಲಾಗಿನಲ್ಲಿ ಈಗ ನಾನು ಶುರು ಮಾಡುತ್ತಿರುವ ಪ್ರಯತ್ನ ಕೂಡ ಅದೇ ತೆರನಾದದ್ದು. ಆದರೆ ಇದು ಪೂರ್ತಿ ಪತ್ರಿಕೆಗಳ ನಕಲಲ್ಲ. ಇಲ್ಲಿ ಕೂಡ ನನ್ನದೇ ಆದ ಸ್ವಲ್ಪ ಸ್ವಂತಿಕೆಯನ್ನ ಉಳಿಸಿಕೊಳ್ಳುತ್ತೇನೆ.

ನನ್ನ ಈ ಪ್ರಯತ್ನದಲ್ಲಿ ಒಂದು ವಿಶೇಷವಿದೆ. ನಾನೇ ಬರೆಯುವ ‘ಸಭ್ಯ ಪೋಲಿ ಕವನ , ‘ಆ ಒಂದು ದಿನದ ಡೈರಿ , ‘ಛೆ ..ಹೀಗಾಗಬಾರದಿತ್ತು , ‘ಜಗತ್ತಿಗೊಂದು ಪತ್ರ , ಮುಂತಾದವುಗಳನ್ನು ಅತಿಥಿಗಳಿಗೆ ಬಿಟ್ಟು ಕೊಡುತ್ತೇನೆ. ಅವರು ಅವರದೇ ಆದ ಶೈಲಿಯಲ್ಲಿ ಬರೆದು ತಂದು ನನ್ನ ಕೈಗಿಡುತ್ತಾರೆ .ನಾನು ಅವುಗಳನ್ನ ತಂದು ಬ್ಲಾಗಿನಲ್ಲಿ ಹಾಕಿ ನಿಮ್ಮೆದುರು ಇಡುತ್ತೇನೆ.

ನಾನಂತೂ ಅತಿಥಿಗಳ ಬರುವಿಕೆಯನ್ನ ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ನಾನೇ ಬರೆಯುತ್ತಿದ್ದ ಒಂದಿಷ್ಟು ವಿಷಯಗಳು. ವಿಭಿನ್ನ ಹಿನ್ನೆಲೆಯ ಅತಿಥಿಗಳು. ಅವರವರದೇ ಆದ ವಿಶಿಷ್ಟ ಬರಹದ ಶೈಲಿಗಳು. ಒಂದೇ ಕಾರಣಕ್ಕೆ ಒಂದಕ್ಕಿಂತ ಒಂದು ವಿಭಿನ್ನವಾದ ಲೆಕ್ಕತಪ್ಪಿದ ಖುಷಿಗಳು. ಒಹ್ ! ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಯದೆ ಕೂರಲು ನನ್ನಿಂದಾಗುತ್ತಿಲ್ಲ. ವಿಚಾರ ಹುಟ್ಟುತ್ತಿದ್ದಂತೆ ಎತ್ತಿಕೊಂಡು ನಿಮ್ಮೆದುರು ಬಂದುಬಿಟ್ಟೆ. ಉಳಿದದ್ದು ಅದರ ಪಾಡಿಗೆ ಅದು ಆಗುತ್ತೆ ಬಿಡಿ..ಶುರುವಿಗಿರುವ ವಿಘ್ನ ಹರಿವಿಗಿಲ್ಲ.

ಶ್ರಾವಣದ ಮಳೆ ನಿಮ್ಮೆಲ್ಲರ ಬೆಂಬಲದಿಂದ ಸುರಿಯುತ್ತಲೇ ಇದೆ. ಇಲ್ಲಿ ನಾನೇ ಬಾನು. ನಾನೇ ಮುಗಿಲು. ಆದರೆ ಇನ್ನು ಮುಂದೆ ಶ್ರಾವಣದ ಮಳೆಯ ಮಳೆಗಾಲದ ಲೆಕ್ಕಾಚಾರ ಬದಲಾಗಲಿದೆ. ಇನ್ನು ಮುಂದೆ ಕೂಡ ಬಾನು ನಾನೇ. ಆದರೆ ಅತಿಥಿಗಳು ಬರುವ ಘಳಿಗೆಯಲ್ಲಿ ಅವರೇ ಮುಗಿಲು. ನಡುವೆ ಎಲ್ಲಾದರೂ ಖುಷಿಯ ಬಿಸಿಲುಕೋಲು ಇಣುಕಿದರೆ ,ಅದು ನಾನೇ. ಬಿಸಿಲು ಮಳೆಯ ಸೂರಿನಡಿ ಸಂಭ್ರಮದ ಕಾಮನಬಿಲ್ಲು ಕಟ್ಟಿದರೆ , ಅದು ನಾನೇ. ಕೊನೆಗೆ ಸುರಿವ ಮಳೆಯಲ್ಲಿ ನೆನೆಯುತ್ತ ,ಮಳೆಗೆ ಬೊಗಸೆಯೊಡ್ಡಿ ನಿಲ್ಲುವ, ಹರಿವ ಮಳೆಯ ನೀರಿನಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಡುವ ಅಚ್ಚರಿಯ ಪುಟ್ಟನೂ ನಾನೇ. ಮುಗಿಲಾಗುವ .ಮುಗಿಲು ಮಳೆಯಾಗುವ ಕೆಲಸವನ್ನ ಈಗ ಗುತ್ತಿಗೆಗೆ ಕೊಟ್ಟು ನಾನು ಸುಮ್ಮನೆ ಸುರಿವ ಮಳೆಯಡಿನಿಲ್ಲುವ ,ನನ್ನದೇ ಬಾನಿನಡಿ ನೆಲದ ಮೇಲೆ ನಿಂತು ಸಂಭ್ರಮಿಸುವ ಖುಷಿಯ ಹೊಸಾ ಆಯಾಮಕ್ಕೆ ನನ್ನನ್ನು ನಾನು ತೆರೆದುಕೊಳ್ಳುತ್ತಿದ್ದೇನೆ, ನಿಮ್ಮೆಲ್ಲರ ಬೆಂಬಲ ಎಂದಿನಂತೆ ಇರಲಿ ಎಂಬ ಹಾರೈಕೆಯಲ್ಲಿ ಹಾಗು ಎಂದಿನಂತೆ ಇದ್ದೇ ಇರುತ್ತೆ ಎಂಬ ನಂಬಿಕೆಯ ಪರಮಾವಧಿಯಲ್ಲಿ.

Sunday, February 6, 2011

ನಾಯಿಗಳು .....

....

ಡೊಂಕುಬಾಲದಂಥ ನಾಯಕರೇ ನೀವು ಹೊಟ್ಟೆಗೆ ಏನು ತಿನ್ತಿರೀ??

ನನಗೊಬ್ಬಳು ಅತ್ತೆಯಿದ್ದಾಳೆ.ಅಪ್ಪನ ಅಕ್ಕ. ಆಕೆ ನಾಯಿಗೆ ನಾಯಕರು ಎನ್ನುತ್ತಿದ್ದಳು. ನಾಯಿಯನ್ನು ಎಲ್ಲರೂ ‘ಕುರು ಕುರು ಕುರೋಯ್ ಎಂದು ಕರೆಯುವುದು ರೂಢಿ. ಹಾಗೆ ಈ ನಾಯಿ ಮತ್ತು ಕುರು ಕುರು ಸೇರಿ ‘ನಾಯಿಕುರು’ ಎಂದಾಗಿ ಮುಂದೆ ಅದು ನಾಯಕರು ಎಂದಾಯಿತೋ ಅಥವಾ ಡೊಂಕುಬಾಲದ ನಾಯಕರೆ ಎಂಬಲ್ಲಿಂದ ಎತ್ತಿಕೊಂಡು ಅತ್ತೆ ನಾಯಿಗಳಿಗೆ ನಾಯಕರು ಎನ್ನುತ್ತಿದ್ದಳೋ ಗೊತ್ತಿಲ್ಲ. ಈಗೀಗ ಪೇಪರುಗಳಲ್ಲಿ ರಾಜಕೀಯದ ವಿಷಯಗಳು ಬಂದಾಗ ಈ ‘ನಾಯಕರುಗಳು’ ಎಂಬ ಪದ ಕಂಡಾಗ ನನಗೆ ಅತ್ತೆ ನೆನಪಾಗುತ್ತಾಳೆ. ಆಕೆ ಹೇಳುತ್ತಿದ್ದ ‘ನಾಯಕರು’ ನೆನಪಾಗುತ್ತೆ. ಡೊಂಕುಬಾಲದ ನಾಯಕರೇ ನೀವೇನೂಟವ ಮಾಡುವಿರಿ ಎಂಬುದು ಪುರಂದರ ದಾಸರು ಹಾಡಿದ್ದು. ಇದನ್ನೇ ರಾಜಕೀಯ ನಾಯಕರುಗಳ ವಿಷಯದಲ್ಲಿ ‘ ಡೊಂಕುಬಾಲದಂಥ ನಾಯಕರೇ ನೀವು ಹೊಟ್ಟೆಗೆ ಏನು ತಿಂತೀರಿ ‘ ಎಂದು ಸರಳವಾಗಿ ಈಗಿನ ಕಾಲಕ್ಕೆ ತಕ್ಕಂತೆ ಬಾಯಿಮಾತಿಗೆ ಬದಲಾಯಿಸಿಕೊಳ್ಳಬಹುದು ಎಂಬ ಅದ್ಭುತ ಯೋಚನೆ ಹೊಳೆಯುತ್ತೆ. ಜೊತೆಗೆ ಅಂಥಾ ನಾಯಕರನ್ನು ಆರಿಸಿಕಳಿಸಿದ ನಾವು ಕುರಿಗಳು ಹಾಗು ನಮ್ಮದು ನಾಯಿಪಾಡು ಎಂಬುದು ಕೂಡ. ಪುರಂದರ ದಾಸರು ಲೋಕದ ಡೊಂಕನ್ನು ತಿದ್ದಲು ಡೊಂಕು ಬಾಲದ ನಾಯಕರೇ ಎಂದು ಎಷ್ಟು ಮಾರ್ಮಿಕವಾಗಿ ಹಾಡು ಹೊಸೆದುಬಿಟ್ಟರಲ್ಲ ಎನ್ನಿಸಿ ಕೆಲವೊಮ್ಮೆ ಖುಷಿಯಾಗುತ್ತೆ. ಮರುಕ್ಷಣವೇ ಲೋಕದ ಡೊಂಕು ತಿದ್ಡುವ ಭರದಲ್ಲಿ ನಾಯಿಗಳನ್ನ ಉದಾಹರಣೆಯಾಗಿಟ್ಟುಕೊಂಡು ,ಹೀನಾತಿಹೀನ ಮಂದಿಯನ್ನ ನಾಯಿಗಳಿಗೆ ಹೋಲಿಸಿ ಸುಖಾಸುಮ್ಮನೆ ಪಾಪದ ನಾಯಿಕುಲಕ್ಕೆ ಅವಮಾನ ಮಾಡಿಬಿಟ್ಟರಲ್ಲ ಎಂದು ನಾಯಿಗಳ ಮೇಲೆ ಅನುಕಂಪಕ್ಕೆ ಈಡಾಗುತ್ತೇನೆ .ದಾಸರು ಡೊಂಕುಬಾಲವನ್ನಷ್ಟೇ ತಮ್ಮ ಹಾಡಿನಲ್ಲಿ ಉಳಿಸಿಕೊಂಡು ನಾಯಿಗಳನ್ನು ಅವುಗಳ ಪಾಡಿಗೆ ಸುಮ್ಮನೆ ಬಿಟ್ಟರೂ ಬಿಡಬಹುದಿತ್ತೆಂದು ಅಂದುಕೊಳ್ಳುತ್ತೇನೆ.

ನಾಯಿಗೆ ಅದರದೇ ಆದ ನಾಯಿಪಾಡು.ನಮಗೆ ನಮ್ಮದೇ ಆದ ನಾಯಿಪಾಡು ...

ನಾನಿರುವ ಮನೆಯ ಓನರ್ ಮನೆಯಲ್ಲಿ ಈ ವೊಡಾಫೋನ್ ನಾಯಿ ಜಾತಿಯ ಒಂದು ನಾಯಿಯಿದೆ. ತಿಂಗಳಿಗೆ ಅದನ್ನು ನಿಭಾಯಿಸುವ ಬಾಬ್ತು ಕೆಲವು ಸಾವಿರದಷ್ಟು ಎಂದು ಓನರ್ ಆಂಟಿ ಹೇಳುವುದನ್ನ ಕೇಳಿದ್ದೇನೆ. ಅದರ ಸ್ನಾನಕ್ಕೆ ನಾಯಿಗಳಿಗೆಂದೇ ಮೀಸಲಾದ ವಿಶೇಷ ಶಾಂಪೂ ಹಾಗು ಸೋಪು. ಅದರದ್ದು ಡೊಂಕು ಬಾಲವಲ್ಲ.ನೀಟಾಗಿ ಟ್ರಿಮ್ ಮಾಡಿದ ಮೊಂಡು ಬಾಲ. ನೀವೇನೂಟವ ಹಾಕಿದಿರಿ ಎಂದು ಓನರ್ ಆಂಟಿಯನ್ನು ಎಂದು ಕೇಳಿದರೆ ಉತ್ತರ ಬ್ರ್ಯಾಂಡೆಡ್ ಫುಡ್ದು. ಮಲಗಲಿಕ್ಕೆ ಅದಕ್ಕೆಂದೇ ವಿಶೇಷ ಬೆಡ್ಡು. ಇದನ್ನೆಲ್ಲಾ ನೋಡುವಾಗ ಸಿಟಿಯಲ್ಲಿ ಮನುಷ್ಯರಾಗಿ ಇರುವುದರಕ್ಕಿಂತ ಸಾಕಿದ ನಾಯಿಯಾಗಿ ಇದ್ದು ಬಿಡುವುದೇ ವಾಸಿ ಎನ್ನಿಸಿ ಬಿಡುತ್ತೆ. ಯಾವ ತಾಪತ್ರಯಗಳಿಲ್ಲ.ತಲೆಬಿಸಿಯಿಲ್ಲ .ತಿಂದುಂಡು ಅಡ್ಡಾಡಿಕೊಂಡು ಹಾಯಾಗಿ ಇದ್ದುಬಿಡಬಹುದು.

ಅದೊಂದು ದಿನ ಸಂಜೆ ಓನರ್ ಆಂಟಿ ನಾಯಿಯನ್ನು ಜೊತೆಗೆ ಕಟ್ಟಿಕೊಂಡು ಎಂದಿನಂತೆ ವಾಕಿಂಗ್ ಹೊರಟಿದ್ದರು. ಅದು ಆಂಟಿಯ ವಾಯುವಿಹಾರಕ್ಕೆ ಹಾಗು ಜೊತೆಗೆ ನಾಯಿಯ ಬಹಿರ್ದೆಸೆಗೆ ಮೀಸಲಾದ ಸಮಯ. ಆಂಟಿ ನಡೆದು ವ್ಯಾಯಾಮವಾದಂತೆ ಆಗಿ ಹಗುರಾಗುತ್ತಿದ್ದರು.ಅತ್ತ ನಾಯಿ ತನ್ನ ಪಾಲಿನ ಭಾರವನ್ನ ಹೊರದಬ್ಬಿ ಹಗುರಾಗುತ್ತಿತ್ತು. ಸ್ವಾಮಿಕಾರ್ಯ ಹಾಗು ಸ್ವಕಾರ್ಯ ನೆರವೇರುವ ಘಳಿಗೆಯದು. ಅಂದು ಕೂಡ ಆ ಘಳಿಗೆ ಎಂದಿನಂತೆ ಯಾವುದೇ ವಿಘ್ನಗಳಿಲ್ಲದೆ ಸಂಪನ್ನವಾಯಿತು.ನಾಯಿ ಹಾಗು ಆಂಟಿ ವಾಪಸ್ಸು ಮನೆಯ ದಾರಿ ಹಿಡಿದು ಹೊರಟಿದ್ದರು. ಮನೆಯ ಎದುರಿನ ರಸ್ತೆಯ ತಿರುವಲ್ಲಿ ನಮ್ಮ ಓನರ್ ಆಂಟಿಗೆ ಇನ್ನೊಬ್ಬರು ಪರಿಚಿತ ಆಂಟಿ ಸಿಕ್ಕು ಮಾತಿಗೆ ನಿಂತರು. ಅದೇ ಸಮಯಕ್ಕೆ ಅದೇ ತಿರುವಲ್ಲಿ ಒಂದು ಬೀದಿನಾಯಿಯ ಪ್ರವೇಶವಾಯಿತು. ಅತ್ತ ಓನರ್ ಆಂಟಿ ಇನ್ನೊಂದು ಆಂಟಿಯ ಜೊತೆ ಮಾತಾಡುತ್ತಿದ್ದರೆ ಇತ್ತ ಬೀದಿ ನಾಯಿ ಹಾಗು ಓನರ್ ಆಂಟಿಯ ವೊಡಾಫೋನ್ ನಾಯಿಯ ನಡುವೆ ಪ್ರೇಮಾಂಕುರವಾಗಿ ಹೋಗಿತ್ತು. ಪ್ರಕೃತಿಯ ಮೂಲಭೂತ ಹಸಿವಿಗೆ ಜಾತಿಯೆಲ್ಲಿ? ಬೇಧವೆಲ್ಲಿ? ಬೀದಿ ನಾಯಿ ಹಾಗು ವೊಡಾಫೋನ್ ಜಾತಿನಾಯಿ ಎಂಬ ತಾರತಮ್ಯವೆಲ್ಲಿ ? ನೋಡು ನೋಡುತ್ತಿದ್ದಂತೆ ಆಂಟಿ ಮನೆಯ ನಾಯಿ ಬೀದಿ ನಾಯಿಯ ಜಾಡು ಹಿಡಿದು ಹಿಂದಿನಿಂದ ಮೂಸುತ್ತ ಹೊರಡಲು ಅನುವಾಗಿ ಆಂಟಿಯ ಕೈಯಿಂದ ತಪ್ಪಿಸಿಕೊಳ್ಳಲು ಕೊಸರಾಡತೊಡಗಿತು. ಕೊನೆಗೆ ಆಂಟಿ ಬೀದಿನಾಯಿಯನ್ನು ಓಡಿಸಿ ತಮ್ಮ ನಾಯಿಯೊಂದಿಗೆ ಮನೆಗೆ ಬಂದು ಬಿಟ್ಟರು. ಅತ್ತ ಆ ಬೀದಿ ನಾಯಿ ಕೊಂಚ ದೂರ ಓಡಿ ಹೋಗಿ ನಿಂತುಕೊಂಡು, ಓನರ್ ಆಂಟಿಯ ಮನೆಯ ದಿಕ್ಕಿನಲ್ಲಿ ಆಸೆಯಿಂದ ನೋಡುತ್ತಿತ್ತು ವೊಡಾಫೋನ್ ನಾಯಿ ಬಂದರೂ ಬರಬಹುದೆಂಬ ನಿರೀಕ್ಷೆಯಲ್ಲಿ. ಇತ್ತ ನಮ್ಮ ವೊಡಾಫೋನ್ ನಾಯಿ ವಿರಹವೇದನೆಯಲ್ಲಿ ತುಂಬಾ ಹೊತ್ತಿನ ತನಕ ಅಂಡು ಸುಟ್ಟ ಬೆಕ್ಕಿನಂತೆ ಕುಯ್ ಗುಡುತ್ತಿತ್ತು .ಹಸಿದವನ ಸಂಕಟ ಅವನಿಗಷ್ಟೇ ಗೊತ್ತು.

ಮರುದಿನ ಬೆಳಿಗ್ಗೆಯೇ ಓನರ್ ಆಂಟಿ ನಾಯಿಯನ್ನು ಕಾರಿನಲ್ಲಿ ತುಂಬಿಕೊಂಡು ನಾಯಿಗಳ ಕ್ಲಿನಿಕ್ ಗೆ ಕರೆದುಕೊಂಡು ಹೋಗಿಬಿಟ್ಟರು.ಅಲ್ಲಿ ಡಾಕ್ಟರ್ ಏನು ಮಾಡಿ ಕಳುಹಿಸಿದರೋ ಗೊತ್ತಿಲ್ಲ. ಕ್ಲಿನಿಕ್ ಗೆ ಹೋಗಿಬಂದ ಘಳಿಗೆಯಿಂದ ನಾಯಿ ಕುಯ್ಗುಡುವುದು ನಿಂತುಹೋಯಿತು. ಮೊನ್ನೆ ಮೊನ್ನೆ ಅದಕ್ಕೆ ಮೂರು ಮರಿ ಹುಟ್ಟಿ ,ಪ್ರತಿ ಮರಿ ತಲಾ ಇಪ್ಪತ್ತು ಸಾವಿರಕ್ಕೆ ಮಾರಾಟವಾಗಿಯೂ ಹೋದವು. ಪಾಪ ವೊಡಾಫೋನ್ ನಾಯಿ. ಮಾಡಿದ್ದು ಏನೂ ಇಲ್ಲ.ಆದರೂ ಎಲ್ಲ ಆಗಿ ಹೋಯಿತು.

ಈ ಘಟನೆ ಆದ ನಂತರ ಸಾಕಿದ ನಾಯಿಗಿಂತ ಮನುಷ್ಯ ಜನ್ಮವೇ ಉತ್ತಮ ಎಂದುಕೊಂಡೆ. ಈ ವೊಡಾಫೋನ್ ನಾಯಿ ಬೀದಿನಾಯಿಯಾಗಿಯಾದರೂ ಹುಟ್ಟಬಹುದಿತ್ತು. ಕೊನೆಪಕ್ಷ ಸ್ವಚ್ಛಂದವಾಗಿ ಇದ್ದು ಬಿಡಬಹುದಿತ್ತೆಂದು ಅಂದುಕೊಂಡೆ. ಕೊನೆಗೆ ನನ್ನ ಆ ಅಭಿಪ್ರಾಯ ಕೂಡ ಬಹುಬೇಗ ಸುಳ್ಳೆಂದು ಸಾಬೀತಾಗಿ ಹೋಯಿತು. ನಾನು ತಿಂಡಿಗೆ ಹೋಗುವ ಹೋಟೆಲ್ ಬಳಿ ಒಂದು ನಾಯಿ ಸದಾ ಓಡಾಡುತ್ತಿರುತ್ತೆ. ಖಾಕಿ ಬಟ್ಟೆಯಲ್ಲಿ ಯಾರೇ ಕಂಡರೂ ಅದು ಅವರ ಮೇಲೇರಿ ಹೋಗುತ್ತೆ. ಕೊನೆಗೆ ನಾನು ಅವರಿವರ ಬಳಿ ವಿಚಾರಿಸಿ ನಾಯಿಯ ಆ ಸ್ವಭಾವಕ್ಕೆ ಕಾರಣ ತಿಳಿದುಕೊಂಡೆ. ಒಮ್ಮೆ ಖಾಕಿ ಬಟ್ಟೆ ತೊಟ್ಟ ಕಾರ್ಪೋರೇಶನ್ ಮಂದಿ ಈ ನಾಯಿಯನ್ನು ಹಿಡಿದು ಬೀಜ ತೆಗೆದು ಕೈತೊಳೆದುಕೊಂಡು ಬಿಟ್ಟರಂತೆ . ಬೀಜ ಹೋದ ದುಃಖಕ್ಕೆ ಪ್ರತೀಕಾರವಾಗಿ ನಾಯಿ ಈಗ ಖಾಕಿ ಬಟ್ಟೆಯಲ್ಲಿ ಯಾರೇ ಕಂಡರೂ ಅವರ ಮೇಲೇರಿ ಹೋಗುತ್ತಿರುತ್ತೆ. ವೊಡಾಫೋನ್ ನಾಯಿ ಏನು ಮಾಡದಿದ್ದರೂ ಎಲ್ಲ ಆಗಿಹೋಯಿತು.ಅದರ ಕಥೆ ಹಾಗಾಯಿತು. ಈ ನಾಯಿ ಏನೂ ಮಾಡುವಂತಿಲ್ಲ .ಇದರ ಕಥೆ ಹೀಗಾಗಿಹೋಯಿತು.

ಇವೆರಡು ನಾಯಿಗಳ ನಾಯಿಪಾಡನ್ನು ನೋಡಿ ನನಗೆ ಜ್ಞಾನೋದಯವಾಯಿತು. ವೊಡಾಫೋನ್ ನಾಯಿಗೆ ಅದರದೇ ಆದ ನಾಯಿಪಾಡು.ಈ ಬೀದಿ ನಾಯಿಗೆ ಇನ್ನೊಂದು ತೆರನಾದ ನಾಯಿಪಾಡು.ನಮಗೆ ನಮ್ಮದೇ ಆದ ನಾಯಿಪಾಡು.

ಕೊನೆಯ ಮಾತು ....

ನಿಮ್ಮ ಏರಿಯಾದ ನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸಿ. ಮೊದಲಿನಿಂದಲೂ ನಿಮ್ಮ ಏರಿಯಾದಲ್ಲೇ ಇರುವ ನಾಯಿಗಳು ಬಾಲ ಬಿಚ್ಚಿಕೊಂಡು ಮೆರೆಯುತ್ತವೆ.ಹೊಸತಾಗಿ ಬೇರೆ ಕಡೆಯಿಂದ ಬಂದ ನಾಯಿಗಳು ತಮ್ಮ ಹಿಂದಿನ ಕಾಲುಗಳ ಸಂದಿಯಲ್ಲಿ ಬಾಲವನ್ನು ಬಚ್ಚಿಟ್ಟುಕೊಂಡು ಓಡಾಡುತ್ತವೆ. ಹೀಗೆಂದು ಮೊನ್ನೆ ಪ್ರಜಾವಾಣಿಯಲ್ಲಿ ಉಷಾ ಕಟ್ಟಿಮನಿಯವರು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದರು ..

ಪ್ರಜಾವಾಣಿಯಲ್ಲಿ ಆ ಲೇಖನವನ್ನು ಓದಿದ ನಂತರ ನಾನು ನನ್ನ ಏರಿಯಾದ ಎಲ್ಲ ನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ . ಅವುಗಳ ಬಾಲ ಎಲ್ಲಿದೆಯೆಂದು ಕುತೂಹಲದಿಂದ ನೋಡುತ್ತೇನೆ. ಇನ್ನು ಸ್ವಲ್ಪ ಕಾಲ ನನ್ನ ಈ ಸರ್ವೆ ಚಾಲ್ತಿಯಲ್ಲಿರುತ್ತೆ. ಇದೊಳ್ಳೆ ಮಜವಾಗಿದೆ .:) :) ..

Sunday, January 30, 2011

ಅರೆಕ್ಷಣದ ಅದೃಷ್ಟ ..

ಒಂದು ಒಳ್ಳೆಯ ಪುಸ್ತಕ ಓದಿ ಮುಗಿಸಿದ ಖುಷಿಯಲ್ಲಿ ನಿಮ್ಮೆದುರು ಬಂದಿದ್ದೇನೆ.ನನ್ನ ಖುಷಿಗೆ ಕಾರಣವಾದ ಆ ಪುಸ್ತಕ ಡಿ.ಜಿ.ಮಲ್ಲಿಕಾರ್ಜುನರದ್ದು. ಪುಸ್ತಕದ ಹೆಸರು ‘ಅರೆ ಕ್ಷಣದ ಅದೃಷ್ಟ ‘.

ಮಲ್ಲಿಕಾರ್ಜುನರು ತೇಜಸ್ವಿಯವರಿಂದ ಪ್ರಭಾವಿತನಾಗಿದ್ದೇನೆ ಎಂದು ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಮುಖಪುಟವೆಂಬ ಶುರುವಿನಿಂದಲೇ ತೇಜಸ್ವಿ ಪ್ರಭಾವ ಎದ್ದು ಕಾಣುತ್ತೆ.ಮಲ್ಲಿಕಾರ್ಜುನರ ಪುಸ್ತಕದ ಮುಖಪುಟ ನೋಡುವಾಗ ತೇಜಸ್ವಿ ನೆನಪಾದರು.ಅವರ ಪುಸ್ತಕ ಪ್ರಕಾಶನದ ಪುಸ್ತಕಗಳ ಮುಖಪುಟಗಳು ಕಣ್ಮುಂದೆ ಬಂದವು. ಹಾಗೆ ಈ ಪುಸ್ತಕ ಶುರುವಿನಿಂದಲೇ ಒಂದು ಬಗೆಯ ಉಲ್ಲಾಸಕ್ಕೆ ,ಖುಷಿಗೆ ಕಾರಣವಾಗುತ್ತೆ. ಇನ್ನು ಪುಸ್ತಕದ ಪುಟಗಳ ಗುಣಮಟ್ಟ ಅತ್ಯುತ್ತಮವಾದದ್ದು. ಪುಸ್ತಕದಲ್ಲಿನ ಫೋಟೋಗಳು ಉಸಿರಾಡುತ್ತವೆ.

ಈವತ್ತು ನಾನು ಬಂದದ್ದು ಪುಸ್ತಕದ ಪರಿಚಯ ಹೇಳುವುದಕ್ಕಾಗಲಿ ಅಥವಾ ಪುಸ್ತಕ ಹಾಗಿದೆ ಹೀಗಿದೆ ಎಂದು ವಿಮರ್ಶೆಯ ಧಾಟಿಯಲ್ಲಿ ಮಾತನಾಡುವುದಕ್ಕಾಗಲಿ ಅಲ್ಲವೇ ಅಲ್ಲ. ನಾನು ಬಂದದ್ದು ಪುಸ್ತಕದ ಬಗೆಗಿನ ನನ್ನ ಖುಷಿಯನ್ನ ಹಂಚಿಕೊಳ್ಳುವುದಕ್ಕಷ್ಟೇ. ಅದನ್ನಷ್ಟೇ ಮಾಡುತ್ತೇನೆ.ನನ್ನ ಖುಷಿಗಳು ಈ ಕೆಳಗಿನಂತಿವೆ ನೋಡಿ.

Ø ಇಡೀ ಪುಸ್ತಕದ ಪುಟಗಳ ಗುಣಮಟ್ಟ ತುಂಬಾ ಎತ್ತರದಲ್ಲಿದೆ. ಫೋಟೋಗಳನ್ನ ಜೀವಂತವಾಗಿಸುವಲ್ಲಿ ಇದು ಅವಶ್ಯಕವಾದ್ದರಿಂದ ,ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಿಲ್ಲ ಎಂಬುದು ಸ್ಪಷ್ಟ. ಅದೆಲ್ಲ ಇರಲಿ ಬಿಡಿ. ನಾನು ಹೇಳಹೊರಟಿರುವುದು ಅದನ್ನಲ್ಲ. ಈ ಪುಸ್ತಕವನ್ನ ಎಲ್ಲೆಂದರಲ್ಲಿ ಇಡಲು ಮನಸ್ಸೇ ಆಗುವುದಿಲ್ಲ. ಪ್ರತಿ ಪುಟವನ್ನ ಆಗಾಗ ಒರೆಸಿ ಜೋಪಾನಮಾಡಿ ಇಡಬೇಕೆಂದು ಅನ್ನಿಸಿಬಿಡುತ್ತೆ.

Ø ಪುಸ್ತಕದಲ್ಲಿರುವ ಫೋಟೋಗಳನ್ನು ಹಾಗೆಯೇ ಕತ್ತರಿಸಿ ಎತ್ತಿಕೊಂಡು ಫ್ರೇಮು ಹಾಕಿಸಿ ಗೋಡೆಗೆ ತೂಗಿ ಹಾಕಿಕೊಳ್ಳಬಹುದು .ಫೋಟೋಗಳ ಅಷ್ಟು ಚೆನ್ನಾಗಿವೆ . ಸಣ್ಣವನಿದ್ದಾಗ ಈ ಪುಸ್ತಕವೇನಾದರೂ ಕೈಗೆ ಸಿಕ್ಕಿದ್ದರೆ ,ಕೈಗೆ ಸಿಗುತ್ತಿದ್ದಂತೆ ಫೋಟೋಗಳನ್ನೆಲ್ಲ ಕತ್ತರಿಸಿ ,ಕೊನೆಗೆ ವಿದ್ಯಾ ನೋಟ್ ಬುಕ್ಕಿನಲ್ಲಿ ಅವನ್ನೆಲ್ಲ ಅಂಟಿಸಿ ನನ್ನದೇ ಒಂದು ಸ್ವಂತ ಪರ್ಸನಲ್ ಪ್ರೈವೇಟ್ ಆಲ್ಬಮ್ ಮಾಡಿಕೊಂಡಿರುತ್ತಿದ್ದೆ.

Ø ಪ್ರತಿಯೊಂದು ಚಿತ್ರ ಲೇಖನದ ಕೊನೆಗೆ ಸಿಗುವ ಉಪಸಂಹಾರದ ಸಾಲುಗಳು ಯೋಚನೆಗೆ ಹಚ್ಚುತ್ತವೆ .ಹಿತಾನುಭವ ನೀಡುತ್ತವೆ.

Ø ನನಗೆ ಪತಂಗಕ್ಕೂ ,ಚಿಟ್ಟೆಗೂ ಇರುವ ವ್ಯತ್ಯಾಸ ಗೊತ್ತಿರಲಿಲ್ಲ.ಇಲ್ಲಿತನಕ ಅವರೆಡೂ ಒಂದೇ ಎಂದುಕೊಂಡಿದ್ದೆ. ಈ ಪುಸ್ತಕದಲ್ಲಿ ಅವೆರಡರ ನಡುವಿನ ವ್ಯತ್ಯಾಸ ತಿಳಿದಾಗ ತುಂಬಾ ಖುಷಿಯಾಯಿತು.ಅದು ಹೊಸತನ್ನು ತಿಳಿದುಕೊಂಡ ಖುಷಿ. ಹೀಗೆ ಖುಷಿಪಡುವ ಸಂಗತಿಗಳು ಪುಸ್ತಕದ ಉದ್ದಕ್ಕೂ ನನಗೆ ಸಿಕ್ಕಿವೆ.

Ø ಇಲ್ಲಿ ಫೋಟೋಗಳು ಸಹಜಸುಂದರ.ಫೋಟೋ ಜೊತೆಗಿನ ಬರಹಗಳು ಸರಳ ಸುಂದರ.

Ø ನನ್ನ ರೂಮ್ ಪಕ್ಕ ಒಂದು ಅಂಟುವಾಳದ ಮರವಿದೆ. ಅಲ್ಲಿ ಒಂದು ಬಗೆಯ ಕೀಟಗಳು ಹೇರಳವಾಗಿದೆ.ಕೆಲವೊಮ್ಮೆ ಅವು ಕದ್ದುಮುಚ್ಚಿ ರೂಮಿಗೆ ಬಂದು ಪ್ಯಾಂಟ್ ನ ಜೇಬಿನಲ್ಲೋ , ಅಂಗಿಯ ಜೇಬಿನಲ್ಲೂ ,ಗೋವಾ ಚಡ್ಡಿಯ ಜೇಬಿನ ಮೂಲೆಯಲ್ಲೂ ಮೊಟ್ಟೆ ಇಟ್ಟು ಹೋಗಿಬಿಡುತ್ತವೆ. ಪ್ಯಾಂಟ್ ಅಥವಾ ಗೋವಾ ಚಡ್ಡಿ ಏರಿಸಿಕೊಂಡು ಕಿಸೆಗೆ ಕೈಹಾಕಿದರೆ ಈ ಕೀಟದ ಮೊಟ್ಟೆ ಕೆಲವೊಮ್ಮೆ ಕೈಗೆ ಸಿಗುತ್ತವೆ. ಈಗೊಂದು ತಿಂಗಳ ಕೆಳಗೆ ಟೆರೆಸ್ ಮೆಟ್ಟಿಲ ಬಳಿ ಈ ಕೀಟ ಮೊಟ್ಟೆಯಿಡುತ್ತ ಕುಳಿತಿತ್ತು. ಅಪರೂಪದ ಘಳಿಗೆಯದು.ತುಂಬಾ ಆಸಕ್ತಿಯಿಂದ ಸುಮಾರು ಹೊತ್ತಿನ ತನಕ ಅದನ್ನೇ ನೋಡುತ್ತಾ ಕುಳಿತಿದ್ದೆ. ಮೊನ್ನೆ ಮಲ್ಲಿಕಾರ್ಜುನರ ಪುಸ್ತಕದಲ್ಲಿ ಆ ಕೀಟವನ್ನ ಕಂಡೆ. ನನ್ನ ರೂಮ್ಗೆ ಕದ್ದು ಮುಚ್ಚಿ ಬಂದು ಮೊಟ್ಟೆಯಿಟ್ಟು ಹೋಗುವ ಆ ಕೀಟ ಜೀರುಂಡೆ ಕುಲಕ್ಕೆ ಸೇರಿದ್ದು ಎಂದು ತಿಳಿಯಿತು. ಈಗ ಆ ಕೀಟಗಳನ್ನ ಮೊದಲಿಗಿಂತ ಆಸಕ್ತಿಯಿಂದ ನೋಡುತ್ತಿದ್ದೇನೆ. ಮೊನ್ನೆಯಷ್ಟೇ ಅವುಗಳ ಮಿಲನ ಮಹೋತ್ಸವದ ದೃಶ್ಯವನ್ನ ಕಂಡಿದ್ದೇನೆ. ಸದ್ಯದಲ್ಲಿಯೇ ಮತ್ತೆ ಮೊಟ್ಟೆಯಿಡುವ ದೃಶ್ಯವನ್ನ ಕಾಣುವ ನಿರೀಕ್ಷೆಯಲ್ಲಿ ನಾನಿದ್ದೇನೆ.

Ø ಈ ಜೀರುಂಡೆಗಳನ್ನು ಮಾತ್ರವಲ್ಲ .ಎಲ್ಲವನ್ನೂ ಈಗ ಹೊಸದಾಗಿ ನೋಡುತ್ತಿದ್ದೇನೆ.ನನ್ನ ಸುತ್ತಲಿನ ಯಾವುದೂ ಈಗ ನೀರಸವಾಗಿ ಕಾಣುತ್ತಿಲ್ಲ.

ಖುಷಿಯ ಆಚೆ ಕೊನೆಗೊಂದು ಟೈಮ್ ಪಾಸ್ ತಲೆಹರಟೆ

ಈ ಪುಸ್ತಕದ ಮುನ್ನುಡಿಯಲ್ಲಿ ನೇಮಿಚಂದ್ರ ಅವರು ಒಂದು ಮಾತು ಹೇಳಿದ್ದಾರೆ.ಅದೇ ಮಾತನ್ನೇ ನಾಗೇಶ್ ಹೆಗಡೆಯವರು ಪುಸ್ತಕ ಬಿಡುಗಡೆಯ ದಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ‘ ಈ ಪುಸ್ತಕವನ್ನ ಎಲ್ಲ ಅಧ್ಯಾಪಕರು ,ಪೋಷಕರು .ಎಳೆಯ ಮಕ್ಕಳು ಓದಬೇಕೆಂದು ಅವರಿಬ್ಬರೂ ಹೇಳಿದ್ದಾರೆ. ಅದು ನಿಜಕ್ಕೂ ಒಳ್ಳೆಯ ವಿಚಾರ. ಆದರೆ ಇಲ್ಲೊಂದು ಮಜವಾದ ಸಮಸ್ಯೆಯಿದೆ. ಈ ಅಧ್ಯಾಪಕರು ಹಾಗು ಪೋಷಕರು ದೊಡ್ಡವರು.ಈ ದೊಡ್ಡವರು ಈ ಪುಸ್ತಕವನ್ನ ಓದುತ್ತಾ ಚಿಕ್ಕವರಾಗುವ ಭಾಗ್ಯ ಇಲ್ಲುಂಟು. ಹಾಗೆಯೇ ಎಳೆಯ ಮಕ್ಕಳು ತೀರಾ ದೊಡ್ಡವರಾಗಿ ಬಿಡುವ ಕಷ್ಟವೂ ಇಲ್ಲಿ ಉಂಟು. ಕಾರಣ ಇಷ್ಟೇ.ಇಲ್ಲಿ ಕೆಲವು ಪ್ರಣಯ ಪ್ರಸಂಗಗಳ ಫೋಟೋಗಳಿವೆ. ಈ ನಮ್ಮ ಎಳೆಯ ಮಕ್ಕಳು ಅವನ್ನೆಲ್ಲ ನೋಡಿ ,ತಲೆಬುಡ ಅರ್ಥವಾಗದೆ ‘ ಅಪ್ಪ ಅಪ್ಪ ಆ ಕರಿ ಮೊಲದ ಮೇಲೆ ಬಿಳಿ ಮೊಲ ಏನ್ ಮಾಡ್ತಿದೆ ? ಅಮ್ಮ ಅಮ್ಮ ಆ ಚಿಟ್ಟೆಗಳು ಯಾಕೆ ಅಂಟಿಕೊಂಡು ಕೂತಿವೆ ? ಈ ಗುಬ್ಬಚ್ಚಿ ಮೇಲೆ ಆ ಗುಬ್ಬಚ್ಚಿ ಕೂತು ಏನ್ ಮಾಡ್ತಿದೆ ಸಾರ್ ? ಎಂದೆಲ್ಲ ಕೇಳಿಬಿಟ್ಟರೆ ! ಅಂಥ ಪ್ರಸಂಗದಲ್ಲಿ ಈ ದೊಡ್ಡವರ ಪಡಿಪಾಟಲು ನೆನಸಿಕೊಂಡು ನಾನು ನನ್ನಷ್ಟಕ್ಕೆ ನಕ್ಕಿದ್ದೇನೆ :) :) ;).

Saturday, January 22, 2011

ಸಭ್ಯ ಪೋಲಿ ಕವನಗಳು ..

ಸಭ್ಯ ಪೋಲಿ ಕವನ :೨ ..........


ಮದನರಾಗವ ನುಡಿಸಬೇಕಿದೆ

ವೀಣೆಯಾಗು

ಶ್ರುತಿ ನಿನ್ನದೇ ತಾಳ ನನ್ನದು

ಇನ್ನೇನು ಬೇಕು ?

ಅಡ್ಡಕಸುಬಿ ನಾನು ಅವಸರಕ್ಕೆ ಬಿದ್ದವನು

ಪರಿಣಿತಿಯ ಪ್ರಶ್ನೆ ಬೇಕಿಲ್ಲ

ತಾಳ ತಪ್ಪಿದರೆ ಅದು ತಪ್ಪಲ್ಲ.

ನಾ ನುಡಿಸಬೇಕು ನನಗೆ ತಿಳಿದಂತೆ

ನೀ ಮಿಡಿಯಬೇಕು ನಿನಗೆ ಒಲಿದಂತೆ

ಅಷ್ಟೇ ಸಾಕು.


ಮೂಡಣದ ಸೂರ್ಯ ಪಡುವಣಕೆ ಬಂದು

ಘಳಿಗೆ ಮೂರಾಯಿತು

ರಾಗ ಕೈಹಿಡಿಯುತಿದೆ ಈಗಷ್ಟೇ

ಪಡುವಣಕೆ ಬಂದವನು ಬರಲಿ ಬಿಡು

ನಡೆಯಲಿ ತಾಲೀಮು

ಪಡುವಣಕೆ ಬಂದವನು ಮತ್ತೆ ಮೂಡಣಕೆ ಸಲ್ಲುವ ತನಕ

ಕಾಲದ ಪರಿವೆ ಮರೆಯಬೇಕು

ಇಹದ ಅರಿವ ತೊರೆಯಬೇಕು

ತಂತಿ ಮೆದುವಾಗಬೇಕು

ಬೆರಳು ನೀರಾಗಬೇಕು

ಸರಾಗವಾಗಬೇಕು

ಆರೋಹಣ ಅವರೋಹಣ

ಸಿದ್ಧಿಯ ಹಾದಿಯಲಿ ದಣಿವೇ ನೆರಳು

ಬೆವರೇ ಪನ್ನೀರು

ನಿಂತು ನಿಂತು ಮುನ್ನಡೆಯಬೇಕು

ಬೆವರು ಹರಿದಷ್ಟೂ ಬಾಯಾರಿಕೆ ನೀಗಬೇಕು

ರಾಗ ಸಂಪನ್ನವಾಗಬೇಕು

ನಾ ಸೋಲುವಲ್ಲಿ ನೀ ಗೆಲ್ಲಬೇಕು

ನಿನ್ನ ಸೋಲೆನ್ನ ಗೆಲುವಾಗಬೇಕು

ನಿನ್ನಲೊಂದು ತೃಪ್ತಹಾಸ

ನನ್ನಲೊಂದು ಮಂದಹಾಸ

ಮುಂಜಾವು ಅಡಿಯಿಡುವ ಘಳಿಗೆಯಲಿ

ಉದಯರಾಗವಾಗಬೇಕು ...