Friday, December 31, 2010

ವೈರಾಗ್ಯವೆಂಬ ವಯಾಗ್ರ ....

ಇದು ಈ ದಿನಮಾನದ ಎಲ್ಲರ ಅಗತ್ಯ ....

ಹಿಂದಿದ್ದ ನನ್ನ ಹಳೆಯ ಬ್ಲಾಗಿನಲ್ಲಿ ಬ್ಲಾಗ್ ಶುರುಮಾಡಿದ ಆರಂಭದ ದಿನಗಳಲ್ಲಿ ಕೆಲವು ಕವನಗಳನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೆ.ಆ ಕವನಗಳ ಹಿನ್ನೆಲೆಯಲ್ಲಿ ಇದ್ದದ್ದು ಗಾಢ ವಿಷಾದದ ಛಾಯೆ.ಜೊತೆ ಜೊತೆಗೆ ವಯಸ್ಸಿಗೆ ಮೀರಿದ ವೈರಾಗ್ಯ .ಕೆಲವರು ಈ ಬಗ್ಗೆ ಆಕ್ಷೇಪ ಎತ್ತಿ , ನಿನ್ನ ವಯಸ್ಸಿಗೆ ಇದು ಸರಿಯಲ್ಲ ಎಂಬ ಕಿವಿಮಾತು ಹೇಳುತ್ತಿದ್ದರು. ಅವರ ಆ ಆಕ್ಷೇಪದಲ್ಲಿ ಹುರುಳಿತ್ತು.ನಾನು ಬದಲಾದೆ. ನನ್ನ ಬರಹಗಳು ನನ್ನ ವಯಸ್ಸಿನ ದಿಕ್ಕಿಗೆ ಹೊರಳಿಕೊಂಡವು.

ನನಗೀಗ ವಯಸ್ಸು ಇಪ್ಪತ್ಮೂರು . ‘ ಹೆಣ್ಣು ಹೊನ್ನು ಮಣ್ಣು ಎಲ್ಲ ಮಾಯೆ ,ಎಲ್ಲ ನಶ್ವರ’ ಎನುವ ರೀತಿಯ ಮಾತುಗಳು ನನ್ನ ಕಡೆಯಿಂದ ಬರಲೇಬಾರದು.ಅದು ನಿಜಕ್ಕೂ ಆರೋಗ್ಯಕರ ಲಕ್ಷಣವಲ್ಲ. ಆದರೆ ಒಂದು ಹದವಾದ ಸಣ್ಣ ವೈರಾಗ್ಯ ನಿಜಕ್ಕೂ ಆರೋಗ್ಯಕರ ಎಂಬುದು ಈಗೀಗ ನಾನು ಕಂಡುಕೊಂಡ ಸತ್ಯ. ಈಗ ನನ್ನ ಪಾಲಿಗೆ ವೈರಾಗ್ಯವೆಂದರೆ ಕೇವಲ ವೈರಾಗ್ಯವಲ್ಲ. ಅದು ವಿರಾಗ.ವಿಶೇಷ ರಾಗ. ಜಗತ್ತನ್ನು ಬೇರೆಯದೇ ರೀತಿಯಲ್ಲಿ ನೋಡುವ ಮೂರನೇ ಕಣ್ಣು ವೈರಾಗ್ಯ. ಅದು ಎಲ್ಲವನ್ನೂ ಕಂಡೂ ಏನನ್ನೂ ಕಾಣದ ಕಣ್ಣು.ಇದ್ದೂ ಇಲ್ಲದಂತಾಗಿ ,ಹಿಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಜಗತ್ತಿನ ಎದುರು ಮುಖಾಮುಖಿಯಾಗಲಿಕ್ಕೆ ಈ ವೈರಾಗ್ಯ ಬೇಕು. ಅದು ಕೇವಲ ಸನ್ಯಾಸಿಗಳ, ತತ್ವ ಜ್ಞಾನಿಗಳ, ಹತಭಾಗ್ಯರ .ಮುದುಕರ ಸ್ವತ್ತಲ್ಲ.ಅದು ಈ ದಿನಮಾನದ ಎಲ್ಲರ ಅಗತ್ಯ.

ಈಗೊಂದು ಸ್ವಲ್ಪ ದಿನದ ಕೆಳಗೆ ಪೇಪರಿನಲ್ಲಿ ಅನಂತಮೂರ್ತಿಯವರ ಒಂದು ಮಾತು ಹೇಳಿದ್ದರು.ಅವರು ಈ ಜಾಗತೀಕರಣ ,ಕೈಗಾರೀಕರಣ, ಅಭಿವೃದ್ಧಿ ಮುಂತಾದ ಪ್ರಸ್ತುತ ವಿದ್ಯಮಾನದ ಬಗ್ಗೆ ಮಾತನಾಡುತ್ತ ‘ ಯಾವುದೇ ಅಭಿವೃದ್ಧಿ ಇರಲಿ, ಬೆಳವಣಿಗೆಗಳಿರಲಿ ,ಅಲ್ಲಿ ವೈರಾಗ್ಯಕ್ಕೂ ಕೊಂಚ ಜಾಗವಿರಬೇಕು ‘ ಎಂಬರ್ಥದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಈಗಂತೂ ಜಗತ್ತು ಅಸಂಖ್ಯ ಆಯ್ಕೆಗಳ ಸಾಗರ. ಮನುಷ್ಯನ ಮೂಲಭೂತ ಅವಶ್ಯಕತೆಗಳು ಹಿಂದಿನಂತಯೇ ಇವೆ.ಆದರೆ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವ ದಾರಿಯಲ್ಲಿ ನೂರಾರು ಆಯ್ಕೆಗಳು. ನಾವು ಆಧುನಿಕರಾದಷ್ಟೂ ಅತೃಪ್ತರಾಗುತ್ತಿದ್ದೇವೆ.

ಒಂದು ಕೆಲಸ ಸಿಕ್ಕಿ ಕೊಂಚ ದುಡ್ಡು ಕೈಸೇರುತ್ತಿದಂತೆ ನಮಗೆ ಕ್ರೆಡಿಟ್ ಕಾರ್ಡ್ ಬೇಕು. ಇರುವ ಕೆಲಸವನ್ನ ನಂಬಿಕೊಂಡು ಇನ್ಸ್ಟಾಲ್ಮೆಂಟ್ ಲೆಕ್ಕದಲ್ಲಿ ಒಂದಾದ ಮೇಲೊಂದರಂತೆ ಕಾರು, ಫ್ಲಾಟು ಎಂದು ಖರೀದಿ ಮಾಡುತ್ತಾ ಹೋಗುತ್ತೇವೆ.ಕಳೆದ ರಿಸೆಶನ್ ಸಮಯದಲ್ಲಿ ಹೀಗೆ ಸಾಲ ಮಾಡಿ ತಿಂಗಳು ತಿಂಗಳು ಇನ್ಸ್ಟಾಲ್ಮೆಂಟ್ ಕಟ್ಟುತ್ತಿದ್ದ ಎಷ್ಟು ಜನ ಕಂಗಾಲಾಗಿ ಹೋದರು ನೋಡಿ. ಇದು ದುಬಾರಿಯ ಕಾಲ.ಇದು ತೀವ್ರವಾದ ಸ್ಪರ್ಧೆಯ ಕಾಲ ನಿಜ. ಆದರೆ ನಾವಂದುಕೊಂಡಷ್ಟು ಪರಿಸ್ಥಿತಿ ಕೈಮೀರಿಲ್ಲ. ಎಲ್ಲ ನಮ್ಮ ಕೈಯಲ್ಲೇ ಇದೆ.ಎಲ್ಲವೂ ದುಬಾರಿ ಆದರೆ ಆಗಲಿ ಬಿಡಿ.ನಮ್ಮ ಅನಾವಶ್ಯಕ ಅಗತ್ಯತೆಗಳನ್ನ ಕಡಿಮೆ ಮಾಡಿಕೊಳ್ಳಬಹುದಲ್ಲ. ನಮ್ಮ ಎಲ್ಲ ಸಂಕಷ್ಟಕ್ಕೆ ಕಾರಣ ನಮ್ಮನ್ನು ನಾವು ಉಳಿದವರ ಜೊತೆ ಹೋಲಿಕೆ ಮಾಡಿಕೊಳ್ಳುವ ಗುಣ. ನಮಗಾಗಿ ನಾವು ನಮ್ಮ ಪಾಡಿಗೆ ಬದುಕಿಬಿಟ್ಟರೆ ನಮ್ಮ ಸಂಕಷ್ಟ ಅರ್ಧ ಕಡಿಮೆಯಾದಂತೆ.ದುರಂತವೆಂದರೆ ನಾವು ಉಳಿದವರ ಸಲುವಾಗಿ ಬದುಕುತ್ತೇವೆ. ಪ್ರತಿಷ್ಠೆಗಾಗಿ ಬದುಕುತ್ತೇವೆ. ಉಳಿದವರ ಜೊತೆ ತೋರಿಕೆಯ ವಿಷಯದಲ್ಲಿ ಸರಿಸಮಾನವಾಗಿ ಬದುಕಬೇಕೆಂಬ ಹಪಾಹಪಿಗೆ ಬೀಳುತ್ತೇವೆ.ಮಾಡುವ ಕೆಲಸದಲ್ಲಿ ,ಚಿಂತನೆಯ ರೀತಿಯಲ್ಲಿ ಘನತೆಯಿದ್ದರೆ,ವೈಭವವಿದ್ದರೆ ಸಾಕಲ್ಲವೇ ?

ಈಗಂತೂ ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ. ಎಷ್ಟೇ ಫ್ಲೈ ಓವರ್ಗಳು ತಲೆ ಎತ್ತಲಿ, ರಸ್ತೆಗಳು ಎಷ್ಟೇ ಅಗಲವಾಗಲಿ,ಟ್ರಾಫಿಕ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಪರಿಹಾರವೆಂಬಂತೆ ‘ಕಾರ್ ಪೂಲಿಂಗ್’, ‘ಬಸ್ ಡೇ ‘ ಮುಂತಾದ ಹೊಸಾ ಚಿಂತನೆಗಳು ಶುರುವಾಗಿವೆ.ಅತ್ತ ಮೆಟ್ರೋ ರೈಲು ಸಿದ್ಧವಾಗುತ್ತಿದೆ.ಈ ಟ್ರಾಫಿಕ್ ಸಮಸ್ಯೆ ಹಾಗು ಅದರಿಂದ ಪೋಲಾಗುವ ಸಮಯವನ್ನ ಗಮನದಲ್ಲಿಟ್ಟುಕೊಂಡು ಕೆಲವು ಕಂಪನಿಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಅವಕಾಶವನ್ನ ನೌಕರರಿಗೆ ಒದಗಿಸುತ್ತಿವೆ.ಭವಿಷ್ಯದಲ್ಲಿ ಈ ಪದ್ಧತಿಯನ್ನ ಅಳವಡಿಸಿಕೊಳ್ಳಲು ಎಲ್ಲ ಕಂಪನಿಗಳು ಗಂಭೀರವಾಗಿ ಯೋಚಿಸುತ್ತಿವೆ. ಈ ಟ್ರಾಫಿಕ್ ಸಮಸ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತು. ಅತ್ತ ಮೋಟಾರು ವಾಹನಗಳ ಮಾರಾಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಓಡಾಡಲಿಕ್ಕೆ ಬಸ್ ಗಳಿವೆ.ಐಷಾರಾಮ ಬೇಕೆನುವ ಮಂದಿಗೆ ಅದು ಕೂಡ ಲಭ್ಯ ವಾಯು ವಜ್ರದಂಥ ಐಷಾರಾಮಿ ಬಸ್ಸುಗಳಲ್ಲಿ. ಅತ್ತ ಕಂಪನಿಗಳೇ ಕೆಲಸಕ್ಕೆ ಹೋಗಿ ಬರುವ ಸಮಯದಲ್ಲಿ ತನ್ನ ನೌಕರರಿಗಾಗಿ ಕಳುಹಿಸುವ ವಾಹನಗಳಿವೆ ,ಮೆಟ್ರೋ ಇನ್ನು ಸ್ವಲ್ಪವೇ ಸಮಯದಲ್ಲಿ ಸಿದ್ಧವಾಗಲಿದೆ. ಆದರೂ ನಮ್ಮ ಜನಗಳಿಗೆ ಮನೆಯ ಅಂಗಳದಲ್ಲಿ ಅಲಂಕಾರಕ್ಕೆ ಒಂದು ಕಾರು ಬೇಕೇ ಬೇಕು. ಕಾರು ಖರೀದಿ ಮಾಡದಿದ್ದರೆ ಅಷ್ಟು ದುಡ್ಡೂ ಉಳಿಯುತ್ತೆ.ದುಡ್ಡು ಒಟ್ಟು ಮಾಡುವ ಭರದಲ್ಲಿ ಹೊತ್ತುಗೊತ್ತಿಲ್ಲದೆ ವಿಪರೀತ ದುಡಿಮೆಗೆ ಈಡಾಗುವ ಕಷ್ಟ ತಪ್ಪುತ್ತೆ.ಕುಟುಂಬದೊಂದಿಗೆ ಸಮಯ ಕಳೆಯಲು ಪುರುಸೊತ್ತು ಸಿಗುತ್ತೆ. ಪೆಟ್ರೋಲು ಡೀಸೇಲುಗಳಿಗೆ ಮಾಡುವ ಖರ್ಚು ಇಲ್ಲವಾಗುತ್ತೆ.ಇಂಧನದ ಉಳಿತಾಯವಾಗುತ್ತೆ.ಮಾಲಿನ್ಯ ಕಡಿಮೆಯಾಗುತ್ತೆ .ಟ್ರಾಫಿಕ್ ಸಮಸ್ಯೆಯೂ ನೀಗುತ್ತೆ.ಇವೆಲ್ಲ ನಮಗೆ ಅರ್ಥವಾಗುವುದೇ ಇಲ್ಲ. ನಾವು ವಿದ್ಯಾವಂತರು.ಪ್ರಜ್ಞಾವಂತರು?

ಇಲ್ಲಿ ಕಾರಿನ ಪ್ರಸಂಗ ಒಂದು ಉದಾಹರಣೆಯಷ್ಟೇ.ಹೇಳ ಹೊರಟರೆ ತುಂಬಾ ಇವೇ ನಮ್ಮ ದಡ್ಡತನಗಳು. ‘ಪಾಪ ಹುಡುಗ,ವಯಸ್ಸಿನ ಆವೇಶದಲ್ಲಿ ಬರೆಯಲಿಕ್ಕೆ ಒಂದು ಜಾಗ ಸಿಕ್ಕಿದೆ ಎಂದು ತುಂಬಾ ಆವೇಶದಲ್ಲಿ ಮಾತಾಡುತ್ತಿದ್ದಾನೆ.ಹುಟ್ಟಿ ಎರಡು ಸೋಮವಾರ ಕೂಡ ಆಗಿಲ್ಲ.ಇವನಿಗಿನ್ನೂ ಅನುಭವ ಕಡಿಮೆ.’ ಎಂದು ಕೆಲವರು ಅಂದುಕೊಳ್ಳಬಹುದು.ನಾನು ಸಣ್ಣವನು .ನನಗೆ ಅನುಭವ ಕಡಿಮೆ ನಿಜ.ಅನುಭವ ಇಲ್ಲದವನಿಗೆ ತಿಳುವಳಿಕೆ ಕಡಿಮೆ ಎನ್ನುವುದು ಲೋಕಾರೂಢಿ .ಆದರೆ ಒಂದಂತೂ ಸತ್ಯ.ದೊಡ್ಡವರ ಸಣ್ಣತನಗಳು ಅರ್ಥವಾಗುವಷ್ಟು ತಿಳುವಳಿಕೆ ನನಗೆ ಬಂದಿದೆ.ಹೇಗೆ ಬದುಕಬೇಕೆಂಬುದಕ್ಕೆ ದೊಡ್ಡವರು ಉದಾಹರಣೆ.ಹೇಗೆ ಬದುಕಬಾರದು ಎಂಬುದಕ್ಕೂ ಮತ್ತೆ ಅವರೇ ಉದಾಹರಣೆ. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಮಾತು ನಿಜ. ಆದರೆ ನಮ್ಮನ್ನು ನಾವು ಬಿಟ್ಟು.ನಮ್ಮ ಸ್ವಂತ ಬುದ್ಧಿಯನ್ನು ಬಿಟ್ಟು ಎಲ್ಲರೊಳಗೊಂದಾಗ ಹೊರಟರೆ ಕೊನೆಗೆ ನಾವಾಗುವುದು ಗುಂಪಿನಲ್ಲಿ ಗೋವಿಂದರಷ್ಟೇ.

ನಾವು ನಾವಾಗಿದ್ದುಕೊಂಡು ಎಲ್ಲರೊಳಗೊಂದಾಗಬೇಕು. ತೀರಾ ಜಗತ್ತಿಗೆ ಅಂಟಿಕೊಳ್ಳಬಾರದು. ಒಂದು ಸಣ್ಣ ವೈರಾಗ್ಯ ಇಟ್ಟುಕೊಂಡೇ ಬದುಕಬೇಕು.ಹದವಾದ ವೈರಾಗ್ಯವಿದ್ದಲ್ಲಿ ತೃಪ್ತಿಯಿರುತ್ತೆ.ತೃಪ್ತಿಯಿದ್ದಲ್ಲಿ ನೆಮ್ಮದಿ.ಆಗ ನಿಜಕ್ಕೂ ಜಗತ್ತು ನಮ್ಮ ಪಾಲಿಗೆ ನವ ನವೀನ.ಇಲ್ಲದಿದ್ದರೆ ಅದು ಭಟ್ಟರ ಭಾಷೆಯಲ್ಲಿ ‘ಹಳೇ ಬೇಜಾರು’.

ಯಾರ್ಯಾರದೋ ಹಂಗಿಗೆ,ಇನ್ಯಾವುದೋ ಮುಲಾಜಿಗೆ ,ಹೇಗಾದರೂ ಸರಿ ಒಟ್ಟಿನಲ್ಲಿ ಬದುಕಬೇಕೆಂಬ ಅಸಹಾಯಕತೆಗೆ ಬಿದ್ದು ಇಷ್ಟವಿಲ್ಲದ ಕೆಲಸವನ್ನು ಕಷ್ಟಪಟ್ಟು ಮಾಡಿ ದಣಿದ ಮೈಮನಸ್ಸುಗಳಿಗೆ ನವಚೈತನ್ಯ ಎಂಬುದೊಂದಿದ್ದರೆ ಅದು ವೈರಾಗ್ಯದಿಂದ ಮಾತ್ರ ಸಾಧ್ಯ.

ಆ ಕಾರಣಕ್ಕೆ ನಾನು ವೈರಾಗ್ಯ ಬೇಕು ಎಂದಿದ್ದು. ವೈರಾಗ್ಯವೇ ವಯಾಗ್ರ ಎಂದದ್ದು .:) :) .

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ..:) :).

Sunday, December 26, 2010

ರವಿಯಿರದ ಸಂಧಿಯಲಿ ಚಂದ್ರ ಅವಕಾಶವಾದಿ ..

ಇಂದಿನ ರವಿ ಎಂದಿನಂತಿಲ್ಲ

ಉಡುಗುತಿದೆ ಬೆಳಗುವ ತ್ರಾಣ

ಅಳಿಯುತಿದೆ ಬೆಳಕಿನ ಬಣ್ಣ

ಅಪರಾಹ್ನ ಅಡಿಯಿಡುವ ಹೊತ್ತಿಗೆ ಅಕಾಲ ಸಂಜೆ

ರಾತ್ರಿ ದೂರಿಲ್ಲ

ಹಗಲಿಲ್ಲದ ಮೇಲೆ ರವಿಯೂ ಇಲ್ಲ


ರವಿ ಅರಳಿಸಿದ ಆ ಹೂವು

ರವಿ ಕಾಣಿಸಿದ ಹೂವ ಬಣ್ಣದ ಬೆರಗು

ಅರಳಿದ್ದು ಮುದುಡಿಹೋಯಿತು

ಕಂಡಿದ್ದು ಎಲ್ಲಿ ಕಾಣೆಯಾಯಿತೋ?

ಕತ್ತಲಲ್ಲಿ ಕಣ್ಣಿದ್ದೂ ಕುರುಡು

ಅಗೋ ಅಲ್ಲಿ

ರವಿಯಿರದ ಸಂಧಿಯಲಿ ಹಾಳು ಅವಕಾಶವಾದಿ ಚಂದ್ರ

ಹೊಳಪಾಗಿ ಕಂಡರೂ ದಾರಿ ತೋರಲಾರ

ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.

ಹಚ್ಚಬೇಕಿದೆ ದೀಪ ಕನಸ ಕಡ್ಡಿಯ ಗೀರಿ

ನಾಳೆಯ ಹಗಲು ಈಗಲೇ ಬೆಳಕಾಗಲಿ

ಎಂದಿನಂತಿಲ್ಲದ ರವಿ ನಾಳೆ ಏನಾಗುವನೋ

ರವಿ ಬಂದರೂ ಬರಬಹುದು ನಾಳೆ

ಖಾತ್ರಿಯಿಲ್ಲ .

Sunday, December 19, 2010

ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆಗಳು ಡಿಲೀಟ್ ಆದವು...

ಈಗೊಂದು ಎರಡು ದಿನದ ಕೆಳಗೆ ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆಗಳನ್ನ ಡಿಲೀಟ್ ಮಾಡಿಬಿಟ್ಟೆ. ಸಾಕು ಎನ್ನಿಸಿ ಹೋಗಿತ್ತು. ತೀರ ಸಹಜವಾಗಿ ಡಿಲೀಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ದೊಡ್ಡ ಹೊರೆಯೊಂದನ್ನು ಇಳಿಸಿ ಕೊಂಡು ಸುಮ್ಮನಾಗಿಬಿಟ್ಟೆ. ನನಗೆ ನಾನೇನೂ ಅಲ್ಲಿ ಕಳೆದುಕೊಳ್ಳುವಂಥದ್ದು ಕಾಣಲಿಲ್ಲ. ನಾನೇನೋ ಡಿಲೀಟ್ ಮಾಡಿ ನಿರಮ್ಮಳವಾಗಿ ಉಳಿದುಬಿಟ್ಟೆ. ಆದರೆ ನನ್ನ ಕೆಲವು ಆಪ್ತರು ‘ಯಾಕೆ ಹಾಗೆ ಮಾಡೋಕೆ ಹೋದೆ.ಅದು ಇದ್ದರೆ ನಿನ್ನ ಗಂಟೇನು ಹೋಗುತ್ತಿತ್ತು ‘ ಎಂದೆಲ್ಲ ಹೇಳಿ ಏನೋ ಭಾರಿ ದೊಡ್ಡ ಅನಾಹುತ ಘಟಿಸಿ ಹೋಯಿತೆಂಬನ್ತೆ ತಲೆಗೊಂದು ಸಲಹೆ ನೀಡಿ ನನಗಿಂತ ಜಾಸ್ತಿ ನನ್ನ ವಿಷಯದಲ್ಲಿ ತಲೆಬಿಸಿ ಮಾಡಿಕೊಂಡು ಬಿಟ್ಟಿದ್ದರು. ಕೆಲವರಂತೂ ವೀಸಾ ಪಾಸ್ ಪೋರ್ಟ್ ನಷ್ಟೇ ಮಹತ್ವವನ್ನು ಫೇಸ್ ಬುಕ್ –ಆರ್ಕುಟ್ ಗೆ ಆರೋಪಿಸಿದರು. ಇನ್ನೂ ಕೆಲವರು ಫೇಸ್ ಬುಕ್ –ಆರ್ಕುಟ್ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂಬಂತೆ ಮಾತಾಡಿಬಿಟ್ಟರು. ಅವರ ಕಳವಳದಲ್ಲಿ ನನಗೆ ಅರ್ಥವೇ ಕಾಣಲಿಲ್ಲ. ನನ್ನ ಪಾಲಿಗೆ ಅದು ‘ಡಿಲೀಟ್’ ಆಯ್ಕೆಯ ಮೇಲೆ ಬೆರಳ ತುದಿಯ ‘ಕ್ಲಿಕ್ ‘ಅಷ್ಟೇ.

ಅಸಲಿಗೆ ನಾನು ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆ ಶುರುಮಾಡಿದ್ದು ನನ್ನ ಸಿನಿಮಾ ಹವ್ಯಾಸಕ್ಕೆ ಪೂರಕವಾಗಿ. ಕೇವಲ ಕಾಂಟಾಕ್ಟ್ ಗಳ ಸಲುವಾಗಿ ಅವನ್ನೆಲ್ಲ ಶುರು ಮಾಡಿದ್ದು. ಖಾತೆ ತೆರೆದದ್ದು ವ್ಯರ್ಥವಾಗಲಿಲ್ಲ. ಹಲವಾರು ಜನಗಳ ಪರಿಚಯವಾಯಿತು. ಸಿನಿಮಾದ ವಿಷಯದಲ್ಲಿ ಆ ಪರಿಚಯಗಳು ನೆರವಿಗೆ ಬಂದವು. ಆ ಪರಿಚಯಸ್ತರೆಲ್ಲಾ ನನ್ನ ಮೊಬೈಲ್ ಲಿಸ್ಟ್ ನಲ್ಲಿ ಜಮೆಯಾಗಿದ್ದರೆ. ಈಗ ನನಗೆ ಈ ಆರ್ಕುಟ್ ಮತ್ತು ಫೇಸ್ ಬುಕ್ ಗಳ ಅವಶ್ಯಕತೆಯಿಲ್ಲ. ಯಾವ ಕಾರಣಗಳಿಗೆ ನಾನು ಅವುಗಳನ್ನ ಶುರು ಮಾಡಿದ್ದೇನೋ , ಆ ಕಾರಣಗಳೆಲ್ಲ ಈಗ ಕಾರಣಗಳಾಗಿ ಉಳಿದಿಲ್ಲ. ಅಂದುಕೊಂಡಿದ್ದು ಸಾಕಾರಗೊಂಡಿವೆ . ಈಗೀಗ ಈ ಫೇಸ್ ಬುಕ್ ಹಾಗು ಆರ್ಕುಟ್ ಕೇವಲ ಟೈಮ್ ವೇಸ್ಟಿನ ಸರಕುಗಳು. ಅಲ್ಲಿ ನನಗೆ ಯಾವ ದೊಡ್ಡ ಪ್ರೀತಿ ಹಾಗು ಖುಷಿಯ ಕಾರಣಗಳಿರಲಿಲ್ಲ. ಇದ್ದದ್ದು ಕೇವಲ ಲೆಕ್ಕಾಚಾರ. ಇನ್ಯಾಕೆ ಮುಲಾಜು? ಡಿಲೀಟ್ ಮಾಡಿಬಿಟ್ಟೆ.

ಸುಮ್ಮನೆ ಒಮ್ಮೆ ಮೇಲ್ ಚೆಕ್ ಮಾಡಲೆಂದು ಜಿ-ಮೈಲ್ ಓಪನ್ ಮಾಡಿದರೆ , ಅತ್ತ ಆರ್ಕುಟ್ ಹಾಗು ಫೇಸ್ ಬುಕ್ ಗಳು ಕೈಹಿಡಿದು ಎಳೆಯುತ್ತವೆ. ಅತ್ತ ಹೋಗಲೇ ಬೇಕು.ಹೋದ ಮೇಲೆ ಅಲ್ಲಿ ನೂರಾ ಎಂಟು ಅಪ್ಡೇಟ್ಸ್ ಗಳು . ಹಾಗೆ ಹೋಗಿ ಹೀಗೆ ಬರಲಿಕ್ಕೆ ಸಾಧ್ಯವೇ ಇಲ್ಲ. ಎಲ್ಲವನ್ನೂ ನೋಡಲೇಬೇಕು. ನೋಡಲೇಬೇಕೆಂಬ ನಿಯಮವೇನಿಲ್ಲ. ಕುತೂಹಲ ಮನುಷ್ಯ ಸಹಜ ಪ್ರಕೃತಿದತ್ತ ಗುಣ .ಬೇಕಾದ್ದು ಬೇಡದ್ದು ಎಲ್ಲವೂ ಅಲ್ಲಿ ಲಭ್ಯ. ಆದರೂ ನೋಡದೆ ಇರಲಾಗುವುದಿಲ್ಲ. ಅದು ಮನುಷ್ಯ ಸಹಜ ದೌರ್ಬಲ್ಯ. ನಡುವೆ ಹಾಳಾಗುವುದು ನಮ್ಮ ಅಮೂಲ್ಯ ಸಮಯ. ಸಮಯದ ಜೊತೆ ನಾವು. ನಮ್ಮ ಜೊತೆ ನಮ್ಮ ಕ್ರಿಯಾಶೀಲ ಸಾಧ್ಯತೆಗಳು.

ನಮ್ಮ ಮನೆಯ ಪಕ್ಕದ ಮನೆಯವರ ಜೊತೆ ಲೋಕಾಭಿರಾಮವಾಗಿ ಹರಟಿ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ. ನಾವಾಯಿತು ನಮ್ಮ ಪಾಡಾಯಿತು ಎಂಬುದು ಈಗಿನ ಆಧುನಿಕ ಪರಿ.ಮನೆಯ ಹತ್ತಿರದ ಬೇಕರಿಯವನನ್ನೋ , ಆಟೋ ಓಡಿಸುವವನನ್ನೋ , ಎಳ ನೀರು ಮಾರುವವನನ್ನೋ .ಪೇಪರ್ ಹಂಚುವ ಹುಡುಗನನ್ನೋ ನಾಲ್ಕು ಮಾತು ಪ್ರೀತಿಯಿಂದ .ಆಪ್ತತೆಯಿಂದ ಮಾತಾಡುವ, ಕಷ್ಟ ಸುಖ ಹೇಳಿ ಕೇಳಿ ಮಾಡುವ ಆರೋಗ್ಯವಂತ ರೂಢಿ ತುಂಬಾ ಕಡಿಮೆ. ನಮ್ಮೆದುರಿನ ಸುತ್ತ ಮುತ್ತಲನ್ನು ಬಿಟ್ಟು ಈ ಫೇಸ್ ಬುಕ್ ಹಾಗು ಆರ್ಕುಟ್ ಓಪನ್ ಮಾಡಿಕೊಂಡು ‘ ಹಾಯ್ ಊಟ ಆಯ್ತಾ. ತಿಂಡಿ ಆಯ್ತಾ .ಏನ್ ತಿಂದ್ರಿ.ಗುಡ್ ಮಾರ್ನಿಂಗ್.ಗುಡ್ ನೈಟ್ .’ ಕೇಳಿಕೊಂಡು ಹೇಳಿಕೊಂಡು ಯಾರೋ ಮುಖವೇ ಕಾಣದವರ ಜೊತೆ ಗಾಳಿ ಗೋಪುರ ಕಟ್ಟುವುದರಲ್ಲಿ ಯಾವ ಪುರುಷಾರ್ಥವಿದೆ ?

ಇನ್ನು ನನಗೆ ಸಮಸ್ಯೆಯಾಗಿ ಕಾಡಿದ್ದು ಈ ಹ್ಯಾಕರ್ಸ್ . ಎರಡು ವಾರದ ಕೆಳಗೆ ನನ್ನ ಫೇಸ್ ಬುಕ್ ಖಾತೆ ಹ್ಯಾಕ್ ಆಗಿ ಹೋಗಿತ್ತು. ನೋಡಿದರೆ ಯಾರೋ ಮುಂಬೈ ಆಸುಪಾಸಿನ ಪ್ರದೇಶದಿಂದ ನನ್ನ ಖಾತೆಗೆ ಕನ್ನ ಹಾಕಿದ್ದಾರೆಂಬ ಮಾಹಿತಿ ಸಿಕ್ಕಿತು. ಈ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳಲ್ಲಿ ಎಲ್ಲರಿಗೂ ‘ ಫ್ರೆಂಡ್ಸ್ ‘ ಎಂಬ ಹಣೆಪಟ್ಟಿ. ಕಾಲೆಳೆಯುವವರು, ಹಿತ ಶತ್ರುಗಳು , ಈ ಹ್ಯಾಕರ್ಸ್ ಕುಲದ ಕಳ್ಳರು ಎಲ್ಲರೂ ‘ಫ್ರೆಂಡ್ಸ್’. ಇದರ ಉಪಯೋಗ ಎಷ್ಟಿದೆಯೋ , ಬೇಡದ ತಲೆಬಿಸಿಯ ಸಂಗತಿಗಳೂ ಕೂಡ ಅಷ್ಟೇ ಇವೆ. ನಾನು ನನ್ನ ಪಾಲಿನ ಉಪಯೋಗ ಪಡೆದುಕೊಂಡು ತಲೆಬಿಸಿಯ ಸಾಧ್ಯತೆಯನ್ನ ಫೇಸ್ ಬುಕ್ ಹಾಗು ಆರ್ಕುಟ್ ಜೊತೆ ಡಿಲೀಟ್ ಮಾಡಿಬಿಟ್ಟೆ. ಈ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳ ಗೀಳಿಗೆ ಬಿದ್ದು ನನ್ನನ್ನು ನಾನು ಕಳೆದುಕೊಳ್ಳುವ ಅಪಾಯದಿಂದ ಸಕಾಲದಲ್ಲಿ ಪಾರಾದೆ. ಇವೆಲ್ಲ ಕೇವಲ ಟೈಮ್ ಪಾಸು ,ಮನರಂಜನೆ ; ಇದರಲ್ಲೇನಿದೆ ತಲೆಕೆಡಿಸಿಕೊಳ್ಳುವ ಸಂಗತಿಯೆಂದು ನಾವು ಸಮಜಾಯಿಷಿ ನೀಡಬಹುದು.ಆದರೆ ಒಂದು ಹಂತದ ನಂತರ ಇವೆಲ್ಲ ಚಟವಾಗಿ, ಗೀಳಾಗಿ ಬದಲಾಗುತ್ತವೆ ಎಂಬುದು ಕಟು ಸತ್ಯ.

ಆರ್ಕುಟ್ ನಲ್ಲಿ ನೂರೈವತ್ತು , ಅತ್ತ ಫೇಸ್ ಬುಕ್ಕನಲ್ಲಿ ಹತ್ತಿರ ಹತ್ತಿರ ನಾನೂರು ಮಂದಿ ಒಂದು ‘ಡಿಲೀಟ್’ ಜೊತೆ ಕ್ಷಣದಲ್ಲಿ ಖಾಲಿಯಾಗಿ ಹೋದರು ನನ್ನ ಜಗತ್ತಿನಿಂದ. ಅನಾಮಿಕನಾಗಿ , ಅದೃಶ್ಯನಾಗಿ ಯಾರ ಕೈಗೂ ಸಿಕ್ಕದೆ ನನ್ನ ಪಾಡಿಗೆ ನಾನು ಬದುಕುವಲ್ಲಿನ ಸುಖವನ್ನ ನಾನೀಗ ಮನಸಾರ ಅನುಭವಿಸುತ್ತಿದ್ದೇನೆ. ಸಂತೆಯೊಳಗೆ ದಿವ್ಯವಾದ ಏಕಾಂತದ ಸುಖ ನನ್ನ ಪಾಲಿಗೆ. ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕೆಂಬ ವಿವೇಚನೆಯನ್ನ ಸಮರ್ಥವಾಗಿ ಬಳಸಿಕೊಂಡ ತೃಪ್ತಿ ನನಗಿದೆ.

ಫೇಸ್ ಬುಕ್ ಹಾಗು ಆರ್ಕುಟ್ ಖಾತೆಗಳು ಡಿಲೀಟ್ ಆಗಿ ಹೋದವು. ನನಗೀಗ ನನ್ನ ಇಷ್ಟದ ಹಾಡು ಕೇಳಲಿಕ್ಕೆ, ಪುಸ್ತಕ ಓದಲಿಕ್ಕೆ , ಬರೆಯಲಿಕ್ಕೆ , ಹೊಸಾ ಕನಸು ಕಾಣಲಿಕ್ಕೆ ನನ್ನ ದಿನದ ಸಮಯದ ಖಾತೆಗೆ ಹೆಚ್ಚುವರಿಯಾಗಿ ಒಂದಿಷ್ಟು ಸಮಯಗಳು ಜಮೆಯಾಗುತ್ತಿವೆ. ಬಯಲಾಗಿದ್ದು ಸಾಕಾಗಿದೆ. ನನ್ನ ಅವಕಾಶದ ಮಿತಿಯಲ್ಲಿ ಮುಗಿಲಾಗಬೇಕು.

ನನ್ನ ಉದಾಹರಣೆ ನಿಮ್ಮದೂ ಆಗಬೇಕಿಲ್ಲ. ನನ್ನದೇ ಆದ ಒಂದು ಲೆಕ್ಕಾಚಾರದಲ್ಲಿ ,ಒಂದು ನಿರ್ದಿಷ್ಟ ಕಾರ್ಯ ಸಿದ್ಧಿಯ ಸಲುವಾಗಿ ನಾನು ಫೇಸ್ ಬುಕ್ ಹಾಗು ಆರ್ಕುಟ್ ಅಂಗಳಕ್ಕೆ ಕಾಲಿಟ್ಟದ್ದು. ನನ್ನ ಕೆಲಸವಾಯಿತು. ಫೇಸ್ ಬುಕ್ ಹಾಗು ಆರ್ಕುಟ್ ಡಿಲೀಟ್ ಆದವು. ಇನ್ನೊಂದು ಹೊಸಾ ಲೆಕ್ಕಾಚಾರ ಶುರುವಾಗುವ ತನಕ ನನಗೂ ಈ ಫೇಸ್ ಬುಕ್ ಹಾಗು ಆರ್ಕುಟ್ ಗಳಿಗೂ ಸಂಬಂಧವೇ ಇಲ್ಲ. ಇವೆಲ್ಲ ನನ್ನ ಬದುಕಿನ ಭಾಗಗಳು. ಆದರೆ ಇವುಗಳೇ ಬದುಕಲ್ಲ. ಇವೆಲ್ಲ ಇಲ್ಲದೆಯೂ ನಾನು ಬದುಕಬಲ್ಲೆ.ಇದು ನನ್ನ ಅಭಿಪ್ರಾಯ, ನನ್ನ ಅನುಭವ. ಅಷ್ಟೇ :) :).

Monday, December 13, 2010

ಜಗತ್ತಿಗೊಂದು ಪತ್ರ ...

ಪತ್ರ ೧ ....

ನಿನ್ನನ್ನು ಹೇಗೆ ಸಂಭೋದಿಸಲಿ ಎಂದು ತಿಳಿಯುತ್ತಿಲ್ಲ. ಆ ಕಾರಣಕ್ಕೆ ಕ್ಷಮೆ ಇದ್ದರೆ ಇರಲಿ. ಇರದಿದ್ದರೂ ಸರಿಯೇ.

ಈ ಪತ್ರವನ್ನ ನಿನಗೆ ಯಾಕಾಗಿ ಬರೆಯಬೇಕು? ಈ ಪ್ರಶ್ನೆ ಸಾವಿರ ಬಾರಿ ಕಾಡಿದೆ.ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ. ಬರೆಯಲೇ ಬೇಕೆಂದು ಅನ್ನಿಸಿದ್ದೇ ಉತ್ತರ ಎಂದುಕೊಂಡೆ. ನನ್ನ ಪತ್ರಕ್ಕೆ ಮಾರೋಲೆಯ ಹಂಗಿಲ್ಲ.ಬರೆಯುವುದಷ್ಟೇ ನನ್ನ ಕರ್ಮ. ಉಳಿದದ್ದು ನಿನ್ನ ಕರ್ಮ. ಗಮ್ಯ ಗೊತ್ತಿದ್ದರೂ ವಿಳಾಸವೇ ಇರದ ಪತ್ರವಿದು.ನೀನು ನೆಪ ಮಾತ್ರ.ಯಾರು ಬೇಕಾದರೂ ಓದಬಹುದು. ಅವರದಾಗಿಸಿಕೊಳ್ಳಬಹುದು. ಮೊದಲಿಗೆ ಅವಳು ನೆನಪಾದಳು. ಮನೆಯವರು ನೆನಪಾದರು. ನಾನು ನೆನಪಾದೆ. ಗೆಳೆಯರು .ಬಂಧುಬಳಗ, ನನ್ನವರು,ನನ್ನವರೆಂದು ಕೊಂಡವರು,ಅವರು ಇವರು ,ಏನೂ ಆಗದವರು .ಎಲ್ಲರೂ ನೆನಪಾದರು. ಕೊನೆಗೆ ‘ಜಗವೆಂಬೋ’ ನೀನು ನೆನಪಾದೆ. ಎಲ್ಲರನ್ನೂ ಒಳಗೊಳ್ಳುವ ಮಾಯೆ ನೀನು ನನ್ನನ್ನೂ ಸೇರಿಸಿ. ಆ ಕಾರಣಕ್ಕೆ ನಿನಗೇ ಈ ಪತ್ರವನ್ನ ಬರೆಯುತ್ತಿದ್ದೇನೆ. ಒಪ್ಪಿಸಿಕೋ. ಪತ್ರ ನಿನಗೆ ತಲುಪಿದರೆ ಖುಷಿಯಿಲ್ಲ. ತಲುಪುವುದೆಂಬ ನಿರೀಕ್ಷೆ ಮೊದಲೇ ಇಲ್ಲ. ಅಕಸ್ಮಾತ್ ಪತ್ರ ನಿನ್ನನ್ನು ತಲುಪಿ ನೀನು ಮಾರುತ್ತರ ಕೊಡುವ ದೊಡ್ಡ ಮನಸ್ಸು ಮಾಡಿದರೆ ನಿನ್ನ ಉತ್ತರ ಏನಿರಬಹುದೆಂಬ ‘ಕುತೂಹಲ ‘ಮಾತ್ರ ಇದ್ದೇ ಇದೆ. ಇಷ್ಟು ಪತ್ರಕ್ಕೆ ಪೀಠಿಕೆಯಾಯಿತು. ಈಗ ವಿಷಯಕ್ಕೆ ಬರುತ್ತೇನೆ.

ನಿನಗೆ ನಿನ್ನದೇ ಆದ ಸ್ವಂತ ಅಸ್ತಿತ್ವವೇ ಇಲ್ಲ.ನೀನು ಕೂಡ ನನ್ನಂತೆ,ನಮ್ಮೆಲ್ಲರಂತೆ.ನಮ್ಮೆಲ್ಲರ ಒಟ್ಟು ಮೊತ್ತ ನೀನು.ನಾವು ಬದಲಾದರೆ ನೀನೂ ಬದಲು.ನಾವು ನಿಂತ ನೀರಾದ ಘಳಿಗೆ ನೀನು ಕೆಸರು. ಆದರೆ ಎಷ್ಟು ಮಜಾ ನೋಡು.ನಾವು ಬದಲಾಗಲು ಸಿದ್ಧರೇ ಇಲ್ಲ. “ ಜಗತ್ತೇ ಹಿಂಗೆ,ಜಗತ್ತಿನಂತೆ ನಾವು.ವಾಸ್ತವ ,ವಾಸ್ತವ ಮುಖ್ಯ “ ಎಂದು ನಿನ್ನ ಕಡೆ ತೋರಿಸಿ ಜಾರಿ ಕೊಂಡು ಬಿಡುತ್ತೇವೆ.ನಾವ್ಯಾರೂ ನಾವಾಗಿ ಬದುಕುತ್ತಿಲ್ಲ. ಈಗ ಏನಾಗಿದೆ ನೋಡು. ನಾವೆಲ್ಲರೂ ಸ್ವಂತಿಕೆಯಿಲ್ಲದೆ ಬದುಕುತ್ತಿರುವ ಹೊತ್ತಿಗೆ ನೀನು ನಕಲಿಯಾಗಿ ಕಾಣುತ್ತಿದ್ದೀಯೆ. ಪಾಪ ನೀನು.ನಿನ್ನದಲ್ಲದ ತಪ್ಪಿಗೆ ನಕಲಿಯೆಂಬ ಹಣೆಪಟ್ಟಿ.ಅಸಲಿಗೆ ನೀನಾದರೂ ಏನು ಮಾಡಲು ಸಾಧ್ಯ ? ನಿನಗೆ ನಿನ್ನದೇ ಆದ ಸ್ವಂತ ಅಸ್ತಿತ್ವವೇ ಇಲ್ಲ ಎಂದಾದ ಮೇಲೆ ‘ ನಾನು ನಕಲಿಯಲ್ಲ ಅಸಲಿ ‘ ಎಂದು ಕೂಗಿ ಹೇಳಿ ನಿನ್ನ ಸ್ವಂತಿಕೆಯನ್ನ ಸಾಬೀತು ಪಡಿಸುವ ಅವಕಾಶವಾದರೂ ಎಲ್ಲಿ ? ಈ ವಿಷಯದಲ್ಲಿ ನೀನು ಅಸಹಾಯಕ. ಮೂಕ ಪ್ರೇಕ್ಷಕ. ಆ ಕಾರಣಕ್ಕೆ ನಿನ್ನ ಬಗೆಗೆ ನನ್ನಲ್ಲೊಂದು ಅನುಕಂಪವಿದೆ. ನೀನೇ ಪುಣ್ಯವಂತ. ಕೊನೆಪಕ್ಷ ನಾನಾದರೂ ಸಿಕ್ಕಿದ್ದೇನೆ ಅನುಕಂಪ ತೋರಿಸಲು. ನಮ್ಮ ಪಾಡು ನಾಯಿ ಪಾಡು. ನಮಗೆ ನಾವೇ ಸಾಂತ್ವನ .ನಮಗೆ ನಾವೇ ಎಲ್ಲ. ಸೋಲು ಇಲ್ಲಿ ಯಾರಿಗೂ ಬೇಕಿಲ್ಲ. ಮುಂದಿನ ಪೀಳಿಗೆಯ ಮಗು ಹುಟ್ಟುತ್ತಲೇ ಎದ್ದು ಓಡಲು ಶುರುವಿಟ್ಟುಕೊಂಡರೆ ಅಚ್ಚರಿಯಿಲ್ಲ. ಸಂಘರ್ಷ ಬದುಕಿನ ಭಾಗ ನಿಜ. ಆದರೆ ಈಗ ಸಂಘರ್ಷವೇ ಬದುಕು ಎಂಬಲ್ಲಿ ಬಂದು ನಿಂತಿದ್ದೇವೆ. ಕಾಯುವ ತಾಳ್ಮೆ ಇಲ್ಲ. ಇಲ್ಲಿ ಎಲ್ಲವೂ ಇನ್ಸ್ಟಂಟ್. ನಮ್ಮ ನೆರಳನ್ನೂ ನೆಚ್ಚಿಕೊಳ್ಳಲಾರದಷ್ಟು ಅಪನಂಬಿಕೆಯಲ್ಲಿ ನಾವು ಬದುಕುತ್ತಿದ್ದೇವೆ. ನಾವು ತುಂಬಾ ಪ್ರಾಕ್ಟಿಕಲ್ಲು. ನಮ್ಮ ಭಾವಕೋಶದಲ್ಲಿ ‘ನಂಬಿಕೆ ‘ಎನ್ನುವುದಕ್ಕೆ ‘ಆತ್ಮಹತ್ಯೆ ‘ಎಂಬ ಹೊಸ ಅರ್ಥವಿದೆ. ’ನಂಬಿ ಕೆಟ್ಟವರಿಲ್ಲ’ ಎಂಬ ದಾಸವಾಣಿಯಲ್ಲಿ ದಾಸರ ಆಣೆ ನಂಬಿಕೆ ಉಳಿದಿಲ್ಲ.

ಎಲ್ಲಾದರೂ ಭೋಧಿವೃಕ್ಷವಿದ್ದರೆ ತೋರಿಸು. ಬುದ್ಧನಾಗುವ ಹಂಬಲವಿಲ್ಲ. ಅಪ್ಪ ನೆಟ್ಟ ಆಲದ ಮರದಡಿ ನೇಣು ಹಾಕಿಕೊಳ್ಳುವುದಕ್ಕಿಂತ ಭೋಧಿವೃಕ್ಷದ ನೆರಳಿಗೆ ಹೋಗಿ ಕೊಂಚ ಹೊತ್ತು ವಿರಮಿಸಿ ಎದ್ದು ಬರುವುದು ವಾಸಿ. ಕೊನೆಗೆ ನೇಣು ಹಾಕಿಕೊಳ್ಳುವ ಪ್ರಸಂಗ ಎದುರಾದರೂ ಅಪ್ಪ ನೆಟ್ಟ ಆಲದ ಮರಕ್ಕಿಂತ ‘ಭೋಧಿ ವೃಕ್ಷವೇ ಮೇಲು. ಕಡೆಪಕ್ಷ ಆತ್ಮಹತ್ಯೆಯಲ್ಲಾದರೂ ಸ್ವಂತಿಕೆ ಮೆರೆದೆ ಎಂಬ ತೃಪ್ತಿ ಅಲ್ಲಿ ಸಿಗುತ್ತೆ .

ಈವತ್ತಿಗೆ ಇಷ್ಟು ಸಾಕು. ನನ್ನ ಮಾತುಗಳಿಗೆ ಕಿವಿಯಾಗಲು ನಮ್ಮಲ್ಲಿ ಯಾರಿಗೂ ಪುರುಸೊತ್ತಿಲ್ಲ. ಈ ಪತ್ರ ನಿನಗೆ ಸಿಕ್ಕು ,ನೀನು ಪುರುಸೊತ್ತು ಮಾಡಿಕೊಂಡು ಓದಿರುತ್ತೀಯ ಎನ್ನುವ ನಂಬಿಕೆ ನನ್ನದು. ಆ ನಂಬಿಕೆಯಲ್ಲಿ ಔಪಚಾರಿಕವಾಗಿ ಒಂದು ಧನ್ಯವಾದ. ಮತ್ತೆ ಸಿಗುತ್ತೇನೆ ಮುಂದಿನ ಪತ್ರದೊಂದಿಗೆ.

ಇಂತಿ ನಿನ್ನವನೇ ಆದ

ನೀನೇ ಆದ

ನಾನು

( ನಾನು ‘ಸಂಭೋದಿಸಲಿ’ ಎಂದು ಬರೆದಿದ್ದೇನೆ . ನಾನು ಬರೆದದ್ದು ಸರಿಯೋ ತಪ್ಪೋ ಎಂಬ ಗೊಂದಲ ನನಗಿದೆ. ದಯವಿಟ್ಟು ತಪ್ಪಿದ್ದರೆ ಹೇಳಿ ಮತ್ತು ಸರಿಯಾದ ಕಾಗುಣಿತ ನನಗೆ ತಿಳಿಸಿ.)